Okay movie film shooting started. OKಗೆ ಆಕ್ಷನ್ ಕಟ್ ಹೇಳಲು ಓಕೆ ಎಂದ ಸಂಗೀತ ನಿರ್ದೇಶಕ ಹಂಸಲೇಖ

ಹಂಸಲೇಖ ನಿರ್ದೇಶನದ ‘ಓಕೆ’ ಸಿನಿಮಾಗೆ ರವಿಚಂದ್ರನ್ ಹಾರೈಕೆ; ಕಥೆಗಳಲ್ಲಿ ಕನ್ನಡದ DNA ಇದ್ರೆ ಜನ ಚಿತ್ರ ನೋಡ್ತಾರೆ ಎಂದ ನಾದಬ್ರಹ್ಮ

ಕನ್ನಡ ಚಿತ್ರರಂಗದ ದಿಗ್ಗಜರೊಬ್ಬರಲ್ಲಿ ಒಬ್ಬರು ಹಂಸಲೇಖ. ಸಂಗೀತ ನಿರ್ದೇಶಕರಾಗಿ, ಚಿತ್ರ ಸಾಹಿತಿಯಾಗಿ ಗೆದ್ದಿರುವ ಹಂಸಲೇಖ ಈಗ ಡೈರೆಕ್ಟರ್‌ ಕ್ಯಾಪ್‌ ತೊಟ್ಟಿದ್ದಾರೆ. ಹಂಸಲೇಖ ಈಗ ಡೈರೆಕ್ಟರ್‌ ಕುರ್ಚಿ ಅಲಂಕರಿಸಿದ್ದು, ‘ಓಕೆ’ ಎಂಬ ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾರೆ. ‘ಓಕೆ’ ಚಿತ್ರದ ಲಾಂಚ್‌ ಹಾಗೂ ಸುದ್ದಿಗೋಷ್ಠಿ ನಿನ್ನೆ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಕ್ರೇಜಿಸ್ಟಾರ್‌ ರವಿಚಂದ್ರನ್‌ ವಿಶೇಷ ಅತಿಥಿಯಾಗಿ ಹಂಸಲೇಖ ಸಿನಿಮಾಗೆ ಸಾಥ್‌ ಕೊಟ್ಟರು.

ಬಳಿಕ ಮಾತನಾಡಿದ ಕ್ರೇಜಿಸ್ಟಾರ್‌ ರವಿಚಂದ್ರನ್‌, ಇಂದು ಶೂಟಿಂಗ್ ಕ್ಯಾನ್ಸಲ್ ಮಾಡಿ ಕನಕಪುರದಿಂದ ನಾನು ಈ ಕಾರ್ಯಕ್ರಮಕ್ಕೆ ಓಡಿಬಂದೆ. ಎಲ್ಲಿಂದ ಮಾತು ಶುರು ಮಾಡಬೇಕು ಎಂಬುದೇ ಗೊತ್ತಾಗುತ್ತಿಲ್ಲ. ನೀವು ರಾಜು (ಹಂಸಲೇಖ). ಆದರೆ ನನ್ನನ್ನು ಪರದೆ ಮೇಲೆ ರಾಜನಾಗಿ ಮೆರವಣಿಗೆ ಮಾಡಿಸಿದ್ದು ನೀವೇ. ನಾನು ಪರದೆಯಲ್ಲಿ ಮೆರೆದಿದ್ದರೆ ಅದಕ್ಕೆ ನೀವು ಮತ್ತು ನಿಮ್ಮ ಹಾಡುಗಳು ಕಾರಣ. ಸಿನಿಮಾ ಓಡುತ್ತಿಲ್ಲ ಅಂತ ಜನ ಹೇಳ್ತಾರೆ. ಆದರೆ ಪ್ರತಿ ವಾರ ಎಲ್ಲರೂ ಸಕ್ಸಸ್ ಮೀಟ್ ಮಾಡುತ್ತಿದ್ದಾರೆ. ಅದು ಸಮಸ್ಯೆ ಆಗಿದೆ.

1986ರಲ್ಲಿ ನಾವು ಕೊಡಲು ಶುರು ಮಾಡಿದೆವಲ್ಲ ಅದು ಸಕ್ಸಸ್. ಒಂದು ದಿನವೂ ನಾವು ಸಕ್ಸಸ್ ಅನ್ನು ಹೆಗಲಮೇಲೆ ಹಾಕಿಕೊಳ್ಳಲಿಲ್ಲ. ಯಾಕೆಂದರೆ ಒಂದು ಸಿನಿಮಾ ಆಗುತ್ತಿದ್ದಂತೆಯೇ ಇನ್ನೊಂದು ಸಿನಿಮಾ ಶುರು ಮಾಡುತ್ತಿದ್ದೆವು. ಹಂಸಲೇಖ ನನಗೆ ಸಿಕ್ಕಿದ್ದು ವಿಧಿ ಬರಹದಿಂದ. ನನ್ನ ಮತ್ತು ಹಂಸಲೇಖ ಸ್ನೇಹದಲ್ಲಿ ಲೆಕ್ಕಾಚಾರ ಇರಲಿಲ್ಲ. ನನಗೆ ಲೆಕ್ಕಾಚಾರ ಗೊತ್ತಿಲ್ಲ. ಸಿನಿಮಾ ಮಾಡುವುದು ಮಾತ್ರ ನನಗೆ ಗೊತ್ತು. ಇಂದಿಗೂ ಯಾರಾದರೂ ಪ್ರೇಮಲೋಕ, ರಣಧೀರ ಸಿನಿಮಾಗಳ ಲಾಭ ಎಷ್ಟು ಅಂತ ಕೇಳಿದರೆ ನನಗೆ ಗೊತ್ತಿಲ್ಲ. ಎನ್.ಎಸ್. ರಾವ್ ಅವರು ನನಗೆ ಹಂಸಲೇಖ ಅವರ ಪರಿಚಯ ಮಾಡಿಕೊಟ್ಟರು. ನನ್ನ ಮತ್ತು ಹಂಸಲೇಖ ಸ್ನೇಹ ಕಲ್ಮಶ ಇಲ್ಲದ್ದು. ಹೆಗಲ ಮೇಲೆ ಕೈ ಹಾಕಿಕೊಂಡು ಹೋಗಿಲ್ಲ. ಬಾರಲ್ಲಿ ಕುಳಿತಿಲ್ಲ. ಒಟ್ಟಿಗೆ ಸಿನಿಮಾ ಮಾಡಿದೆವು ಅಷ್ಟೇ’ ಎಂದರು.

ಹಂಸಲೇಖ ಮಾತನಾಡಿ, ನಾನು ಈ ಕಾರ್ಯಕ್ರಮಕ್ಕೆ ರವಿಚಂದ್ರನ್‌ ಸ್ವಾಗತಿಸಲು ಅವರನ್ನು ಭೇಟಿಯಾಗಿದ್ದೆ. ಎರಡೂವರೆ ಗಂಟೆ ಕಾಲ ಉದ್ಯಮದ ಬಗ್ಗೆ, ಆಗುಹೋಗುಗಳ ಬಗ್ಗೆ ಮಾತನಾಡಿದ್ದೇವು. ಯಾಕೆ ಈ ಜನ ರಾಮಚಾರಿ, ಹಳ್ಳಿಮೇಸ್ಟ್ರು, ರಾಜಾಹುಲಿ ತರ ಸಿನಿಮಾ ಮಾಡ್ತಿಲ್ಲ ಎಂದು ಕೇಳಿದರು. ಅವರು ಯಾಕೆ ಇದನ್ನು ಮಾಡ್ತಿಲ್ಲ. ಅವರು 10 ಕೆಜಿ ಕಡಿಮೆ ಮಾಡಿಕೊಂಡ್ರೆ ಸುರದ್ರೂಪಿ ನಟ. ಸುರಸುಂದರ ನಟ. ಸಂಗೀತ ಹುಚ್ಚಿರುವ ವ್ಯಕ್ತಿ. ಚಿಕ್ಕ ಚಿಕ್ಕ ಚಿತ್ರ ಮಾಡಬಹುದು. ಆದ್ರೆ ಈ ಟೆಕ್ನಾಲಾಜಿ ಹಿಂದೆ ಹೋಗಿ ಪ್ಯಾನ್‌ ಇಂಡಿಯಾ ಮಾತನಾಡುತ್ತಿದ್ದಾರೆ. ನಮ್ಮ ಉದ್ಯಮ ಕೂಡ ಆ ಕಡೆ ತಿರುಗಿದೆ. ನಮ್ಮಲ್ಲಿ 150-200 ಜನ ನಿರ್ದೇಶಕರಿದ್ದಾರೆ. ಅವರೆಲ್ಲರೂ ಪ್ರಯೋಗಳನ್ನೂ ಮಾಡುತ್ತಿದ್ದಾರೆ.

ಪ್ರಯೋಗ ಪ್ರಯೋಗಶಾಲೆಗೆ. ಅಡುಗೆ ಮನೆಗಲ್ಲ. ಸಿನಿಮಾ ಅಂದ್ರೆ ಹಾಡು, ಸಂಭಾಷಣೆ, ಹಾಸ್ಯ. ಈ ರೀತಿ ಇದ್ರೆ ಪ್ರೇಕ್ಷಕರಿಗೆ ರುಚಿ. ಹಳ್ಳಿಕಡೆ ಸಂತೆಬೆಳೆ. ಮನೆಬೆಳೆ ಅಂತಾ ಒಂದನ್ನು ಬೆಳೆಯುತ್ತಾರೆ. ಸಂತೆಬೆಳೆ ಕಬ್ಬು. ಅದನ್ನು ದಿನ ತಿನಲು ಅಷ್ಟೇ. ಹಾಗೆಯೇ ಮನೆಬೆಳೆ ಅಂದ್ರೆ ಈರುಳ್ಳಿ, ಬದನೇಕಾಯಿ, ಆಲೂಗಡ್ಡೆ, ಅದೇ ರೀತಿ ನಮ್ಮ ಸಂಸ್ಕೃತಿ ಇರುವ ಕಥೆಗಳ ಚಿಕ್ಕ ಚಿಕ್ಕ ಸಿನಿಮಾ ಮಾಡಬೇಕು ಅಗತ್ಯ ಎನಿಸುತ್ತಿದೆ. ನನ್ನ ಬಳಿ ಸಾಕಷ್ಟು ಕಥೆ ಇವೆ. ಆದ್ರೆ ನಾನು ಈ ಸಿನಿಮಾ ಮಾಡಬೇಕು ಎಂದುಕೊಂಡೆ. ಐದು ವರ್ಷಗಳ ಹಿಂದೆ ಆದಿಪ್‌ ಅಖ್ತರ್ ಪಂಜರ ಎಂಬ ಕಥೆ ಬರೆದಿದ್ದರು. ಕಥೆ ಓದಿ ಅವರನ್ನು ಕರೆಸಿ ಸಹಿ ಮಾಡಿಸಿಕೊಂಡು ಅಡ್ವಾನ್ಸ್‌ ಕೊಟ್ಟೆ. ಮಣ್ಣಿನಗುಣವಿರುವ ಕಥೆಗಳು, ಕಥೆಗಾರರು ನಮ್ಮ ಸಿನಿಮಾ ಬೇಕು. ಅದು ಬಂದ್ರೆ ಕಾಮನ್‌ ಆಡಿಯನ್ಸ್‌ ಬೇಗ ಬೇಗ ಚಿತ್ರರಂಗ ಆನಂದಿಸುತ್ತಾರೆ. ಕಥೆಗಳಲ್ಲಿ ಕನ್ನಡದ ಡಿಎನ್‌ಎ ಇದ್ರೆ ಜನ ಚಿತ್ರ ನೋಡುತ್ತಾರೆ. ಈ ಚಿತ್ರದ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಕರೆತರುವ ದೊಡ್ಡ ಆಂದೋಲ ಸಾಮಾಜಿಕ, ಶೈಕ್ಷಣಿಕ, ಪ್ರೀತಿಯಿಂದ ನಡೆಸಿಕೊಳ್ಳಲು ನಿರ್ಧಾರ ಮಾಡಿದ್ದೇವೆ ಎಂದು ಹೇಳಿದರು.

ಹಂಸಲೇಖ ಅವರು ಸಿನಿಮಾ ನಿರ್ದೇಶನ ಸಿನಿಮಾಕ್ಕೆ ಚಾಲನೆ ಸಹ ದೊರೆತಿದೆ. ಸಿಎಂ ಸಿದ್ದರಾಮಯ್ಯ ಅವರು ಹಂಸಲೇಖ ಅವರ ಸಾಹಸಕ್ಕೆ ಶುಭಾಶಯ ತಿಳಿಸಿದ್ದಾರೆ. ಹಂಸಲೇಖ ಅವರು ‘ಓಕೆ’ ಹೆಸರಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದಾರೆ. ಹಂಸಲೇಖ ನಿರ್ದೇಶನ ಮಾಡಲಿರುವ ಸಿನಿಮಾಕ್ಕೆ ನಾಗೇಶ್ ವಾಷ್ಟರ್ ಮತ್ತು ಸೂರ್ಯಪ್ರಕಾಶ್ ಬಂಡವಾಳ ತೊಡಗಿಸಿದ್ದಾರೆ. ಈ ಸಿನಿಮಾವನ್ನು ಆಕಾಂಕ್ಷ ಪ್ರೊಡಕ್ಷನ್ ಮತ್ತು ಐದನಿ ಎಂಟರ್ಟೈನ್ ಮೆಂಟ್ ಸಂಸ್ಥೆಯ ವತಿಯಿಂದ ನಿರ್ಮಾಣ ಮಾಡಲಾಗುತ್ತಿದೆ. ಐದನಿ, ಹಂಸಲೇಖ ಅವರದ್ದೆ ಸಂಸ್ಥೆಯಾಗಿದೆ. ಮುಂದಿನ ದಿನಗಳಲ್ಲಿ ಕಲಾವಿದರನ್ನು ಘೋಷಿಸಲಾಗುವುದು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor