Teaser and songs of the film Nanna Magale Super Star unveiled. “ನನ್ನ ಮಗಳೇ ಸೂಪರ್ ಸ್ಟಾರ್” ಚಿತ್ರದ ಟೀಸರ್ ಹಾಗೂ ಹಾಡುಗಳ ಅನಾವರಣ”

ಹನಿ ಫಿಲಂಸ್ ಲಾಂಛನದಲ್ಲಿ ಎನ್ ಎ ಶಿವಕುಮಾರ್(ಕುಮಾರ್ ನೊಣವಿನಕೆರೆ) ನಿರ್ಮಿಸಿರುವ, ಆಯುರ್ ನಿರ್ದೇಶಿಸಿರುವ ಹಾಗೂ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗಿದ್ದ ಜನಪ್ರಿಯ ಧಾರಾವಾಹಿ “ಸೀತಾರಾಮ” ಸೀರಿಯಲ್ ನ ಮೂಲಕ ನೋಡುಗರ ಮನ ಗೆದ್ದಿದ್ದ ಬೇಬಿ ರೀತು ಸಿಂಗ್ ಪ್ರಮುಖಪಾತ್ರದಲ್ಲಿ ನಟಿಸಿರುವ ಮತ್ತು “ಭಜರಂಗಿ 2” ಚಿತ್ರದ ಖ್ಯಾತಿಯ ಚೆಲುವರಾಜ್ ಹಾಗು ಸಂಭ್ರಮಶ್ರೀ ನಾಯಕ – ನಾಯಕಿಯಾಗಿ ಅಭಿನಯಿಸಿರುವ “ನನ್ನ ಮಗಳೇ ಸೂಪರ್ ಸ್ಟಾರ್” ಚಿತ್ರದ ಟೀಸರ್ ಹಾಗೂ ಹಾಡುಗಳ ಅನಾವರಣ ಸಮಾರಂಭ ಇತ್ತೀಚೆಗೆ ನೆರವೇರಿತು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಡಾ||ಜಯಮಾಲ, ಕನ್ನಡ ನಿರ್ಮಾಪಕರ ಸಂಘದ ಅಧ್ಯಕ್ಷರಾದ ಎಂ.ಜಿ.ರಾಮಮೂರ್ತಿ, ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಟೀಸರ್ ಅನಾವರಣ ಮಾಡಿದರು. ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಸುಂದರರಾಜ್, ಸಾಹಿತಿ ಬಿ.ಆರ್ ಲಕ್ಷ್ಮಣರಾವ್ ಮತ್ತು ಪರಿಸರ ಪ್ರೇಮಿ ರೇವತಿ ಕಾಮತ್ ಹಾಡುಗಳನ್ನು ಬಿಡುಗಡೆಗೊಳಿಸಿದರು. ಹಾಡುಗಳು ಸಿರಿ ಮ್ಯೂಸಿಕ್ ನಲ್ಲಿ ಲಭ್ಯವಿದೆ. ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿದ ನಂತರ ಮಾತನಾಡಿದ ಗಣ್ಯರು ಚಿತ್ರ ಯಶಸ್ವಿಯಾಗಲೆಂದು ಹಾರೈಸಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.

ನಾನು ಮೂಲತಃ ಸಂಕಲನಕಾರ. ನಿರ್ದೇಶಕನಾಗಿ ಇದು ಮೊದಲ ಚಿತ್ರ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯನ್ನು ನಾನೇ ಬರೆದಿದ್ದೇನೆ. ಅಪ್ಪ – ಅಮ್ಮನಿಗೆ‌ ತಮ್ಮ ಮಕ್ಕಳು ಸೂಪರ್ ಸ್ಟಾರ್ ಆಗಬೇಕೆಂಬ ಕನಸು. ಜೊತೆಗೆ ತಾವು ಅಂದುಕೊಂಡಂತೆ ಅವರು ಇರಬೇಕು ಎಂಬ ಆಸೆ. ಅದರಲ್ಲೂ ಈ ಸ್ವಭಾವ ತಾಯಿಗೆ ಸ್ವಲ್ಪ ಹೆಚ್ಚು. ಆದರೆ ಮಕ್ಕಳಿಗೂ ಅವರದೇ ಆಸೆ ಇರುತ್ತದೆ. ನಿಮ್ಮ ಆಸೆಯನ್ನು ಅವರ ಮೇಲೆ ಬಲವಂತವಾಗಿ ಅವರ ಮೇಲೆ ಹೇರಬೇಡಿ. ಅದರಿಂದ ಮಕ್ಕಳು ಏನೆಲ್ಲಾ ತೊಂದರೆ ಅನುಭವಿಸುತ್ತಾರೆ ಎಂಬ ಅಂಶವೇ ಈ ಚಿತ್ರದ ಕಥಾಹಂದರ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಬಿ.ಆರ್.ಲಕ್ಷ್ಮಣರಾವ್ ಅವರೆ ಮೂರು ಹಾಡುಗಳನ್ನು ಬರೆದಿದ್ದಾರೆ. ಕೆವಿನ್ ಸಂಗೀತ ನೀಡಿದ್ದಾರೆ ಎಂದು ನಿರ್ದೇಶಕ ಆಯುರ್ ತಿಳಿಸಿದರು.


‌‌‌ ‌‌‌ ‌‌‌‌ ಹದಿನೈದು ವರ್ಷಗಳ ಹಿಂದೆ ನಾನು “ಮಹಾಭಾರತ” ಧಾರಾವಾಹಿಯಲ್ಲಿ ದುರ್ಯೋಧನನ ಪಾತ್ರ ಮಾಡಿದ್ದೆ. ಆಗ ನನಗೆ ಮೇಕಪ್ ಮಾಡಿದ್ದೆ ಕುಮಾರ್ ಅವರು. ಈವರೆಗೂ ವಿಲನ್ ಪಾತ್ರಗಳಲ್ಲಿ ಗುರುತಿಸಿಕೊಳ್ಳುತ್ತಿದ್ದ ನಾನು ಈ ಚಿತ್ರದ ಮೂಲಕ‌ ನಾಯಕನಾಗಿದ್ದೇನೆ ಹಾಗೂ ಈವರೆಗೂ ಮಾಡಿರದ ಪಾತ್ರ ಮಾಡಿದ್ದೇನೆ ಎಂದರು ನಟ ಚಲುವರಾಜ್.

ನಿರ್ದೇಶಕರು ಹೇಳಿದ ಹಾಗೆ ಪೋಷಕರು ಹಾಗೂ ಮಕ್ಕಳು ನೋಡಲೇ ಬೇಕಾದ ಚಿತ್ರವಿದು. ನಾನು ಈ ಚಿತ್ರದ ನಾಯಕಿ. ಬೇಬಿ ರೀತುಸಿಂಗ್ ತಾಯಿಯಾಗಿ ಅಭಿನಯಿಸಿದ್ದೇನೆ ಎಂದು ನಟಿ ಸಂಭ್ರಮಶ್ರೀ ಹೇಳಿದರು.

ನಮ್ಮ ಹನಿ ಫಿಲಂ ಮೇಕರ್ಸ್ ನಿರ್ಮಾಣದ ಮೂರನೇ ಚಿತ್ರವಿದು. ಸಮಾಜಕ್ಕೆ ಉತ್ತಮ ಸಂದೇಶ ನೀಡಲು ಹೊರಟಿರುವ ಈ ಚಿತ್ರದ ಟೀಸರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಈ ಚಿತ್ರವನ್ನು ಮುಂದಿನ ತಿಂಗಳು ಬಿಡುಗಡೆ ಮಾಡುವ ಸಿದ್ದತೆ ನಡೆಸಿದ್ದೇನೆ ಎಂದರು ನಿರ್ಮಾಪಕ ಎನ್ ಎ ಶಿವಕುಮಾರ್.

ಸಂಗೀತ ನಿರ್ದೇಶಕ ಕೆವಿನ್ ಹಾಡುಗಳ ಬಗ್ಗೆ ವಿವರಣೆ ನೀಡಿದರು. ನಾನು ಈ ಚಿತ್ರದ ಮೂರು ಹಾಡುಗಳನ್ನು ಬರೆದಿದ್ದೇನೆ. ಕೆವಿನ್ ಉತ್ತಮವಾಗಿ ಸಂಗೀತ ಸಂಯೋಜನೆ ಮಾಡಿದ್ದಾರೆ ಎಂದು ಸಾಹಿತಿ ಬಿ.ಆರ್ ಲಕ್ಷ್ಮಣ್ ರಾವ್ ಹೇಳಿದರು.‌ ತಮ್ಮ ಪಾತ್ರದ ಕುರಿತು ನಟ ವಿಕ್ರಮ್ ಸೂರಿ ವಿವರಣೆ ನೀಡಿದರು. ಛಾಯಾಗ್ರಾಹಕರಾದ ರಾಘವೇಂದ್ರ ರೆಡ್ಡಿ, ಸಚಿನ್ ಹಾಗೂ ಸಂಕಲನಕಾರ ರಾಘವ ಅರ್ಜುನ್ ಡೋಣಿ ಹಾಗೂ ಹಿರಿಯ ಪ್ರಸಾದನ ಕಲಾವಿದರಾದ ರಾಮಕೃಷ್ಣ ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor