“ಕಾಖಂಡಕಿ ಶ್ರೀ ಮಹಿಪತಿದಾಸರು” ಚಿತ್ರ ಗಣ್ಯರಿಗಾಗಿ ಪ್ರದರ್ಶನ .

ಹಲವು ಕ್ಷೇತ್ರಗಳ ಗಣ್ಯರಿಂದ ಮಧುಸೂದನ್ ಹವಾಲ್ದಾರ್ ನಿರ್ದೇಶನದ “ಕಾಖಂಡಕಿ ಶ್ರೀ ಮಹಿಪತಿದಾಸರು” ಚಿತ್ರ ವೀಕ್ಷಣೆ .

ಕನ್ನಡ ಸಾಹಿತ್ಯಕ್ಕೆ ದಾಸರ ಕೊಡುಗೆ ಅಪಾರ.‌ ಅಂತಹ ಮಹನೀಯರ ‌ಮಹಿಮೆಯನ್ನು ಚಿತ್ರಗಳ ಮೂಲಕ ಜನರಿಗೆ ಪರಿಚಯಿಸುವ ಕೆಲಸವನ್ನು ನಿರ್ದೇಶಕ ಮಧುಸೂದನ್ ಹವಾಲ್ದಾರ್ ಮಾಡುತ್ತಾ ಬರುತ್ತಿದ್ದಾರೆ. ಕರ್ನಾಟಕದ ಮತ್ತೊಬ್ಬ ಶ್ರೇಷ್ಠ ಹರಿದಾಸರಾದ ಮಹಿಪತಿ ದಾಸರ ಕುರಿತಾದ “ಕಾಖಂಡಕಿ ಶ್ರೀ ಮಹಿಪತಿದಾಸರು” ಚಿತ್ರವನ್ನು ನಿರ್ದೇಶಿಸುವುದರ ಜೊತೆಗೆ ಸಂಗೀತ ನಿರ್ದೇಶನವನ್ನು ಮಾಡಿದ್ದಾರೆ.

ಡಾ||ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಕಥೆ ಹಾಗೂ ಸಂಭಾಷಣೆ ಬರೆದಿದ್ದು, ಚಿತ್ರಕಥೆ ಜೆ.ಎಂ.ಪ್ರಹ್ಲಾದ್ ಹಾಗೂ ಮಧುಸೂದನ್ ಹವಾಲ್ದಾರ್ ಅವರದು. ಇತ್ತೀಚೆಗೆ ಈ ಚಿತ್ರದ ಟೆಕ್ನಿಕಲ್ ಶೋ ನಡೆಯಿತು. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ವಿ.ಶ್ರೀಶಾನಂದ, ಶ್ರೀ ಸತ್ಯಧ್ಯಾನಾಚಾರ್ಯ ಕಟ್ಟಿ , ಸಯ್ಯದ್ ಷಾ ಸಾನಿ ಜೈನುಲ್ ಅಬಿದೀನ್, ಡಾ||ವಾಸುದೇವ ಅಗ್ನಿಹೋತ್ರಿ, ಧ್ರುವ ಕುಲಕರ್ಣಿ, ಸುಧೀಂದ್ರ ವೆಂಕಟೇಶ್, ಗುರುರಾಜ್ ಕೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಈ ಚಿತ್ರದ ಟೆಕ್ನಿಕಲ್ ಶೋನಲ್ಲಿ ಚಿತ್ರವನ್ನು ವೀಕ್ಷಿಸಿದರು. ಚಿತ್ರ ವೀಕ್ಷಣೆಯ ನಂತರ ಗಣ್ಯರು ಮಹಿಪತಿದಾಸರ ಚಿತ್ರವನ್ನು ಮನಸ್ಸಾರೆ ಕೊಂಡಾಡಿದರು.

“ಶ್ರೀ ಜಗನ್ನಾಥದಾಸರು” ಚಿತ್ರದಿಂದ ಶ್ರೇಷ್ಠ ಹರಿದಾಸರ ಚಿತ್ರಗಳನ್ನು ನಿರ್ದೇಶಿಸುತ್ತಾ ಬಂದಿದ್ದೇನೆ. ಪ್ರಸ್ತುತ “ಕಾಖಂಡಕಿ ಶ್ರೀಮಹಿಪತಿದಾಸರು” ಚಿತ್ರವನ್ನು ‌ನಿರ್ದೇಶಿಸುವುದರೊಂದಿಗೆ ಸಂಗೀತ ಸಂಯೋಜನೆ ಕೂಡ ಮಾಡಿದ್ದೇನೆ. ಇದು ನನ್ನ ನಿರ್ದೇಶನದ ಐದನೇ ಹರಿದಾಸರ ಚಿತ್ರ. ಮಾತಾಂಬುಜ ಮೂವೀಸ್ ಮೂಲಕ ಈ ಚಿತ್ರ ನಿರ್ಮಾಣವಾಗಿದೆ. ವಿಜಯಾನಂದ ನಾಯಕ್ ಮಹಿಪತಿದಾಸರ ಪಾತ್ರ ನಿರ್ವಹಣೆ ಮಾಡಿದ್ದಾರೆ. ಪುರಂದರದಾಸರ ಹಾಗೂ ಕನಕದಾಸರ ನಂತರ ದಾಸ ಪರಂಪರೆಗೆ ಬಂದವರು ಮಹಿಪತಿ ದಾಸರು. ಭಾಸ್ಕರ್ ಗುರೂಜಿ ಹಾಗೂ ಶಾನುಂಗ(ಸೂಫಿ ಸಂತ) ಇವರ ಪರಿಣಾಮ ಹೆಚ್ಚು ಬೀರಿ, ಅದಿಲ್ ಷಾ ನ ಆಸ್ಥಾನದಲ್ಲಿ ಪ್ರಧಾನ ಮಂತ್ರಿಯಾಗಿದ್ದ ಇವರು ಮಹಿಪತಿದಾಸರಾಗುತ್ತಾರೆ.

ಯೋಗ ಸಾಧನೆಯಿಂದ ಹರಿದಾಸರಾದ ಮಹಿಪತಿದಾಸರ ಪುಣ್ಯಸ್ಥಳವಿರುವುದು ವಿಜಾಪುರ ಜಿಲ್ಲೆಯ ಕಾಖಂಡಕಿಯಲ್ಲಿ. ಈಗಾಗಲೇ ಚಿತ್ರ ತೆರೆಗೆ ಬರಲು ಸಿದ್ದವಾಗಿದೆ. ಅಕ್ಟೋಬರ್ ವೇಳೆಗೆ ತೆರೆಗೆ ಬರಲಿದೆ. ಯಾವುದೇ ಒಂದು ಐತಿಹಾಸಿಕ ಹಾಗೂ ಒಬ್ಬ ಸಾಧಕರ ಕುರಿತು ಸಿನಿಮಾ ಮಾಡಿದಾಗ ಮೊದಲು ಟೆಕ್ನಿಕಲ್ ಶೋ ಆಯೋಜಿಸಿ ಸಂಬಂಧಪಟ್ಟವರಿಗೆ ಹಾಗೂ ಗಣ್ಯರಿಗೆ ತೋರಿಸುವುದು ವಾಡಿಕೆ. ಏಕೆಂದರೆ ಚಿತ್ರದಲ್ಲಿ ಏನಾದರೂ ಸ್ವಲ್ಪ ಬದಲಾವಣೆ ಇದ್ದರೆ ಮಾಡಿಕೊಳ್ಳಬಹುದು ಎಂದು. ಆದರೆ ನಮ್ಮ ಚಿತ್ರ ವೀಕ್ಷಿಸಿದ ಪ್ರತಿಯೊಬ್ಬರು ಆಡಿದ ಪ್ರಶಂಸೆಯ ನುಡಿಗಳನ್ನು ಕೇಳಿ ನನ್ನ ಮನತುಂಬಿ ಬಂತು ಎನ್ನುತ್ತಾರೆ ನಿರ್ದೇಶಕ ಮಧುಸೂದನ್ ಹವಾಲ್ದಾರ್.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor