ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಧಾರವಾಡದಲ್ಲಿ “ಅಂತರಾಷ್ಟ್ರೀಯ ಚಲನಚಿತ್ರೋತ್ಸವ”
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಆಯೋಜನೆ .
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವತಿಯಿಂದ ಇದೇ ಆಗಸ್ಟ್ 22, 23 ರಂದು ಧಾರವಾಡದ ಆಲೂರು ವೆಂಕಟರಾಯ ಸಭಾ ಭವನದಲ್ಲಿ ” ಅಂತರಾಷ್ಟ್ರೀಯ ಚಲನಚಿತ್ರೋತ್ಸವ” ನಡೆಯಲಿದೆ. ಈ ಚಲನಚಿತ್ರೋತ್ಸವದ ಕುರಿತು ಹೆಚ್ಚಿನ ಮಾಹಿತಿ ನೀಡಲು ಇತ್ತೀಚೆಗೆ ಉತ್ತರ ಕರ್ನಾಟಕ ಚಲನಚಿತ್ರ ಮಂಡಳಿ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ಆಯೋಜಿಸಿದ್ದರು.
2014 ರಲ್ಲಿ ನಮ್ಮ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಪ್ರಾರಂಭವಾಯಿತು. ನಮ್ಮ ಮಂಡಳಿ ವತಿಯಿಂದ 2022 ರಲ್ಲಿ “ಅಂತರಾಷ್ಟ್ರೀಯ ಕಿರುಚಿತ್ರೋತ್ಸವ” ಆಯೋಜಿಸಲಾಗಿತ್ತು. ಈಗ 2026 ರಲ್ಲಿ “ಅಂತರಾಷ್ಟ್ರೀಯ ಚಲನಚಿತ್ರೋತ್ಸವ” ಆಯೋಜಿಸಲಾಗಿದೆ. ಈ ಚಿತ್ರೋತ್ಸವದಲ್ಲಿ ಚಲನಚಿತ್ರ, ಕಿರುಚಿತ್ರ, ಸಾಕ್ಷ್ಯಚಿತ್ರ , ಟೆಲಿ ಫಿಲಂ ಹಾಗೂ ಆಲ್ಬಂ ಸಾಂಗ್ ಗಳನ್ನು ಆಹ್ವಾನಿಸಲಾಗಿದೆ. ಒಂದೊಂದು ವಿಭಾಗಕ್ಕೆ ಒಂದೊಂದ ರೀತಿಯ ಪ್ರವೇಶ ಶುಲ್ಕ ನಿಗದಿಪಡಿಸಲಾಗಿದೆ. ಆಸಕ್ತರು ಆಗಸ್ಟ್ 5 ರ ಒಳಗೆ ತಮ್ಮ ಚಿತ್ರ, ಕಿರುಚಿತ್ರ ಹಾಗೂ ಆಲ್ಬಂಗಳನ್ನು ಕಳುಹಿಸಬಹುದು. ತೀರ್ಪುಗಾರರು ಆ ಚಿತ್ರಗಳನ್ನು ವೀಕ್ಷಿಸಿ ಕೆಲವನ್ನು ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ಚಲನಚಿತ್ರ, ಕಿರುಚಿತ್ರ, ಟೆಲಿಚಿತ್ರ ಹಾಗೂ ಆಲ್ಬಂ ಸಾಂಗ್ ಗಳನ್ನು “ಅಂತರಾಷ್ಟ್ರೀಯ ಚಲನಚಿತ್ರೋತ್ಸವ”ದಲ್ಲಿ ಪ್ರದರ್ಶಿಸಲಾಗುವುದು. ಮೊದಲ ಉತ್ತಮ ಚಲನಚಿತ್ರಕ್ಕೆ(ಫ್ಯೂಚರ್) ಇಪ್ಪತ್ತೈದು ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ, ಉತ್ತಮ ಟೆಲಿ ಫಿಲಂ ಗೆ ಇಪ್ಪತ್ತು ಸಾವಿರ ನಗದು ಹಾಗೂ ಪಾರಿತೋಷಕ, ಉತ್ತಮ ಕಿರುಚಿತ್ರಕ್ಕೆ ಹದಿನೈದು ಸಾವಿರ ನಗದು ಹಾಗೂ ಪಾರಿತೋಷಕ, ಉತ್ತಮ ವಿಡಿಯೋ ಸಾಂಗ್ ಗೆ ಹತ್ತು ಸಾವಿರ ನಗದು ಹಾಗೂ ಪಾರಿತೋಷಕ ನೀಡಿ ಗೌರವಿಸಲಾಗುವುದು. ಇದಲ್ಲದೆ ಭಾಗವಹಿಸಿದ ಪ್ರತಿಯೊಂದು ಚಿತ್ರಗಳಿಗೂ(ಎಲ್ಲಾ ವಿಭಾಗ) ಪಾರಿತೋಷಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು. 2020ರಿಂದ 2026 ಜೂನ್ ವರೆಗೂ ತೆರೆಕಂಡಿರುವ ಚಲನಚಿತ್ರಗಳು ಈ ಚಲನಚಿತ್ರೋತ್ಸವಕ್ಕೆ ಅರ್ಜಿ ಹಾಕಬಹುದು. ಆಗಸ್ಟ್ 22, 23 ರಂದು ಧಾರವಾಡದ ಆಲೂರು ವೆಂಕಟರಾಯ ಸಭಾ ಭವನದಲ್ಲಿ ಈ ಚಿತ್ರೋತ್ಸವ ನಡೆಯಲಿದ್ದು, ರಾಜಕೀಯ, ಚಲನಚಿತ್ರ ಸೇರಿದಂತೆ ಅನೇಕ ಕ್ಷೇತ್ರಗಳ ಗಣ್ಯರು ಎರಡು ದಿನಗಳ ಕಾರ್ಯಕ್ರಮದಲ್ಲಿ ಉಪಸ್ಥಿತರಿರುತ್ತಾರೆ ಎಂದು ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಮಂಜುನಾಥ್ ಎಲ್ ಹಗೇದಾರ ತಿಳಿಸಿದರು.

ಚಲನಚಿತ್ರೋತ್ಸವದ ಮುಖ್ಯಸ್ಥರಾದ ನಾಗೇಂದ್ರ ಮಾಗಡಿ ಮಾತನಾಡಿ, ನಾನು 2016ರಲ್ಲಿ ಚಲನಚಿತ್ರೋತ್ಸವದ ತೀರ್ಪುಗಾರನಾಗಿ ಭಾಗವಹಿಸಿದ್ದೆ. ಆ ಸಮಯದಲ್ಲಿ ಸಾಕಷ್ಟು ಉತ್ತಮ ಚಿತ್ರಗಳನ್ನು ನೋಡಿದ್ದೇನೆ. ಪ್ರತಿಯೊಬ್ಬರಿಗೂ ತಮ್ಮ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಗಬೇಕೆನ್ನುವ ಆಸೆ ಇರುತ್ತದೆ. ಅಂತಹವರಿಗೆ ಚಲನಚಿತ್ರೋತ್ಸವ ಒಂದು ಸೂಕ್ತ ವೇದಿಕೆಯಾಗಿದೆ. ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿರುವ ಈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಎಲ್ಲಾ ವಿಭಾಗಗಳ ಮೊದಲ ಉತ್ತಮ ಚಿತ್ರಕ್ಕೆ ಮಾತ್ರ ನಗದು ಬಹುಮಾನ ಹಾಗೂ ಪಾರಿತೋಷಕವಿರುತ್ತದೆ. ಆದರೆ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ಪೋಷಕ ನಟ ಹಾಗೂ ನಟಿ, ಅತ್ಯುತ್ತಮ ಬಾಲನಟ ಹಾಗೂ ನಟಿ, ಅತ್ಯುತ್ತಮ ಛಾಯಾಗ್ರಾಹಕ, ಅತ್ಯುತ್ತಮ ಸಂಕಲನಕಾರ, ಅತ್ಯುತ್ತಮ ಗೀತರಚನೆಕಾರ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಸೌಂಡ್ ಎಂಜಿನಿಯರ್, ಅತ್ಯುತ್ತಮ ಸಂಭಾಷಣೆಕಾರ, ಅತ್ಯುತ್ತಮ ಹಿನ್ನೆಲೆ ಗಾಯಕಿ ಹಾಗೂ ಗಾಯಕಿ ಪ್ರಶಸ್ತಿಗಳಲ್ಲದೆ, ತೀರ್ಪುಗಾರರ ವಿಶೇಷ ಪ್ರಶಸ್ತಿ, ಅತ್ಯುತ್ತಮ ಮಕ್ಕಳಚಿತ್ರ, ಸಾಮಾಜಿಕ ಕಳಕಳಿಯುಳ್ಳ ಚಿತ್ರ ಹಾಗೂ ಐತಿಹಾಸಿಕ ಸ್ಥಳಗಳನ್ನು ಬಿಂಬಿಸಿದ ಚಿತ್ರಗಳಿಗೆ ಪ್ರಶಸ್ತಿಗಳು ಇರುತ್ತದೆ. ಇವರೆಲ್ಲರನ್ನೂ ಪಾರಿತೋಷಕ ಹಾಗೂ ಪ್ರಮಾಣಪತ್ರ ನೀಡಿ ಗೌರವಿಸಲಾಗುವದು. ನಗದು ಬಹುಮಾನ ಮಾತ್ರ ಇರುವುದಿಲ್ಲ ಎಂದು ತಿಳಿಸಿದರು.
ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷರಾದ ಪ್ರಭು ಬಿ ಹಂಚಿನಾಳ, ಕಾರ್ಯಧ್ಯಕ್ಷರಾದ ಕಲ್ಮೇಶ ಡಿ ಹಾವೇರಿಪೇಟ್, ಪ್ರಧಾನ ಕಾರ್ಯದರ್ಶಿ ರಾಹುಲ್ ದತ್ತಪ್ರಸಾದ್, ಖಜಾಂಚಿ ಕಿರಣ್ ಸಿದ್ದಾಪುರ, ಸಂಘಟನಾ ಕಾರ್ಯದರ್ಶಿ ಪ್ರವೀಣಾ ಕುಲಕರ್ಣಿ , ಸಲಹಾ ಸಮಿತು ಡಾ||ಸುರೇಶ್ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದು, “ಅಂತರಾಷ್ಟ್ರೀಯ ಚಲನಚಿತ್ರೋತ್ಸವ” ದ ಮಾಹಿತಿ ನೀಡಿದರು.
https://forms.gle/nSb1UTdHPrLviwDr5 ಮೇಲೆ ನೀಡಿರುವ ಲಿಂಕ್ ಅನ್ನು ಬಳಸಿ ಸಬ್ಮಿಷನ್ ವಿವರಗಳನ್ನು (Submission Details) ಭರ್ತಿ ಮಾಡಿ.
ನಂತರ ಪಾವತಿ (Payment) ಮಾಡಿದ ಸ್ಕ್ರೀನ್ಶಾಟ್ ಹಾಗೂ ಚಿತ್ರದ ಎರಡು ವಿಭಿನ್ನ ಪೋಸ್ಟರ್ಗಳನ್ನು 6361892782 ಈ ವಾಟ್ಸ್ಆಪ್ ಸಂಖ್ಯೆಗೆ ಕಳುಹಿಸಿ. ಹೆಚ್ಚಿನ ಮಾಹಿತಿಗಾಗಿ ಇದೇ ಸಂಖ್ಯೆಯನ್ನು ಸಂಪರ್ಕಿಸಬಹುದು.











