ಧೀರನ್ ರಾಮ್‌ಕುಮಾರ್ ಅಭಿನಯದ ‘ಪಬ್ಬಾರ್’ ಸಿನಿಮಾ ಚಿತ್ರೀಕರಣ ಪೂರ್ಣ: ಶೀಘ್ರದಲ್ಲೇ ಬೆಳ್ಳಿಪರದೆಗೆ

​ಕನ್ನಡ ಚಿತ್ರರಂಗದಲ್ಲಿ ಭರವಸೆಯ ನಟನಾಗಿ ಗುರುತಿಸಿಕೊಂಡಿರುವ ಡಾ. ರಾಜ್‌ಕುಮಾರ್ ಅವರ ಮೊಮ್ಮಗ ಧೀರನ್ ರಾಮ್‌ಕುಮಾರ್ ಅಭಿನಯದ ಬಹುನಿರೀಕ್ಷಿತ ‘ಪಬ್ಬಾರ್’ ಸಿನಿಮಾದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ‘ಶಾಖಾಹಾರಿ’ ಚಿತ್ರದ ಮೂಲಕ ಪ್ರೇಕ್ಷಕರ ಮತ್ತು ವಿಮರ್ಶಕರ ಗಮನ ಸೆಳೆದಿದ್ದ ನಿರ್ದೇಶಕ ಸಂದೀಪ್ ಸುಂಕದ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ‘ಗೀತಾ ಪಿಕ್ಚರ್ಸ್’ ಬ್ಯಾನರ್ ಅಡಿಯಲ್ಲಿ ಗೀತಾ ಶಿವರಾಜ್‌ಕುಮಾರ್ ಅವರು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.

ಬೆಂಗಳೂರು, ಮೈಸೂರು, ಮಡಿಕೇರಿಯ ರಮಣೀಯ ತಾಣಗಳು ಹಾಗೂ ಹಿಮಾಚಲ ಪ್ರದೇಶದ ಮನಮೋಹಕ ವಾತಾವರಣದಲ್ಲಿ ಈ ಚಿತ್ರದ ಪ್ರಮುಖ ಸನ್ನಿವೇಶಗಳನ್ನು ಸೆರೆಹಿಡಿಯಲಾಗಿದೆ.


​ಈ ಚಿತ್ರದಲ್ಲಿ ಧೀರನ್ ರಾಮ್‌ಕುಮಾರ್ ಅವರು ಹಿಂದೆಂದೂ ಕಾಣಿಸಿಕೊಂಡಿರದ ಖಡಕ್ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದು, ಅವರ ಅಭಿನಯದ ಹೊಸ ಮಗ್ಗುಲನ್ನು ಪ್ರೇಕ್ಷಕರಿಗೆ ಉಣಬಡಿಸಲು ಸಜ್ಜಾಗಿದ್ದಾರೆ. ನಾಯಕಿಯಾಗಿ ‘ನೆನಪಿರಲಿ’ ಪ್ರೇಮ್ ಅವರ ಪುತ್ರಿ ಅಮೃತಾ ಪ್ರೇಮ್ ಅಭಿನಯಿಸಿದ್ದು, ಧೀರನ್ ಹಾಗೂ ಅಮೃತಾ ಜೋಡಿ ತೆರೆಯ ಮೇಲೆ ಹೊಸ ಅಲೆ ಮೂಡಿಸುವ ನಿರೀಕ್ಷೆಯಿದೆ.

ಇದರೊಂದಿಗೆ ಕೆ.ಜಿ.ಎಫ್ ಖ್ಯಾತಿಯ ಅಯ್ಯಪ್ಪ ಶರ್ಮ, ಅಚ್ಯುತ್ ಕುಮಾರ್ & ಗೋಪಾಲಕೃಷ್ಣ ದೇಶಪಾಂಡೆ ಅವರಂತಹ ಅನುಭವಿ ಕಲಾವಿದರು ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಹಿಮಾಚಲದ ಪಬ್ಬಾರ್ ಕಣಿವೆಯ ಹಿನ್ನೆಲೆಯಲ್ಲಿ ಸಾಗುವ ರೋಚಕ ಅಡ್ವೆಂಚರಸ್ ಕ್ರೈಮ್ ಥ್ರಿಲ್ಲರ್ ಕಥಾಹಂದರವನ್ನು ಹೊಂದಿರುವ ಈ ಚಿತ್ರಕ್ಕೆ ಮಯೂರ್ ಅಂಬೆಕಲ್ಲು ಅವರ ಸಂಗೀತ ಹಾಗೂ ವಿಶ್ವಜಿತ್ ರಾವ್ ಅವರ ಛಾಯಾಗ್ರಹಣ ಬಲ ತುಂಬಿದೆ.

​ಸದ್ಯ ಚಿತ್ರೀಕರಣದ ಹಂತವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ‘ಪಬ್ಬಾರ್’ ಸಿನಿಮಾ ತಂಡವು ಪೋಸ್ಟ್-ಪ್ರೊಡಕ್ಷನ್ ಕೆಲಸಗಳಲ್ಲಿ ತೀವ್ರವಾಗಿ ತೊಡಗಿಸಿಕೊಂಡಿದೆ. ಪ್ರೇಕ್ಷಕರಲ್ಲಿ ಈಗಾಗಲೇ ಕುತೂಹಲ ಕೆರಳಿಸಿರುವ ಈ ಚಿತ್ರದ ಕ್ಯಾರೆಕ್ಟರ್ ಟೀಸರ್, ನಿರೀಕ್ಷೆಯನ್ನು ಡಬಲ್ ಮಾಡಿದೆ.

ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಚಿತ್ರತಂಡ ಶೀಘ್ರದಲ್ಲೇ ಅದ್ದೂರಿಯಾಗಿ ಘೋಷಿಸಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor