“Sanju Weds Geetha 2” movie Re release on June 6th 2025. ಮತ್ತೆ ,’ಸಂಜು ವೆಡ್ಸ್ ಗೀತಾ -2′ ಜೂನ್ 6ಕ್ಕೆ ಮರು ಬಿಡುಗಡೆ.
ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ -2 ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಿತ್ತು. ಮೊದಲ ಭಾಗದ ಚಿತ್ರವನ್ನು ನೋಡಿದ್ದ ಪ್ರೇಕ್ಷಕರಿಗೆ ಎರಡನೇ ಭಾಗ ತುಂಬಾ ಅದ್ಭುತ ವಾಗಿರುತ್ತೆ ಎನ್ನುವ ಕುತೂಹಲವನ್ನು ಭಾಗ2 ಬೇಸರವನ್ನು ಮೂಡಿಸಿತ್ತು. ನಿರ್ಮಾಪಕರ ಹಣ ನೀರಿನಂತೆ ಹರಿದಿದ್ದರು ಚಿತ್ರದ ಕಥೆ, ನಿರೂಪಣೆ ಯಾವುದೇ ರೀತಿಯಲ್ಲಿ ಅಷ್ಟು ಚನ್ನಾಗಿ ಮೂಡಿಬಂದಿರಲಿಲ್ಲ.
ಜೊತೆಗೆ ಹಲವಾರು ಅಡೆತಡೆಗಳನ್ನು ಎದುರಿಸಿ, ಜ.17ರಂದು
ತರಾತುರಿಯಲ್ಲಿ ಬಿಡುಗಡೆಯಾಗಿತ್ತು.ಪ್ರೇಕ್ಷಕರು ಸಂಜು ವೆಡ್ಸ್ ಗೀತಾ-2 ಚಿತ್ರದ ಟ್ರೇಲರ್, ಸಾಂಗ್ಸ್, ಅದ್ದೂರಿ ಮೇಕಿಂಗ್ ಎಲ್ಲವನ್ನೂ ತುಂಬಾ ಇಷ್ಟ ಪಟ್ಟಿದ್ದರು. ಚಿತ್ರದ ಕ್ಯಾಮೆರಾ ವರ್ಕ್ ಎಲ್ಲಾ ಅದ್ಭುತವಾಗಿದ್ದರೂ, ಚಿತ್ರದ ನಿರೂಪಣೆ ಅಂದುಕೊಂಡ ಹಾಗೆ ಬಂದಿರಲಿಲ್ಲ. “ಸಂಜು ವೆಡ್ಸ್ ಗೀತ” ಎಂಬ ಯಶಸ್ವಿ ಚಿತ್ರದ ಹೆಸರು ಈ ಚಿತ್ರಕ್ಕೆ ಇಡಬಾರದಿತ್ತು ಎನ್ನುವ ಮಾತು ಸಿನಿ ಪ್ರೇಮಿಗಳಿಂದ ಕೇಳಿ ಬಂದಿತ್ತು.

ಎಲ್ಲೋ ಒಂದು ಕಡೆ ಚಿತ್ರವನ್ನು ಇನ್ನೂ ಚೆನ್ನಾಗಿ ಮಾಡಬಹುದಿತ್ತು ಎಂಬ ಅಭಿಪ್ರಾಯ ಪ್ರೇಕ್ಷಕರದಾಗಿತ್ತು. ಬಿಡುಗಡೆ ಸಂದರ್ಭದಲ್ಲಿ ಒಂದಷ್ಟು ಆತಂಕ ಸೃಷ್ಟಿಯಾಗಿದ್ದ ಕಾರಣ ಎಲ್ಲವನ್ನೂ ಗಮನಿಸಲು ಸಾಧ್ಯವಾಗಿದ್ದಿಲ್ಲ ಎನ್ನುತ್ತದೆ ಚಿತ್ರತಂಡ.
ಹಾಗಾಗಿ ಮೂರೇ ದಿನದಲ್ಲಿ ಚಿತ್ರದ ಪ್ರದರ್ಶನವನ್ನು ಎಲ್ಲಾ ಕೇಂದ್ರಗಳಲ್ಲಿ ಸ್ಥಗಿತಗೊಳಿಸಲಾಗಿತ್ತು. ಈಗ ಹೊಸದಾಗಿ 21 ನಿಮಿಷಗಳ ಹೃದಯ ಸ್ಪರ್ಶಿ ಚಿತ್ರಣವನ್ನು ಚಿತ್ರಕ್ಕೆ ಮರು ಜೋಡಿಸಲಾಗಿದ್ದು, ಇದೀಗ ಜೂನ್ 6ರಂದು ಹೊಸ ವರ್ಷನ್ ರಿಲೀಸ್ ಮಾಡುವ ಸಿದ್ದತೆ ನಡೆದಿದೆ, ಫಿಲಂ ಚೇಂಬರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರತಂಡ ಈ ಬಗ್ಗೆ ಮಾಹಿತಿ ಹಂಚಿಕೊಂಡಿತು.

ಫಿಲಂ ಚೇಂಬರ್ ಅಧ್ಯಕ್ಷ ನರಸಿಂಹಲು ಮಾತನಾಡುತ್ತ ಯಾವುದೇ ಚಿತ್ರತಂಡ ನಮ್ಮ ಬಳಿ ಬಂದಾಗ ಚೇಂಬರ್ ಸಂಪೂರ್ಣ ಸಹಕಾರ ನೀಡುತ್ತ ಬಂದಿದೆ. ಸಂಜು ವೆಡ್ಸ್ ಗೀತಾ -2 ಚಿತ್ರದ ನಿರ್ಮಾಪಕರು ಜೂನ್ 6 ರಂದು ರಿಲೀಸ್ ಮಾಡಬೇಕು ಎಂದುಕೊಂಡಿದ್ದಾರೆ.ಇವರಿಗೆ ನಾವು ಸಂಪೂರ್ಣ ಸಹಕಾರ ಕೊಡುತ್ತೇವೆ. ಈಗ. ಚಿತ್ರಕ್ಕೆ ಹೆಚ್ಚಿನ ಸೀನ್ ಸೇರಿಸಿದ್ದು, ಮೊದಲಿಗಿಂತ ಉತ್ತಮವಾಗಿದೆ ಎಂದರು.
ಚಿತ್ರದ ನಿರ್ಮಾಪಕ ಛಲವಾದಿ ಕುಮಾರ್ ಮಾತನಾಡುತ್ತ ರಿಲೀಸ್ ಗೆ 3 ದಿನ ಇರುವಾಗ ಸ್ಟೇ ತಂದಿದ್ದರಿಂದ ನಮಗೆ ತುಂಬಾ ತೊಂದರೆ ಆಯ್ತು. ಎಲ್ಲಾ ಥೇಟರ್ ಸೆಟಪ್ ಆಗಿದ್ದರಿಂದ ಸ್ಟೇ ವೆಕೇಟ್ ಮಾಡಿಸಿ ಸಿನಿಮಾ ಬಿಡುಗಡೆ ಮಾಡಲೇಬೇಕಿತ್ತು. ಆನಂತರ ಮೂರು ದಿನದಲ್ಲಿ ಸಿನಿಮಾ ಸ್ಟಾಪ್ ಮಾಡಿಸಿದೆವು. ಈಗ 20 ನಿಮಿಷಗಳ ಪ್ರಮುಖವಾದ ಹಾರ್ಟ್ ಟಚಿಂಗ್ ಸೀನ್ ಸೇರಿಸಿ ಜೂನ್ 6ಕ್ಕೆ ರಿಲೀಸ್ ಮಾಡುತ್ತಿದ್ದೇವೆ. ಶಿವಣ್ಣ, ಸುದೀಪ್, ಉಪೇಂದ್ರ, ಚೇಂಬರ್ ಹೀಗೆ ಎಲ್ಲರೂ ನಮಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಹೇಳಿದರು.

ನಿರ್ದೇಶಕ ನಾಗಶೇಖರ್ ಮಾತನಾಡಿ ನಾನೇ ನಿರ್ಮಾಪಕ ಅಂತ ಸ್ಟೇ ತಂದಿದ್ದರು. ನಿರ್ಮಾಪಕರಿಗೆ ಸಂಬಂಧವಿಲ್ಲದ ವಿಷಯಕ್ಕೆ,ತೊಂದರೆ ಅನುಭವಿಸಬೇಕಾಯ್ತು. 21 ನಿಮಿಷದ ಸಿಜಿ ಪ್ಲಾನ್ ಇತ್ತು. ಅದೇ ಚಿತ್ರದ ಹೃದಯಸ್ಪರ್ಶಿ ಭಾಗ. ಅದೇ ಇಲ್ಲದೆ ಸಿನಿಮಾ ರಿಲೀಸಾಗಿತ್ತು. ಈಗ 21 ನಿಮಿಷ ಸೇರಿಸಿ ಎಸ್.ಮಹೇಂದರ್ ಅವರಿಗೆ ತೋರಿಸಿದೆವು. ಅವರು ಬಹಳ ಅದ್ಭುತವಾಗಿದೆ ಎಂದು ಮೆಚ್ಚಿಕೊಂಡರು. ಇಂದು ಎಸ್.ನಾರಾಯಣ್, ಎಪಿ.ಅರ್ಜುನ್ ಸೇರಿದಂತೆ 22 ಜನ ನಿರ್ದೇಶಕರಿಗೆ ಸಿನಿಮಾ ತೋರಿಸುತ್ತಿದ್ದೇವೆ. ಜಯಣ್ಣ ಫಿಲಂಸ್ ರಿಲೀಸ್ ಮಾಡ್ತಿದೆ. ಶಿವಣ್ಣ, ಜೂನ್ 2 ರಂದು ಪ್ರಿರಿಲೀಸ್ ಇವೆಂಟ್ ಮಾಡ್ತಿದ್ದೇವೆ. ರಾಕ್ ಲೈನ್ ವೆಂಕಟೇಶ್, ಕೆಪಿ.ಶ್ರೀಕಾಂತ್ ಸೇರಿದಂತೆ ಚಿತ್ರರಂಗದ ಅನೇಕರು ಸಪೋರ್ಟ್ ಮಾಡ್ತಿದ್ದಾರೆ. ಹಿಂದೆ ಕೆಲ ಸಿನಿಮಾಗಳು ರಿರಿಲೀಸಾಗಿ ಸೂಪರ್ ಹಿಟ್ ಆಗಿವೆ. ಅದೇ ಭರವಸೆಯಿಂದ ನಾವು ಜನರ ಮುಂದೆ ಬರ್ತಿದ್ದೇವೆ. ಆಗ ಸಿನಿಮಾ 2ಗಂಟೆ 02 ನಿಮಿಷ ಇತ್ತು. ಈಗ 2 ಗಂಟೆ 23 ನಿಮಿಷ ಆಗಿದೆ. ನಮಗೆ ನಿರ್ಮಾಪಕರು ತುಂಬಾ ಸಪೋರ್ಟ್ ಮಾಡ್ತಿದ್ದಾರೆ, ನಮ್ಮ ಪ್ರಯತ್ನಕ್ಕೆ ಮಾಧ್ಯಮದವರ ಬೆಂಬಲ ಹಚ್ಚು ಬೇಕಾಗಿದೆ ಎಂದು ವಿನಂತಿಸಿಕೊಂಡರು.