‘ಶ್ರೀಕೃಷ್ಣ’ ಈವಾರ ಬಿಡುಗಡೆ
ಈ ಹಿಂದೆ ಬ್ರಹ್ಮರಾಕ್ಷಸ ಚಿತ್ರವನ್ನು ನಿರ್ದೇಶಿಸಿದ್ದ ಶಂಕರ್ ರಾಜ ವರ್ಮ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಮತ್ತೊಂದು ಸಾಮಾಜಿಕ ಕಥಾನಕ ಒಳಗೊಂಡ ಚಿತ್ರ ‘ಶ್ರೀಕೃಷ್ಣ’ ಈವಾರ ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಬೃಹಸ್ಪತಿ ಕ್ರಿಯೇಷನ್ಸ್ ಬ್ಯಾನರ್ ಅಡಿ ಶಂಕರ್ ರಾಜ ವರ್ಮ ಮತ್ತು ಅಜಯ್ ಕುಮಾರ್ ಪಿ.ಎಂ. ಅವರುಗಳು ಜಂಟಿಯಾಗಿ ನಿರ್ಮಿಸಿರುವ ‘ಶ್ರೀಕೃಷ್ಣ’ ಚಿತ್ರಕ್ಕೆ ಶಿವಲಿಂಗಯ್ಯ ಸಿ.ಎಂ, ಉಲ್ಲಾಸ್ ಕೆ.ಸಿ.ಎಸ್, ಚಾಣುಕ್ಯ ಆರ್, ‘ನೆನಪಿರಲಿ’ ಮೋಹನ್ ಮತ್ತು ಲತಾ ಮಂಜುನಾಥ್ ಅವರುಗಳು ಸಹ ನಿರ್ಮಾಪಕರಾಗಿ ಕೈಜೋಡಿಸಿದ್ದಾರೆ.

‘ಮೂವರು ಅನಾಥರ ಜೀವನದಲ್ಲಿ ಏನೆಲ್ಲಾ ಘಟನೆಗಳು ನಡೆಯುತ್ತವೆ ಎಂಬುದನ್ನು ಈ ಚಿತ್ರದಲ್ಲಿ ಕುತೂಹಲಕಾರಿಯಾಗಿ ಹೇಳಲಾಗಿದ್ದು, ಇಲ್ಲಿ ನಾಯಕಿಯೂ ಒಬ್ಬ ಅನಾಥೆಯಾಗಿರುತ್ತಾಳೆ. ಹೀಗಿರುವಾಗ, ಅವರ ಜೀವನದಲ್ಲೊಂದು ಘಟನೆ ನಡೆಯುತ್ತದೆ. ಇದರಿಂದ ಅವರು ಜೈಲಿಗೂ ಹೋಗಬೇಕಾಗುತ್ತದೆ. ಅಲ್ಲಿಂದ ತಪ್ಪಿಸಿಕೊಂಡು ಬಂದ ನಂತರ ಅವರು ಏನೆಲ್ಲಾ ಮಾಡುತ್ತಾರೆ ಎನ್ನುವುದೇ ಶ್ರೀಕೃಷ್ಣ ಚಿತ್ರದ ಕಥಾಹಂದರ. ಈ ಚಿತ್ರದ ಜನಪ್ರಿಯ ‘ಉಧೋ ಉಧೋ ಯಲ್ಲವ್ವ’ ಹಾಡಿಗೆ ಎಂ.ಎಸ್. ತ್ಯಾಗರಾಜ್ ಸಾಹಿತ್ಯ ರಚಿಸಿ ಸಂಗೀತ ಸಂಯೋಜಿಸುವ ಜತೆಗೆ ಧ್ವನಿಯಾಗಿದ್ದಾರೆ.
‘ಶ್ರೀಕೃಷ್ಣ’ ಚಿತ್ರದಲ್ಲಿ ಶಂಕರ್ ರಾಜ ವರ್ಮ ನಾಯಕನಾಗಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ಹುಬ್ಬಳ್ಳಿ ಮೂಲದ ಚೈತ್ರ ತೋಟದ ನಟಿಸಿದ್ದಾರೆ.

ಜೊತೆಗೆ ಪ್ರದೀಪ್ ಪೂಜಾರಿ, ಭುವನ್ ಗೌಡ, ಸ್ನೇಹಾ, ಈಶ್ವರ್ ಶೆಟ್ಟಿ ಮುಂತಾದವರು ನಟಿಸಿದ್ದಾರೆ.
ನಿರ್ದೇಶಕರೇ ಚಿತ್ರದ ಕಥೆ, ಚಿತ್ರಕಥೆ ಬರೆದಿದ್ದು, ಎಂ.ಎಸ್. ತ್ಯಾಗರಾಜ್ ಅವರ ಸಾಹಿತ್ಯ ಮತ್ತು ಸಂಗೀತ ಸಂಯೋಜನೆ, ಅನಿರುದ್ಧ್ ಅವರ ಛಾಯಾಗ್ರಹಣ ಹಾಗೂ ಕೀರ್ತಿರಾಜು ಅವರ ಸಂಕಲನ ಶ್ರೀಕೃಷ್ಣ ಚಿತ್ರಕ್ಕಿದೆ.








