ಒಂದೇ ವೇದಿಕೆಯಲ್ಲಿ 3 ಚಿತ್ರಗಳಿಗೆ ಚಾಲನೆ, ಸೀತಾ ರಾಮ ರಾಜು, ದರ್ಶನ ಸೇರಿ ಒಟ್ಟಿಗೆ ಮೂರು ಚಿತ್ರಗಳಿಗೆ ಮುಹೂರ್ತ

ಸೋಮವಾರ ಬೆಳಿಗ್ಗೆ ಗವಿಪುರದ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಅರುಣಕುಮಾರ್ ಅವರ ಮಾಲೀಕತ್ವದ
ಮ್ಯಾಟ್ರಿಕ್ ಮೂವೀ ಮೇಕರ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಮೂರು ಚಿತ್ರಗಳಿಗೆ ಒಟ್ಟಿಗೇ ಚಾಲನೆ ನೀಡಲಾಯಿತು. ಆ ಮೂರು ಚಿತ್ರಗಳು ಯಾವುವೆಂದರೆ ಕೀರ್ತಿ ಕೃಷ್ಣ ಅವರ ನಿರ್ದೇಶನದ ಸೀತಾ ರಾಮ ರಾಜು, ಸ್ವಸ್ತಿಕ್ ಅವರ ನಿದೇಶನದ ದರ್ಶನ ಹಾಗೂ ಕುಮಾರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದ ಪ್ರಾರಂಭೋತ್ಸವ ನಡೆಯಿತು,


ಸೀತಾರಾಮ ರಾಜು ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ಕಾರ್ತೀಕ್ ಮಹೇಶ್ ನಾಯಕನಾಗಿದ್ದು, ನಾಯಕಿಯಾಗಿ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದಾರೆ, ಉಳಿದಂತೆ ಆರ್ಮುಗಂ ರವಿಶಂಕರ್, ಜಗಪ್ಪ, ಮಹಾನಟಿ ಖ್ಯಾತಿಯ ದೀಪಿಕಾ ನಟಿಸುತ್ತಿದ್ದಾರೆ, ನಿರ್ದೇಶಕ ಕೀರ್ತಿ ಕೃಷ್ಣ ಮಾತನಾಡುತ್ತ ಸೀತಾ ರಾಮನ ಜತೆಗೆ ಹನುಮನಾಗಿ ರಾಜು ಪಾತ್ರವೂ ಬರುತ್ತದೆ. ಚಿಕ್ಕಮಗಳುರು ಬೆಂಗಳೂರು ಸುತ್ತ ನಡೆಯುವ ಕಥೆಯಿದು ಎಂದು ಹೇಳಿದರು, ನಿರ್ಮಾಪಕ ಅರುಣ್‌ಕುಮಾರ್ ಮಾತನಾಡಿ ನಮಗೆ ಚಿತ್ರ ನಿರ್ಮಾಣ ಮಾಡಬೇಕೆಂಬ ಆಸೆ ತುಂಬಾ ವರ್ಷಗಳಿಂದ ಇತ್ತು, ಸಾಕಷ್ಟು
ಕಥೆಗಳನ್ನು ಕೇಳಿದ್ದೇವೆ, ಅದೀಗ ಕಾರ್ಯರೂಪಕ್ಕೆ ಬರುತ್ತಿದೆ ಎಂದರು,

ಸಹ ನಿರ್ಮಾಪಕಿ ಭವ್ಯಅರುಣ್‌ಕುಮಾರ್ ಮಾತನಾಡಿ ಹಲವಾರು ವರ್ಷದಿಂದ ಸುಮಾರು ಕಥೆಗಳನ್ನು ಕೇಳಿದ್ದೇವೆ, ಅದರಲ್ಲಿ ಈ ಮೂರು ಕಥೆಗಳು ನಮಗೆ ತುಂಬಾ ಹಿಡಿಸಿದವು, ಹಾಗಾಗಿ ಇಂದು ಪ್ರಾರಂಭಿಸಿದ್ದೇವೆ ಎಂದರು, ನಾಯಕಕಾರ್ತೀಕ್ ಮಹೇಶ್ ಮಾತನಾಡುತ್ತ ಒಂದೇ ದಿನ 3 ಸಿನಿಮಾ ಪ್ರಾರಂಭಿಸುವುದು ಸುಲಭದ ಮಾತಲ್ಲ, ನನಗೆ ತುಂಬಾ ಕಾಡಿದಂಥ ಕಥೆ ಈ ಚಿತ್ರದ್ದು. ಒಂದು ಸುಂದರವಾದ ಲವ್ ಸ್ಟೋರಿಯೂ ಇದರಲ್ಲಿದೆ ಎಂದು ಹೇಳಿದರು, ನಾಯಕಿ ಪ್ರಿಯಾಂಕಾ ಕುಮಾರ್ ಮಾತನಾಡಿ ಇದೊಂದು ಎಮೋಷನಲ್ ಲವ್‌ಸ್ಟೋರಿ, ನನ್ನ ಪಾತ್ರಕ್ಕೆ ತುಂಬಾ ಲೇರ‍್ಸ್ ಇದೆ ಎಂದು ಹೇಳಿದರು.

ನಟ ರವಿಶಂಕರ್ ಮಾತನಾಡಿ ನಿರ್ದೇಶಕ ಕೀರ್ತಿ ಹಾರ್ಡ್ ವರ್ಕ್ ಮಾಡೋ
ಹುಡುಗ, ತುಂಬಾ ಚೆನ್ನಾಗಿ ಕಥೆ ಮಾಡಿಕೊಂಡಿದ್ದಾರೆ, ಕೆಲವು ಸೀನ್‌ಗಳನ್ನು ನನಗೆ ಹೇಳಿದ್ದಾರೆ, ಡೈಲಾಗ್‌ಗಳೂ
ಅದ್ಭುತವಾಗಿವೆ ಎಂದು ಹೇಳಿದರು, ಸಂಭಾಷಣೆ ರಚಿಸಿದ ಕ್ರಾಂತಿಕುಮಾರ್, ಸಂಗೀತ ನಿರ್ದೇಶಕ ರಾಘವೇಂದ್ರ
ವಿ, ಛಾಯಾಗ್ರಾಹಕ ಅಭಿಲಾಶ್ ಕಳತಿ ಮುಂತಾದವರು ಸೀತಾರಾಮ ರಾಜು ಚಿತ್ರದಲ್ಲಿ ತಮ್ಮ ಕೆಲಸದ ಕುರಿತಂತೆ
ಮಾತನಾಡಿದರು,
ಇನ್ನು ಸ್ವಸ್ತಿಕ್ ಅವರ ನಿದೇಶನದಲ್ಲಿ ಮೂಡಿಬರುತ್ತಿರುವ ದರ್ಶನ ಚಲನಚಿತ್ರಕ್ಕೂ ಇದೇ ಸಂದರ್ಭದಲ್ಲಿ ಚಾಲನೆ
ನೀಡಲಾಯಿತು, ಈ ಚಿತ್ರದಲ್ಲಿ ಚೌಕೀದಾರ್ ಖ್ಯಾತಿಯ ಪೃಥ್ವಿ ಅಂಬಾರ್ ನಾಯಕನಾಗಿ ನಟಿಸುತ್ತಿದ್ದು, ನಾಯಕಿ ಪಾತ್ರದಲ್ಲಿ
ನಿಶಾ ರವೀಂದ್ರ ಅವರು ಕಾಣಿಸಿಕೊಳ್ಳಲಿದ್ದಾರೆ.

ಮ್ಯಾಟ್ರಿಕ್ ಮೂವೀ ಮೇರ‍್ಸ್ ಅಡಿಯಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ.
ನಿರ್ದೇಶಕ ಸ್ವಸ್ತಿಕ್ ಮಾತನಾಡುತ್ತ ಇದೊಂದು ಕಾಮಿಡಿ ಡ್ರಾಮಾ ಜಾನರ್ ಚಿತ್ರ. ಪ್ರಥಮ ಪ್ರಯತ್ನದ ಚಿತ್ರವೂ ಹೌದು, ಕಥೆ ಕೇಳಿ ಮೆಚ್ಚಿಕೊಂಡು ನಿರ್ಮಾಣಕ್ಕೆ ಮುಂದಾದ ಅರುಣ್ ಕುಮಾರ್ ಹಾಗೂ ಭವ್ಯ ಮೇಡಂಗೆ
ಕೃತಜ್ಞತೆಗಳು. ಬೆಂಗಳೂರು ಸುತ್ತಮುತ್ತ ನಮ್ಮ ಚಿತ್ರದ ಚಿತ್ರೀಕರಣ ನಡೆಯಲಿದೆ, ಗೌರವ ಶೆಟ್ಟಿ , ಸಂತು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಇದೇ ತಿಂಗಳ ೮ ರಿಂದ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ ಎಂದರು,
ನಾಯಕ ಪೃಥ್ವಿ ಅಂಬಾರ್ ಮಾತನಾಡಿ ತಮ್ಮ ಪಾತ್ರದ ಬಗ್ಗೆ ವಿವರಿಸಿದರು, ನಾಯಕಿ ನಿಶಾ ರವೀಂದ್ರ ಮಾತನಾಡಿ ಈ ಚಿತ್ರದಲ್ಲಿ ನಾನು ಪ್ರೀತಿ ಎಂಬ ಕ್ಯೂಟ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದರು.

ನಟ ತಬಲಾನಾಣಿ ಮಾತನಾಡಿ ಈ ಚಿತ್ರದಲ್ಲಿ
ನಾನು ಬಂಗಾರಪ್ಪ ಎಂಬ ಪಾತ್ರ ಮಾಡುತ್ತಿದ್ದು ನನಗೆ ಇಬ್ಬರು ಹೆಣ್ಣು ಮಕ್ಕಳೂ ಇರುತ್ತಾರೆ ಎಂದರು,
ನಿರ್ಮಾಪಕ ಅರುಣ್‌ಕುಮಾರ್ ಮಾತನಾಡಿ ಈ ಮೂರೂ ಚಿತ್ರಗಳು ಈ ಹಂತಕ್ಕೆ ಬರುವಲ್ಲಿ ಲೋಕೇಶ್ ಅವರದು ಬಹುಮುಖ್ಯ ಪಾತ್ರವಿದೆ. ಮೂರೂ ಕಥೆಗಳಲ್ಲಿ ಒಂದೊಂದು ವಿಶೇಷತೆಯಿದೆ, ಹಾಗಾಗಿ ಎಲ್ಲಾ ಚಿತ್ರಗಳನ್ನು ಒಟ್ಟಿಗೇ ಪ್ರಾರಂಭಿಸಿದ್ದೇವೆ ಎಂದು ಹೇಳಿದರು, ನಟರಾದ ಗೌರವ ಶೆಟ್ಟಿ ತಮ್ಮ ಪಾತ್ರದ ಕುರಿತು ವಿವರಿಸಿದರು,
ಇದೇ ವೇದಿಕೆಯಲ್ಲಿ ಲವ್‌ಯು ಮುದ್ದು ಖ್ಯಾತಿಯ ನಿರ್ದೇಶಕ ಕುಮಾರ್ ನಿರ್ದೇಶನದ
ಚಿತ್ರಕ್ಕೂ ಸಹ ಚಾಲನೆ ದೊರೆಯಿತು, ಈ ಚಿತ್ರದಲ್ಲಿ ನಟ ತಬಲಾನಾಣಿ ಅವರ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರವಿನ್ನೂ ಪ್ರಾಥಮಿಕ ಹಂತದಲ್ಲಿದ್ದು ಉಳಿದ ಕಲಾವಿದರ ಹಾಗೂ ತಾಂತ್ರಿಕ ವರ್ಗದ ಆಯ್ಕೆ ನಡೆಯಬೇಕಿದೆ,
ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಕುಮಾರ್ ಎದ್ದೇಳು ಮಂಜುನಾಥ ಚಿತ್ರದಲ್ಲಿ ತಬಲಾನಾಣಿ ಅವರ ಪಾತ್ರ ನನ್ನ ಮನಸನ್ನು ತುಂಬಾ ದಿನಗಳಿಂದ ಕಾಡುತ್ತಿತ್ತು, ಅದೇ ಪಾತ್ರವನ್ನು ಈ ಚಿತ್ರದಲ್ಲೂ ಮುಂದುವರೆಸುತ್ತಿದ್ದೇವೆ, ಆದರೆ ಆ
ಕಥೆಗೂ ಈ ಚಿತ್ರದ ಕಥೆಗೂ ಯಾವುದೇ ಸಂಬಧವಿಲ್ಲ, ಆ ಪಾತ್ರದ ಸುತ್ತ ನಡೆಯುವ ಕಥೆಯಿದು. ಪ್ರೇಕ್ಷಕರನ್ನು ನಗಿಸಲೇಬೇಕು ಅಂತ ಮಾಡ್ತಿರುವ ಚಿತ್ರ ಎಂದು ಹೇಳಿದರು,

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor