udala movie review. ಚಿತ್ರ ವಿಮರ್ಶೆ – ಮುಕಳ್ಯಾಗೆ ಗುಂಡು ಹೋಡಿತಾನೆ ಉಡಾಳ.
Rating -3.5/5
ಕಲಾವಿದರು :- ಪೃಥ್ವಿ ಶಾಮನೂರು, ಹೃತಿಕಾ ಶ್ರೀನಿವಾಸ್, ಬಲ ರಾಜವಾಡಿ, ಮಾಳು ನಿಪ್ನಾಳ್, ಪ್ರವೀಣ್ ಗಸ್ತಿ, ಗೋವಿಂದೇಗೌಡ ಮುಂತಾದವರು
ಮತ್ತೊಮ್ಮೆ ಭಟ್ರ ಟೀಮ್ ಡ್ರಾಮಾ ತೆರೆಗೆ ಬಂದಿದೆ.
ಇದು ಪಕ್ಕಾ ಉತ್ತರ ಕರ್ನಾಟಕದ ಸೊಗಡಿನ, ಅದೇ ಶೈಲಿಯ ಚಿತ್ರ. ಹಾಗೇ ಅದೇ ಬೈಗುಳಗಳನ್ನು ಯತಾವತ್ತಾಗಿ ಚಿತ್ರದುದ್ದಕ್ಕೂ ಬೈದಾಡಿಕೊಂಡಿದ್ದರೆ. ಪ್ರೇಕ್ಷಕನಿಗೆ ನಗುವೋ ನಗು.

ಪಕ್ಯಾ (ಪೃಥ್ವಿ) ಎಂಬ ಪಕ್ಕಾ ಉಡಾಳ ಇವನು ಮಾಡೋ ಕೆಲಸ ಒಂದಾ ಎರಡಾ, ಇವನ ಜೊತೆಗೆ ಪಿಂಕಿ ಪಾಟೀಲ್ (ಹೃತಿಕಾ ಶ್ರೀನಿವಾಸ್) ಅನ್ನೋ ಊರು ಬಜಾರಿ. ಇವಳಿದ್ದ ಕಡೆ ಬರೀ ಜಗಳ, ಗಲಾಟೆ, ಬಂದೂಕಿನ ಗುಂಡುಗಳ ಸದ್ದು.
ಓಡಾಟಾ, ಕಿರುಚಾಟ, ಅದರ ಮದ್ಯೆ ಪ್ರೀತಿ, ಪ್ರೇಮದ ಭರಾಟೆಯಲ್ಲಿ ಆಕಸ್ಮಿಕವಾಗಿ
ಮಾರ್ತಾಂಡ ಸಾಥೆ ಎಂಬ ಡಾನ್ ಕುಂಡಿಗೆ ಅಲ್ಲ ಮುಕಳ್ಯಾಗೆ ಗುಂಡು ಹಾರಿಸುತ್ತಾರೆ.
ಅಲ್ಲಿಂದ ಶುರು “ಡ್ರಾಮ” ಡಾನ್ ಕುಂಡಿಯಿಂದ ಗುಂಡು ತೆಗೆದು ಅವನನ್ನು ಕಾಪಾಡೋದೆ ಒಂದು ದೊಡ್ಡ ಕಥೆ.
ಇದೆಲ್ಲಾ ನಡೆಯೋದು ಉತ್ತರ ಕರ್ನಾಟಕದ ಬಿಜಾಪುರದಲ್ಲಿ
ಗೋಲಗುಮ್ಮಟವನ್ನು ನೋಡದಿದ್ದವರು ಈ ಸಿನಿಮಾದಲ್ಲಿ ನೋಡಬಹುದು.

ಜವಾರಿ ಸೊಗಡಿನಲ್ಲಿ, ಖಡಕ್ ರೊಟ್ಟಿ, ಉಳ್ಳಾಗಡ್ಡಿಯ ಖಾರದಂತೆ ನಿರ್ದೇಶಕ ಅಮೋಲ್ ಪಾಟೀಲ್ ಚಿತ್ರದ ಕಥೆಯನ್ನು ಓಡಿಸಿಕೊಂಡು ಬರೆದಿದ್ದಾರೆ. ನಿಜ ಚಿತ್ರ ನಿರೂಪಣೆ ಎಲ್ಲೂ ನಿಲ್ಲದಂತೆ ಒಂದೇ ಸಮನೆ ಓಡುತ್ತದೆ.
ಕಥಾ ನಾಯಕ, ನಾಯಕಿ ಓಡಿ ಓಡಿ ಸುಸ್ತಾಗಿ ನಿಂತು ಒಬ್ಬರ ಕಣ್ಣಲ್ಲಿ ಒಬ್ಬರು ಕಣ್ಣುಟ್ಟು ಐ ಲವ್ ಯು ಅನ್ನುವಷ್ಟರಲ್ಲಿ ಸಿನಿಮಾ ಮುಗಿದಿರುತ್ತದೆ. ಅದರ ಬೆನ್ನಲ್ಲೇ ಯೋಗರಾಜ ಭಟ್ರು ಪ್ರತ್ಯಕ್ಷವಾಗಿ ಮುಂದಿನ ಭಾಗ 2 ಇದೆ ಮತ್ತೆ ಬನ್ನಿ ಎಂಬ ಸಂದೇಶ ನೀಡುತ್ತಾರೆ.
ಭಟ್ರು ನಿರ್ಮಾಣ ಮಾಡಿದ್ದಾರೆ, ಭಟ್ರ ಹುಡುಗರ ಇದ್ದಾರೆ ಅಂದ ಮೇಲೆ ಅವರ ಸಿನಿಮಾ ವಾಸನೆ ಇರಬೇಕಲ್ಲ.
ಡ್ರಾಮಾ ಚಿತ್ರದ ಹಲವಾರು ರೇಖೆಗಳು ಈ ಸಿನಿಮಾದಲ್ಲಿ ಟಿಸಿಲೊಡೆದಿವೆ.
ಕಥಾ ನಾಯಕ, ನಾಯಕಿಯ ಪಾತ್ರಗಳು ಡ್ರಾಮಾ ಚಿತ್ರದ ಯಶ್ ಮತ್ತು ರಾಧಿಕಾ ಪಂಡಿತ್ ರನ್ನು ನೆನಪಿಸುತ್ತದೆ. ಡಾನ್ ಪಾತ್ರ ಸುಚೀಂದ್ರ ಪ್ರಸಾದ್ ನೆನಪಾಗುತ್ತಾರೆ
ಅಂಬರೀಶ್ ರಂತೆ ಯೋಗರಾಜ್ ಭಟ್ರು ಮುಂದಿನ ಭವಿಷ್ಯ ಹೇಳುತ್ತಾರೆ.

ಭಟ್ಟರ ಶಿಷ್ಯ ಅಮೋಲ್ ಪಾಟೀಲ್, ತಮ್ಮ ಗುರುಗಳನ್ನು ಮೈಮೇಲೆ ತಂದುಕೊಂಡಂತಿದೆ.
ಆದರೆ ಚಿತ್ರ ನೋಡಿಸಿಕೊಂಡು ಹೋಗುತ್ತದೆ. ಎಲ್ಲು ಬೋರ್ ಅನ್ನಿಸುವುದಿಲ್ಲ.
ಹಾಡು, ಫೈಟು, ಚೇಸಿಂಗು, ತರಲೆ, ಭೈಗುಳ, ಅದರ ಮದ್ಯೆ ಸೆಂಟಿಮೆಂಟ್, ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಎಲ್ಲಾ ಕೆಟ್ಟ ಮಾತುಗಳನ್ನು ಅಷ್ಟೇ ಸಲೀಸಾಗಿ ಹರಿ ಹಾಯ್ದಿದ್ದಾರೆ.
ಸೆನ್ಸಾರ್ ನವರಿಗಂತು ಅವರು ಏನು ಬೈದಿದ್ದಾರೆ ಅನ್ನೋದೆ ಗೊತ್ತಾಗದ ಹಾಗೆ ಚಾಣಾಕ್ಷತನ ಮೆರೆದಿದ್ದಾನೆ ಉಡಾಳ.
ಇಲ್ಲಿ ಗಂಭೀರತೆ, ಮತ್ತು ಲಾಜಿಕ್ ಇಲ್ಲದೇ ‘ಉಡಾಳ’ ಬರೀ ಡೈಲಾಗ್ ಆಸರೆಯಲ್ಲಿ ರಂಜಿಸಿದ್ದಾನೆ.
ಇಲ್ಲಿ ಬಹುತೇಕ ಉತ್ತರ ಕರ್ನಾಟಕದ ಪ್ರತಿಭೆಗಳಿಗೆ
ಅವಕಾಶ ನೀಡಲಾಗಿದೆ.
ಪೃಥ್ವಿ ಪೂರ್ಣ ಮಟ್ಟದ ಕಥಾ ನಾಯಕನಾಗಿ ಅಭಿನಯಿಸಿದ್ದಾರೆ.
ಉಡಾಳತನಕ್ಕೆ ಎಷ್ಟು ಬೇಕೋ ಅಷ್ಟು ಸಲೀಸಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ.
ಹಠಮಾರಿ, ಭಜಾರಿಯಾಗಿ ಹೃತಿಕಾ ಶ್ರೀನಿವಾಸ್ ಪಾತ್ರದಲ್ಲಿ ಜೀವಿಸಿದ್ದಾರೆ.
ಬಲ ರಾಜವಾಡಿ ಎಲ್ಲಾ ಪಾತ್ರಕ್ಕೂ ಸೈ ಎನ್ನುವಂತೆ ಹೊಂದಿಕೊಂಡಿದ್ದಾರೆ.
‘ಉಡಾಳ’ ಚಿತ್ರದ ಮೂಲಕ ಬಿಜಾಪುರದ ಖಡಕ್ ರಮಣೀಯತೆಯನ್ನು ಚೆನ್ನಾಗಿ ತೋರಿಸಿದ್ದಾರೆ ಶಿವಶಂಕರ್ ನೂರಾಂಬಡ,
ಚೇತನ್ ಡ್ಯಾವಿ ಯವರ ಸಂಗೀತ ಕೂಡ ಉಡಾಳನ ಓಟಕ್ಕೆ ಸಾಥ್ ನೀಡಿದೆ.
ಒಟ್ಟಿನಲ್ಲಿ ಉಡಾಳನ ಹಾಸ್ಯ, ಥ್ರಿಲ್ಲಿಂಗ್, ಸೆಂಟಿಮೆಂಟು ಗಳೊಂದಿಗೆ ಬಂದೂಕಿನ ಗುಂಡಿನ ಜೊತೆಗೆ, ಉತ್ತರ ಕರ್ನಾಟಕದ ಡೈಲಾಗ್ ಗಳನ್ನು ನೋಡಲು ಅಡ್ಡಿಯಿಲ್ಲ.
ಒಂದು ಒಳ್ಳೆಯ ಮನರಂಜನೆಗೆ ಕೊರತೆ ಇಲ್ಲ ಅನ್ನಬಹುದು.











