ಸೆಪ್ಟೆಂಬರ್ 12, 13ಕ್ಕೆ ಸೈಮಾ (SIIMA) ಹಬ್ಬ: ಬೆಂಗಳೂರಿನಲ್ಲಿ ಅದ್ಧೂರಿ ಪತ್ರಿಕಾಗೋಷ್ಠಿ!
ಬೆಂಗಳೂರು:
ದಕ್ಷಿಣ ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಜನಪ್ರಿಯ ಪ್ರಶಸ್ತಿ ಸಮಾರಂಭವಾದ ‘ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಅವಾರ್ಡ್ಸ್’ (SIIMA 2026) ಮತ್ತೆ ಬಂದಿದೆ. ಈ ಬಾರಿಯ 14ನೇ ಆವೃತ್ತಿಯ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭವು ಬರುವ ಸೆಪ್ಟೆಂಬರ್ 12 ಮತ್ತು 13 ರಂದು ವೈಭವಯುತವಾಗಿ ನಡೆಯಲಿದೆ.
ಈ ಸಂಬಂಧ ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಪತ್ರಿಕಾಗೋಷ್ಠಿಯಲ್ಲಿ ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್, ನಟ ಶ್ರೀಮುರಳಿ, ನಟಿಯರಾದ ಪ್ರಣೀತಾ ಸುಭಾಷ್, ಶಾನ್ವಿ ಶ್ರೀವಾಸ್ತವ ಹಾಗೂ ಫಾರಿಯಾ ಅಬ್ದುಲ್ಲಾ ಉಪಸ್ಥಿತರಿದ್ದು ಕಾರ್ಯಕ್ರಮದ ಮಾಹಿತಿಯನ್ನು ಹಂಚಿಕೊಂಡರು.

ಕನ್ನಡ ಚಿತ್ರರಂಗ ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆಯಿದೆ: ರೋರಿಂಗ್ ಸ್ಟಾರ್ ಶ್ರೀಮುರಳಿ
ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ನಟ ಶ್ರೀಮುರಳಿ, “ಈ ಬಾರಿ ಸೈಮಾ ಕಡೆಯಿಂದ ನನಗೆ ಒಂದು ಮುಖ್ಯ ಜವಾಬ್ದಾರಿ ಸಿಕ್ಕಿದ್ದು, ನಮ್ಮ ಕನ್ನಡ ಚಿತ್ರರಂಗವನ್ನು ಪ್ರತಿನಿಧಿಸುತ್ತಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಈ ಆವೃತ್ತಿಯು ಅತ್ಯಂತ ವೈಭವಯುತವಾಗಿ ಮೂಡಿಬರಲಿದೆ ಎಂಬ ಭರವಸೆ ನನಗಿದೆ” ಎಂದರು.
ತಮ್ಮ ಕುಟುಂಬ ಹಾಗೂ ಸೈಮಾ ನಡುವಿನ ಸುದೀರ್ಘ ಬಾಂಧವ್ಯವನ್ನು ಸ್ಮರಿಸಿದ ಅವರು, “ಸೈಮಾ ನಮಗೆ ಹೊಸದೇನಲ್ಲ; ಕಳೆದ 14 ವರ್ಷಗಳಿಂದ ಸೈಮಾ ಜೊತೆ ನಮಗೆ ಸುದೀರ್ಘ ಹಾಗೂ ಆತ್ಮೀಯ ನಂಟಿದೆ. ಅದರಲ್ಲೂ ನಮ್ಮ ಕುಟುಂಬಕ್ಕೂ ಸೈಮಾಗೂ ವಿಶೇಷವಾದ ಬಾಂಧವ್ಯವಿದೆ. ನನ್ನ ಕಸಿನ್ ಅಪ್ಪು ಮಾಮ ಅವರು ನಾಲ್ಕು ಬಾರಿ, ಶಿವಣ್ಣ ಮಾಮ ಅವರು ಮೂರು ಬಾರಿ ಇಲ್ಲಿ ಪ್ರಶಸ್ತಿ ಪಡೆದಿದ್ದಾರೆ. ಹಾಗೆಯೇ ನಮ್ಮ ಅಣ್ಣ (ವಿಜಯ್ ರಾಘವೇಂದ್ರ) ಎರಡು ಬಾರಿ ಕಾರ್ಯಕ್ರಮದ ನಿರೂಪಣೆ ಮಾಡಿದ್ದಾರೆ. ನನಗೂ ‘ಮಫ್ತಿ’ ಚಿತ್ರದ ನಟನೆಗಾಗಿ ‘ಬೆಸ್ಟ್ ಲೀಡ್ (ಕ್ರಿಟಿಕ್)’ ಪ್ರಶಸ್ತಿ ಲಭಿಸಿತ್ತು” ಎಂದು ನೆನಪಿಸಿಕೊಂಡರು.
“ಸಾಮಾನ್ಯವಾಗಿ ನಾವು ಚಿತ್ರತಾರೆಯರನ್ನು ಕೇವಲ ಬೆಳ್ಳಿಪರದೆಯ ಮೇಲೆ ನೋಡುತ್ತೇವೆ. ಆದರೆ ಸೈಮಾ ಎಲ್ಲಾ ಭಾಷೆಯ ಸ್ಟಾರ್ಗಳನ್ನು ಒಂದೇ ವೇದಿಕೆಯಡಿ ತಂದು ಅದ್ಭುತ ಕಾರ್ಯಕ್ರಮವನ್ನು ರೂಪಿಸುತ್ತದೆ. ಇದನ್ನು ಪ್ರತಿಯೊಂದು ರಾಜ್ಯದ ಹಾಗೂ ಪ್ರಾದೇಶಿಕ ರಂಗದ ಪ್ರೇಕ್ಷಕರೂ ಸಂಭ್ರಮಿಸುತ್ತಾರೆ. ಒಬ್ಬ ಕಲಾವಿದನಿಗೆ ಪ್ರಶಸ್ತಿ ಎನ್ನುವುದು ಆತನ ಶ್ರಮಕ್ಕೆ ಸಿಗುವ ದೊಡ್ಡ ಗೌರವ ಹಾಗೂ ಗುರುತಿಸುವಿಕೆ. ಈ 14ನೇ ಆವೃತ್ತಿಯ ಸೈಮಾ ಸಮಾರಂಭವೂ ಸಹ ಅಷ್ಟೇ ಅಚ್ಚುಕಟ್ಟಾಗಿ ಮತ್ತು ವೈಭವವಾಗಿ ನಡೆಯಲಿದೆ” ಎಂದು ಶುಭ ಹಾರೈಸಿದರು.
ಸೈಮಾ ಜಾಗತಿಕ ಮಟ್ಟದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ: ಅಧ್ಯಕ್ಷೆ ಬೃಂದಾ ಪ್ರಸಾದ್
ಸೈಮಾ ಅಧ್ಯಕ್ಷೆ ಬೃಂದಾ ಪ್ರಸಾದ್ ಮಾತನಾಡಿ, “ಸೈಮಾ ಸಂಸ್ಥೆಯು ಮುಖ್ಯವಾಗಿ ನಂಬಿಕೆ, ಬದ್ಧತೆ ಮತ್ತು ನಿರಂತರತೆಯ ಭದ್ರ ಬುನಾದಿಯ ಮೇಲೆ ನಿರ್ಮಾಣವಾಗಿದೆ. ಇಂದು ಸೈಮಾ ಕೇವಲ ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತವಾಗದೆ, ಇಡೀ ದೇಶದಲ್ಲೇ ಅತ್ಯಂತ ಜನಪ್ರಿಯ ಹಾಗೂ ಗೌರವಾನ್ವಿತ ಪ್ರಶಸ್ತಿ ಸಮಾರಂಭವಾಗಿ ಬೆಳೆದು ನಿಂತಿದೆ” ಎಂದು ಹರ್ಷ ವ್ಯಕ್ತಪಡಿಸಿದರು.
“ನಮ್ಮ ಈ ಸುದೀರ್ಘ ಪಯಣದಲ್ಲಿ ಸಾಥ್ ನೀಡಿರುವ ಪಾಲುದಾರರು, ಚಲನಚಿತ್ರರಂಗದ ಗಣ್ಯರು, ಮಾಧ್ಯಮ ಮಿತ್ರರು ಹಾಗೂ ಪ್ರತಿಯೊಬ್ಬ ಸಹಯೋಗಿಗಳ ಬೆಂಬಲಕ್ಕೆ ನಾವು ಸದಾ ಆಭಾರಿಯಾಗಿದ್ದೇವೆ. ನಿಮ್ಮ ಸಹಕಾರವಿಲ್ಲದೆ ಇಂತಹ ಬೃಹತ್ ಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲು ಸಾಧ್ಯವಾಗುತ್ತಿರಲಿಲ್ಲ. ಈ ವರ್ಷವೂ ನಾವು ‘Maruthi Suzuki NEXA’ ಜೊತೆ ಸತತ 4ನೇ ವರ್ಷದ ಸಹಯೋಗವನ್ನು ಹೊಂದಿದ್ದು, ಪಾರ್ಥೋ ಬ್ಯಾನರ್ಜಿ ಸರ್ ಅವರಿಗೆ ನಮ್ಮ ವಿಶೇಷ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದರು.
“ನಮ್ಮ ಮಾಧ್ಯಮ ಮಿತ್ರರಿಗೆ ಹಾಗೂ ಚಿತ್ರರಂಗದ ಪ್ರಮುಖ ಗಣ್ಯರಾದ ಶ್ರೀಮುರಳಿ ಸರ್, ಪ್ರಣೀತಾ, ಶಾನ್ವಿ ಮತ್ತು ಫಾರಿಯಾ ಅವರಿಗೆ ಹೃದಯಪೂರ್ವಕ ಕೃತಜ್ಞತೆಗಳು. ಈ ವರ್ಷವೂ ಸಹ ದಕ್ಷಿಣ ಭಾರತೀಯ ಚಿತ್ರರಂಗದ ವೈವಿಧ್ಯತೆ ಹಾಗೂ ಒಗ್ಗಟ್ಟನ್ನು ಜಾಗತಿಕ ಮಟ್ಟದ ಅಭಿಮಾನಿಗಳಿಗೆ ತಲುಪಿಸಲು ಮತ್ತು ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸಲು ಸೈಮಾ ಸಂಪೂರ್ಣವಾಗಿ ಸಜ್ಜಾಗಿದೆ” ಎಂದು ತಿಳಿಸಿದರು.










