Surya movie review. ಸೂರ್ಯ ಚಿತ್ರ ವಿಮರ್ಶೆ. “ಸೂರ್ಯನ ಶಾಖಕ್ಕೆ ಕೊತ ಕೊತನೆ ಕುದಿಯುತ್ತಾಳೆ ಭೂಮಿ”
ಚಿತ್ರ – ಸೂರ್ಯ
ನಿರ್ಮಾಪಕರು – ಬಸವರಾಜು ಬೆಣ್ಣೆ, ರವಿ ಬೆಣ್ಣೆ
ನಿರ್ದೇಶನ – ಸಾಗರ್
ಛಾಯಾಗ್ರಹಣ – ಮನುರಾಜ್
ಸಂಗೀತ – ಶ್ರೀಶಾಸ್ತ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಟೈಟಲ್ ಕಾರ್ಡ್ ಬರುವಷ್ಟರಲ್ಲಿ 3ರೌಡಿ ಅಡ್ಡಗಳಲ್ಲಿ 4 ಕೊಲೆ, ಪೋಲೀಸ್ ಫೈರಿಂಗ್ ಹೀರೋ ಮಾಸ್ ಎಂಟ್ರಿಗೆ ಇಷ್ಟೆಲ್ಲ ಆಗಬೇಕಾಗುತ್ತದೆ .ಎಲ್ಲಾ ಪಾತ್ರಗಳು ಔಟ್ ಆಫ್ ಫೋಕಸ್ ನಿಂದಲೇ ರಿವಿಲ್ ಆಗುತ್ತದೆ.
ಕಲಾವಿದರು :- ಪ್ರಶಾಂತ್, ಹರ್ಷಿತಾ, ಆರ್ಮುಗಂ ರವಿಶಂಕರ್, ಟಿ.ಎಸ್. ನಾಗಾಭರಣ, ಬಲ ರಾಜವಾಡಿ, ಭಜರಂಗಿ ಪ್ರಸನ್ನ, ಪ್ರಮೋದ್ ಶೆಟ್ಟಿ, ಕುಂಕುಮ್ ಹರಿಹರ, ದೀಪಿಕಾ, ಕಡ್ಡಿಪುಡಿ ಚಂದ್ರು ಮುಂತಾದವರು.

ಇದೊಂದು ಮಾಸ್ ಲವ್ ಸ್ಟೋರಿ ಅನ್ನೋದಕ್ಕೆ ಸಾಕ್ಷಿ ಚಿತ್ರದ ಪ್ರಾರಂಭದ ದೃಶ್ಯದಲ್ಲೇ ರೌಡಿಗಳ ಅಡ್ಡೆ ನಾಲ್ಕು ಕೊಲೆಗಳಾಗುತ್ತವೆ. ಯಾರು ಯಾಕೆ ಕೊಲೆ ಮಾಡಿದರು ಅನ್ನುವುದನ್ನು ಚಿತ್ರದ ಕೊನೆಯ ದೃಶ್ಯದವರೆಗೂ ನಿರ್ದೇಶಕ ಸಾಗರ್ ಹೇಳಿದ್ದಾರೆ.
ಅವನೊಬ್ಬ ಅನಾಥ ಅವನ ಹೆಸರು ಸೂರ್ಯ. ( ಪ್ರಶಾಂತ್ ) ಅವನನ್ನು ಹೆತ್ತವರು ಸಣ್ಣ ಮಗು ಇದ್ದಾಗಲೇ ಅವನನ್ನು ಬಿಸಾಕಿರುತ್ತಾರೆ.
ಸ್ಲಂ ನಲ್ಲಿ ಬೆಳೆದ ಇವನು ಐಶಾರಾಮಿ ಕಾಲೇಜಿನಲ್ಲಿ ಓದುತ್ತಾನೆ, ಬಿಡುವಿದ್ದಾಗ ಆಟೋ ಓಡಿಸುತ್ತಾನೆ, ಮೆಜೆಸ್ಟಿಕ್ ನಲ್ಲಿ ಟೀ ಮಾರುತ್ತಾನೆ, ಹೋಟೆಲ್ ನಲ್ಲಿ ಸಪ್ಲೆಯರ್ ಕೆಲಸ ಮಾಡುತ್ತಾನೆ. ಜೊತೆಗೆ ಶ್ರೀಮಂತರ ಹುಡುಗಿಯನ್ನು ಲವ್ ಮಾಡುತ್ತಾನೆ.
ಅವಳು ಭೂಮಿ ( ಹರ್ಷಿತಾ ) ಈ ಕಥೆಗೆ ಶ್ರೀಮಂತ ಮನೆಯ ನಾಯಕಿ. ಅವಳಿಗೆ ತಾನು ಪ್ರೀತಿಸೋ ಹುಡುಗ ಬುರ್ಜ್ ಕಲೀಫದ ತುತ್ತ ತುದಿಯಲ್ಲಿ ತನ್ನ ಪ್ರೇಮದ ತುಡಿತದ ಸಂವೇದನೆಯನ್ನು ಹೇಳಿ ತನ್ನನ್ನು ಪ್ರಪೊಸ್ ಮಾಡಬೇಕು ಎನ್ನುವ ಮಹದಾಸೆ. ರಸ್ತೆಯಲ್ಲಿ ಒಂದು ಮಗುವನ್ನು ಅಪಘಾತದಿಂದ ರಕ್ಷಣೆ ಮಾಡಿದ ಹುಡುಗ ಸೂರ್ಯನ ಮೇಲೆ ಪ್ರೇಮಾಂಕುರವಾಗುತ್ತದೆ ಆಗ ಅವಳು ಹೈಸ್ಕೂಲ್ ಹುಡುಗಿ ಮೊದಲನೇ ದಿನ ನೋಡಿ ಎರಡನೇ ದಿನಕ್ಕೆ ಪ್ರೀತಿಯನ್ನು ಬುರ್ಜ್ ಕಲೀಫಾದ ಮೇಲೆ ಹೇಳು ಅಂತಲೇ ಗಾರೇ ನೆಲದ ಮೇಲೆ ಮಲಗಿ ತನನ್ನು ತನ್ನ ಹುಡುಗನಿಗೆ ಅರ್ಪಿಸಿಕೊಂಡು ಬಿಡುತ್ತಾಳೆ. ಪ್ರೇಕ್ಷಕರಿಗೆ ಇದೆಂತ ಪ್ರೀತಿ ಅನ್ನಿಸುವುದಂತು ನಿಜ. ಆದರೆ ಇಂದಿನ ಯುವ ಜನತೆ ಕಾಮದ ಕಮಟುವಾಸನೆಯಲ್ಲಿ ಎರಡು ದೇಹದ ವಾಂಛೆಗಳಲ್ಲಿ ಮಿಲನದಿ ಮುಳುಗೇಳುವುದನ್ನೇ ಪ್ರೀತಿ ಅಂದುಕೊಂಡು ಪವಿತ್ರ ಪ್ರೇಮಕ್ಕೆ ಅಪಚಾರ ವಾಗುತ್ತಿರುವುದನ್ನು ನಿರ್ದೇಶಕ ಸಾಗರ್ ಈ ರೀತಿಯಾಗಿ ಬಿಂಬಿಸಿದ್ದಾರೆ.
ಸುಖ ಅನುಭವಿಸಿದ ಮಾರನೇ ದಿನ ಸೂರ್ಯನ ಬಣ್ಣ ಬಯಲಾಗುತ್ತದೆ. ಅವನೊಬ್ಬ ಭಿಕಾರಿ, ಅನಾಥ, ಆಟೋ ಓಡಿಸುವ, ಟೀ ಮಾರುವ, ಹೋಟೆಲ್ ಸಪ್ಲೆಯರ್ ನಾನು ಪ್ರೀತಿಸುತ್ತಿರುವ ಹುಡುಗ ಅಂತ ತಿಳಿಯುತ್ತಲೇ ಸಿಡಿದೇಳುತ್ತಾಳೆ. ನಾಯಕನಿಗೆ ಚಪ್ಪಲಿ ತೋರಿಸಿ ನೀನು ಸಂಪಾದಿಸುವ ಹಣ ನನ್ನ ಚಪ್ಪಲಿಗೆ ಸಾಕಾಗೊಲ್ಲ ಅಂತ ಹೇಳಿ ಗುಡ್ ಬೈ ಹೇಳುತ್ತಾಳೆ. ಅಲ್ಲಿಂದ ಸೂರ್ಯನ ಶಾಖಕ್ಕೆ ಭೂಮಿ ಕೊತ ಕೊತನೆ ಕುದಿಯುತ್ತಾಳೆ.
ಇನ್ನು ಸ್ಲಂನಲ್ಲಿ ಹೂ ಮಾರುವ ಹುಡುಗಿ ದೀಪಿಕಾಳಿಗೆ ಸೂರ್ಯನ ಮೇಲೆ ಪ್ರೀತಿಯ ಆಕರ್ಷಣೆಯಾಗಿರುತ್ತದೆ.
ಇದು ಇವರ ಕಥೆಯಾದರೆ
ಚಿತ್ರದ ವಿಲನ್ ಗಳು ಅನೇಕರಿದ್ದಾರೆ ಆದರೆ ಅವರಿಗೆಲ್ಲ ದೊಡ್ಡ ಕಿಂಗ್ ಪಿನ್ ಮಾರಿ ( ರವಿಶಂಕರ್ ). ರವಿಶಂಕರ್ ರವರನ್ನು ನಿರ್ದೇಶಕ ಸಾಗರ್ ವಿಭಿನ್ನ ಗೆಟಪ್ ನೊಂದಿಗೆ ತೋರಿಸಿದ್ದಾರೆ. ಹೇರ್ ಸ್ಟೈಲ್, ಬಾಡಿ ಲಾಂಗ್ವೇಜ್, ಡೈಲಾಗ್ ಎಲ್ಲವೂ ಬೇರೆಯದೇ ರೀತಿಯಲ್ಲಿದೆ.
ಹುಡುಗಿಯರನ್ನು ಕಿಡ್ನಾಪ್ ಮಾಡಿಸಿ ಹೊರ ದೇಶಗಳಿಗೆ ಮಾರುವುದು ಇವನ ಮೂಲ ಕಸುಬು.
ಈ ವಿಲನ್ ಮಾರಿಯ ಮಗಳೇ ಕಥಾನಾಯಕಿ ಭೂಮಿ.
ಮಾರಿ ಮಗಳನ್ನು ಅಂಡರ್ ವರ್ಲ್ಡ್ ನ ರೌಡಿಗಳು ಇಷ್ಟಪಟ್ಟು ಅವಳನ್ನು ಮದುವೆ ಆಗಿ ನಾನೇ ಡಾನ್ ಆಗಬೇಕು ಅಂದವರನ್ನು ಮಾರಿ ನಿರ್ದಾಕ್ಷಿಣ್ಯವಾಗಿ ಕತ್ತರಿಸಿ ಬಿಸಾಕುತ್ತಾನೆ. ಇವನು ಕುಟಂಬದ ಮರ್ಯಾದೆಗೆ ತನ್ನ ತಂಗಿ ಪ್ರೀತಿಸಿ ಮದುವೆಯಾದ ಅವಳ ಗಂಡನನ್ನೇ ತಂಗಿಗೆ ಗೊತ್ತಿಲ್ಲದಂತೆ
ಬಾಲ್ಯದಲ್ಲೇ ಕುತ್ತಿಗೆ ಕೊಯ್ದು ಸಾಯಿಸಿರುತ್ತಾನೆ.
ಅಂತಹದರಲ್ಲಿ ತನ್ನ ಮಗಳನ್ನು ಪ್ರೀತಿಸುತ್ತಿರುವ ಅನಾಥ ಹುಡುಗನನ್ನು ಏನು ಮಾಡಬಲ್ಲ ಅನ್ನುವುದು ಕಥೆಯ ಕುತೂಹಲ.
ಮಾರಿಯ ತಂಗಿಯಾಗಿ, ಭೂಮಿಯ ಅತ್ತೆಯಾಗಿ ಹಿರಿಯ ನಟಿ ಶೃತಿ ಡಾ,, ಮಮತ ಆಗಿ ಪಾತ್ರ ನಿರ್ವಹಿಸಿದ್ದಾರೆ. ಆಕೆ ಶ್ರೀಮಂತೆ ಅನ್ನುವುದಕ್ಕೆ ಆಕೆಯ ಎಂಟ್ರಿಗೆ ಮೊದಲು ಐಶಾರಾಮಿಯ ಕಾರು ಪ್ರದರ್ಶನ ವಾಗುತ್ತದೆ.
ಅಷ್ಟು ಶ್ರೀಮಂತೆಯಾದರು ಡಾ, ಮಮತ ಆಟೋದಲ್ಲಿ ಓಡಾಡುತ್ತಾರೆ ಕಾರಣ ನಿರ್ದೇಶಕರು ತಿಳಿಸಿಲ್ಲ, ಒಂದೇ ಊರಿನಲ್ಲಿದ್ದರೂ ಅಣ್ಣನ ಮಗಳು ಜೋತೆಯಲ್ಲೇ ತಿರುಗಾಡಿದರು ಅಣ್ಣ ಮಾರಿಗೆ ತಂಗಿ ಇದೇ ಊರಿನಲ್ಲಿರುವುದು ಗೊತ್ತಿರುವುದಿಲ್ಲ ಕಾರಣ ನಿರ್ದೇಶಕರು ಹೇಳಿಲ್ಲ,
ಅಕಸ್ಮಾತ್ತಾಗಿ ಆಟೋ ದಲ್ಲಿ ದೇವಸ್ಥಾನಕ್ಕೆ ಹೋಗುವಾಗ ನಾಯಕನ ಪರಿಚಯವಾಗುತ್ತದೆ. ಅನಾಥ ಹುಡುಗನಿಗೆ ತಾಯಿಯ ಸ್ಥಾನದಲ್ಲಿ ಕುತ್ತಿಗೆಗೆ ಗಣೇಶನ ಸರ ಹಾಕಿ ವಿಸಿಟಿಂಗ್ ಕಾರ್ಡ್ ಕೊಟ್ಟು ಏನೇ ಸಹಾಯ ಬೇಕಾದರೆ ಫೋನ್ ಮಾಡು ಅನ್ನುವ ಡಾ, ಮಮತ ನಾಯಕ,ನಾಯಕಿ ಮತ್ತೆ ಮತ್ತೆ ಬೇಟಿಯಾಗಲೂ ಕಾರಣವಾಗುತ್ತಾಳೆ.
ಡಾ,, ಸ್ಕೆಥಸ್ಕೋಪ್ ಹಿಡಿಯುವುದಕಿಂತ ಗನ್ನು ಹಿಡಿಯುವುದರಲ್ಲಿ ಚನ್ನಾಗಿ ಅಭಿನಯಿಸಿದ್ದಾರೆ ಶೃತಿಯವರು.
ಐಶಾರಾಮಿ ಹುಡುಗಿ ಸ್ಲಂನಲ್ಲಿ ಬೆಳೆದ ಹುಡುಗ ಒಂದಾಗುತ್ತಾರಾ, ಮಗಳನ್ನು ಪ್ರೀತಿಸಿದವರ, ಕಾಮಿಸಿದವರ ತಲೆ ತೆಗೆಯುವ ಮಾರಿ ಇವರಿಬ್ಬರ ಪ್ರೀತಿಗೆ ಒಪ್ಪುತ್ತಾನಾ, ಮೊದಲ ದೃಶ್ಯದಲ್ಲೇ ಕೊಲೆ ಮಾಡಿ ಜೈಲು ಸೇರುವ ಸೂರ್ಯ ಕಾನೂನಿಂದ ಬಚಾವಾಗುತ್ತಾನಾ, ಹೆಣ್ಣು ಮಕ್ಕಳ ಕಳ್ಳಸಾಗಣೆಯ ದಂಧೆ ಹೇಗೆ ನಿಲ್ಲುತ್ತದೆ, ಹೂ ಮಾರುವ ಹುಡುಗಿಯ ಪ್ರೀತಿ ಹೇಗೆ ಕೊನೆಯಾಗುತ್ತದೆ, ಅಣ್ಣ ಮಾರಿಯಿಂದ ತನ್ನ ಗಂಡ ಮಗುವನ್ನು ಕಳೆದುಕೊಂಡ ಡಾ,, ಮಮತ ಹೇಗೆ ಅಣ್ಣನಿಗೆ ತಿರುಗಿ ಬೀಳುತ್ತಾಳೆ ಈ ಎಲ್ಲಾ ಪ್ರೆಶ್ನೆಗಳಿಗೆ ಪ್ರೇಕ್ಷಕರು ಖಂಡಿತವಾಗಿ ಸಿನಿಮಾ ನೋಡಬೇಕಾಗುತ್ತದೆ.
ಸೂರ್ಯನ ಶಾಕಕ್ಕೆ ಭೂಮಿಯ ಗಲ್ಲ ಕೆಂಪಗಾಗುತ್ತದೆ ಎನ್ನುವುದನ್ನು ಉತ್ತರಕನ್ನಡದ ಸೊಗಡಿನಲ್ಲಿ ಕೆಂಪಾನೆ ಗಲ್ಲದ ಹುಡುಗಿ ನೀ ಎಂಗಂಗೋ ನೋಡಬ್ಯಾಡ ತಿರುಗಿ ಎಂಬ ಪ್ರೇಮಗೀತೆ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನಬಹುದು.
ಚಿತ್ರದ 5 ಹಾಡುಗಳಿಗೆ ಸಂಗೀತದ ಜವಾಬ್ದಾರಿಯನ್ನು ಶ್ರೀಶಾಸ್ತ ಚನ್ನಾಗಿ ನಿಭಾಯಿಸಿದ್ದಾರೆ. ಹಾಗೂ ಮನುರಾಜ್ ತಮ್ಮ ಛಾಯಾಗ್ರಹಣದಿಂದ ಕಥೆಯನ್ನು ಚನ್ನಾಗಿ ದೃಶ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ.
ಪ್ರಮೋದ್ ಶೆಟ್ಟಿ ಬಾಂಡ್ ಬಸು ಹೆಸರಿನ ಬಡ್ಡಿ ವ್ಯವಹಾರದವನಾಗಿ ನಾಯಕ ಓದುವುದಕ್ಕೆ ಸಹಾಯ ಮಾಡುವ ಹಾಗೂ ಸ್ಲಂ ಜನರಿಂದ ಹಣ ಕಿತ್ತು ಅವರಿಗೆ ಗೊತ್ತಿಲ್ಲದೇ ಅವರಿಗೆ ಒಳ್ಳೆಯದನ್ನು ಮಾಡುವಂತ ಕಟುಕನಂತೆ ಕಂಡರೂ ಒಳ್ಳೆಯ ಮನುಷ್ಯನಾಗಿ ಪಾತ್ರ ನಿರ್ವಹಿಸಿದ್ದಾರೆ.
ಇನ್ನು ಚಿತ್ರದ ನಿರ್ಮಾಪಕರಾದ ಬೆಣ್ಣೆ ವಂಶದ ಸಹೋದರಾದ ಬಸವರಾಜ ಬೆಣ್ಣೆ, ರವಿ ಬೆಣ್ಣೆ ಪೋನದಲ್ಲಿ ನೆಲೆಸಿರುವ ಕನ್ನಡಿಗರು. ಅಲ್ಲೇ ಉದ್ಯಮಿಗಳಾಗಿರುವ ಇವರು ಕನ್ನಡದಲ್ಲಿ ಸಿನಿಮಾ ನಿರ್ಮಿಸಿ ತಾವು ಹುಟ್ಟಿ ಬೆಳೆದ ಕನ್ನಡ ನಾಡಿನ ಮೇಲಿನ ಪ್ರೀತಿಯನ್ನು ಈ ಮೂಲಕ ತೋರಿಸಿದ್ದಾರೆ.
ಪೋಲೀಸ್ ಅಧಿಕಾರಿಯಾಗಿ ಹಿರಿಯ ನಟ, ನಿರ್ದೇಶಕ ಟಿ.ಎಸ್. ನಾಗಾಭರಣ ಅಭಿನಯಿಸಿದ್ದಾರೆ.
ಚಿತ್ರ ಪೂನ ಮತ್ತು ಉತ್ತರ ಕರ್ನಾಟಕದ ಭಾಗದಲ್ಲಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ.
ಮಣಿಕಂಠ ಕೆ.ವಿ. ಅವರ ಸಂಭಾಷಣೆ, ನರಸಿಂಹ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಮಿದೆ.
ಒಟ್ಟಿನಲ್ಲಿ 80ರ ದಶಕದ ಸೊಗಡಿನ ಕಥೆಯನ್ನು ಇಂದಿನ ಕಾಲಗಟ್ಟದ ಪ್ರೇಕ್ಷಕರಿಗೆ ನಿರ್ದೇಶಕರು ಕಟ್ಟಿಕೊಟ್ಟಿದ್ದಾರೆ, ಒಟ್ಟಿನಲ್ಲಿ ಆಕ್ಷನ್ ಲವ್ ಸ್ಟೋರಿಯನ್ನು ಪ್ರೇಕ್ಷಕರು ಕಣ್ತುಂಬಿ ಕೊಳ್ಳಬಹುದು.











