ಲ್ಯಾಂಡ್ ಲಾರ್ಡ್ ಚಿತ್ರ ವಿಮರ್ಶೆ – ಮುಗ್ದತೆಯ ರಕ್ಕಸತನ
ಚಿತ್ರ – ಲ್ಯಾಂಡ್ ಲಾರ್ಡ್
ನಿರ್ಮಾಪಕರು – ಕೆ.ವಿ. ಸತ್ಯ ಪ್ರಕಾಶ್, ಸೂರಜ್ ಗೌಡ
ನಿರ್ದೇಶನ – ಜಡೇಶ್ ಹಂಪಿ
ಛಾಯಾಗ್ರಹಣ – ಸ್ವಾಮಿ ಜೆ. ಗೌಡ
ಸಂಗೀತ – ಅಜನೀಶ್ ಲೋಕನಾಥ್
Rating -3.5/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು :- ದುನಿಯಾ ವಿಜಯ್, ಉಮಾಶ್ರೀ , ಶರತ್ ಲೋಹಿತಾಶ್ವ, ರಚಿತಾರಾಮ್, ರಾಜ್ ಬಿ.ಶೆಟ್ಟಿ, ರಾಕೇಶ್ ಅಡಿಗ, ಅಚ್ಯುತ್ ಕುಮಾರ್, ಗೋಪಾಲ್ ಕೃಷ್ಣ ದೇಶಪಾಂಡೆ, ಮಿತ್ರ, ಭಾವನಾ ರಾವ್, ರಿತನ್ಯ ಮುಂತಾದವರು.

ಶತ ಶತಮಾನಗಳಿಂದಲೂ ಮೇಲು ಕೀಳಿನ ದಳ್ಳುರಿಯ ಬಾಣಲೆಯಲ್ಲಿ ಬೆಂದವರ ಕಥೆಗೆ “ಲ್ಯಾಂಡ್ ಲಾರ್ಡ್” ಚಿತ್ರ ಸಾಕ್ಷಿಯಾಗಿದೆ.
ವಿಷಯ ಹಳೆಯದಾದರೂ ಹೇಳಿರುವವರು ಮತ್ತು ಹೇಳಿರುವುದು ವಿಭಿನ್ನವಾಗಿದೆ.
ಹಿಂದಿನಿಂದಲೂ ನಡೆದುಕೊಂಡು ಬಂದ ಒಂದಷ್ಟು ಅನಿಷ್ಟ ಪದ್ದತಿಗಳನ್ನು ಇಲ್ಲಿ ದಿಕ್ಕರಿಸಿದ್ದಾರೆ, ಜಮೀನ್ದಾರರ ಅಬ್ಬರಕ್ಕೆ ಹೋರಾಟದ ಮೂಲಕವೇ ತಿಲಾಂಜಲಿ ಹಾಡಲಾಗಿದೆ.
ಇತಿಹಾಗಳಿಂದ ಭೂಮಿಗಾಗಿ ಹೊಡೆದಾಟಗಳು ನಡೆದುಕೊಂಡು ಬಂದಿವೆ, ಮೇಲು ಕೀಳು, ಜಾತೀಯತೆಯ ಗೊಂದಲಗಳ ಕೆಸರಲ್ಲಿ ಮಾನವ ಜನ್ಮ ಹೊರಳಾಡಿ ರಕ್ತಗಳನ್ನು ಹರಿಸಿದೆ ಅದೇ ಮೂಲದ ಕಥೆ ಲ್ಯಾಂಡ್ ಲಾರ್ಡ್.
ಆತ ರಾಚಯ್ಯ, ಕೊಡಲಿ ರಾಚಯ್ಯ (ದುನಿಯಾ ವಿಜಯ್)
ಹತ್ತೇ ಏಟಿಗೆ ಎಂತದ್ದೇ ಮರವಾದರೂ ನೆಲಕ್ಕುರುಳಿಸುವಂತಹ ಪೌರುಷಗಾರ. ಅದೇ ರೀತಿ ಸಮಾಜಘಾತುಕರನ್ನು ಮಿಂಚಿನಂತೆ ಸದೆಬಡಿಯುವಂತ ರಣ ಬೇಟೆಗಾರ.

ಈ ಪಾತ್ರಕ್ಕೆ ದುನಿಯಾ ವಿಜಯ್ ಬಿಟ್ಟರೇ ಬೇರೆ ಯಾರೂ ಕೂಡ ಸರಿ ಹೊಂದುತ್ತಿರಲಿಲ್ಲ ಎನ್ನಬಹುದು. ವಿಜಯ್ ಈ ಪಾತ್ರಕ್ಕೆ ತಮ್ಮ ದೇಹ ಮತ್ತು ಅಭಿನಯ ಕೌಶಲ್ಯತೆಯನ್ನು ಎರಕ ಹೊಯ್ದಿದ್ದಾರೆ. ಪ್ರತೀಯೊಂದು ದೃಶ್ಯದಲ್ಲೂ ವಿಜಯ್ ಬಹಳ ತಾಳ್ಮೆಯಿಂದ ಅಬ್ಬರಿಸಿದ್ದಾರೆ. ವಿಜಯ್ ಮೊದಲ ಚಿತ್ರ ದುನಿಯಾ ನಂತರ ಅದೇ ಮುಗ್ಧತೆಯಿಂದ ಪ್ರೇಕ್ಷಕರನ್ನು ಸೆಳೆದಿದ್ದಾರೆ. ಎರಡು ಶೇಡ್ ಗಳಲ್ಲಿ ವಿಜಯ್ ಪಾತ್ರ ನಿಭಾಯಿಸಿದ್ದಾರೆ. ಅದರಲ್ಲೂ ವಯಸ್ಸಾದ ರಾಚಯ್ಯನ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದ್ದಾರೆ.
ಸೆಂಟಿಮೆಂಟ್, ಮಾನವೀಯತೆ, ಪ್ರೀತಿ, ತುಂಟಾಟ, ಅಕ್ಷನ್, ನೇರ ನುಡಿಯ ದಿಟ್ಟತನ ಎಲ್ಲವೂ ಪ್ರೇಕ್ಷಕನಿಂದ ಶಬ್ಬಾಶ್ ಎನಿಸಿಕೊಂಡು ಚಪ್ಪಾಳೆ, ಶಿಳ್ಳೆ ಗಿಟ್ಟಿಸಿಕೊಂಡಿದ್ದಾರೆ.
ಈ ಪಾತ್ರಕ್ಕೆ ವಿಜಯ್ ರವರಿಗೆ ಅತ್ಯತ್ತಮ ನಟ ಪ್ರಶಸ್ತಿ ಬರುವುದರಲ್ಲಿ ಅನುಮಾನವಿಲ್ಲ. ಅಷ್ಟು ಚನ್ನಾಗಿ ಪಾತ್ರದಲ್ಲಿ ಜೀವಿಸಿದ್ದಾರೆ.

ಇನ್ನು ರಾಜ್ ಬಿ. ಶೆಟ್ಟಿ ಲ್ಯಾಂಡ್ ಲಾರ್ಡ್ ಪಾತ್ರದಲ್ಲಿ ಈ ಚಿತ್ರದ ಭಾಗವಾಗಿದ್ದಾರೆ. ಅಭಿನಯದಲ್ಲಿ ವಿಜಯ್ ಒಂದು ತೂಕವಾದರೆ, ರಾಜ್ ಬಿ ಶೆಟ್ಟಿ ಒಂದು ತೂಕ ಎನ್ನಬಹುದು. ಬರೀ ಕರಾವಳಿಯ ಚಿತ್ರಗಳಲ್ಲಿ ತಮ್ಮ ಅಭಿನಯದ ಕರಾಮತ್ತು ತೋರಿಸಿದ್ದಾ ಶಟ್ರು ಕೋಲಾರದ ಭಾಗದ ಪಾತ್ರವನ್ನು ಚನ್ನಾಗಿ ನಿಭಾಯಿಸಿ ಸೈ ಎನಿಸಿಕೊಂಡಿದ್ದಾರೆ. ಅದರಲ್ಲೂ ಒಬ್ಬ ಕಿರಾತಕ ಜಮೀನ್ದಾರನ ಪಾತ್ರಕ್ಕೆ ಬಣ್ಣ ಹಚ್ಚಿ ತಮ್ಮ ಖಳನಟನ ಕರಾಳ ಮುಖವನ್ನು ಪ್ರೇಕ್ಷಕರ ಮುಂದೆ ಬಿಚ್ಚಿಟ್ಟಿದ್ದಾರೆ.
ಈ ಪಾತ್ರಗಳ ಮೂಲಕ ಅವರಿಗೆ ಇಂತಹ ವಿಲನ್ ಶೈಲಿಯ ಪಾತ್ರಗಳು ಹುಡುಕಿ ಬರುವುದರಲ್ಲಿ ಯಾವುದೇ ಅನುಮಾನವಿಲ್ಲ.
ಈವರಿಗೂ ಈ ಪಾತ್ರಕ್ಕೆ ಅತ್ಯುತ್ತಮ ಖಳನಟ ( ಪೋಷಕ ನಟ) ಪ್ರಶಸ್ತಿ ಸಿಗಬೇಕಾದ್ದು ಅವರ ಪಾತ್ರಕ್ಕೆ ಸಿಗುವ ನ್ಯಾಯ.

ರಚಿತಾ ರಾಮ್ ಗ್ಲಾಮರ್ ಪಾತ್ರವನ್ನು ಪಕ್ಕಕ್ಕಿಟ್ಟು ಮೊದಲಬಾರಿಗೆ ಗ್ರಾಮರ್ ಆಗಿ ಕಾಣಿಸಿಕೊಂಡಿದ್ದಾರೆ.
ಹಾಡು, ಡ್ಯಾನ್ಸ್, ರೊಮ್ಯಾನ್ಸ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ದ ರಚಿತಾರಾಮ್ ಮೊದಲ ಬಾರಿಗೆ ಡಿಗ್ಲಾಮರ್ ಆಗಿ, ರಾಚಯ್ಯನ ಹೆಂಡತಿಯಾಗಿ, ಗಂಡನ ಹೋರಾಟಕ್ಕೆ ಕೊಡಲಿ ಹಿಡಿದು ಸಾಥ್ ನೀಡುವಂತ ಪಾತ್ರದಲ್ಲಿ ಅಭಿನಯಿಸಿ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ, ಬರೀ ಗುಳಿಕೆನ್ನೆಯ ಸೌಂದರ್ಯದಿಂದಷ್ಟೇ ಅಲ್ಲ ಕೊಡಲಿ ಹಿಡಿದು ಒಬ್ಬ ಜವಾಬ್ಧಾರಿಯುತವಾದ ತಾಯಿಯ, ಹೆಂಡತಿಯಾಗಿ ಪ್ರಬುದ್ಧತೆಯ ಪಾತ್ರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡು ಪ್ರೇಕ್ಷಕರ ಮನಸ್ಸನ್ನು ಗೆಲ್ಲಬಲ್ಲೆ ಎನ್ನುವುದನ್ನು ಈ ಪಾತ್ರದ ಮೂಲಕ ರುಜುವಾತು ಮಾಡಿದ್ದಾರೆ.

ಈ ಮೂರು ಪ್ರಮುಖ ಪಾತ್ರಗಳ ನಡುವೆ ಗಮನ ಸೆಳೆಯುವ ಮತ್ತೊಂದು ಪಾತ್ರ ರಾಚಯ್ಯನ ಮಗಳು ರಿತನ್ಯ ವಿಜಯ್.
ನಿಜ ಜೀವನದಲ್ಲಿ ವಿಜಯ್ ಮಗಳಾದ ರಿತನ್ಯ ರೀಲ್ ನಲ್ಲೂ ಮಗಳಾಗಿ ತೆರೆಯ ಮೇಲೆ ಅಪ್ಪನಿಗೆ ಸಾಥ್ ನೀಡುವ ಮೂಲಕ ಒಬ್ಬ ಪೋಲೀಸ್ ಪೇದೆಯಾಗಿ ಕಾಣಿಸಿಕೊಂಡಿದ್ದಾರೆ. ಮೊದಲ ಚಿತ್ರವಾದರೂ ಎಲ್ಲೂ ಅಭಿನಯದಲ್ಲಿ ಅಭಾಸವಾಗದಂತೆ ಪಾತ್ರ ನಿಭಾಯಿಸಿದ್ದಾರೆ.
ಅಪ್ಪ ಮಗಳ ಭಾಂದವ್ಯ ನಿಜ ಜೀವನದಂತೆ ತೆರೆಯ ಮೇಲೆ ಬಂದಿದೆ.

ಇದಕ್ಕೆಲ್ಲ ಕಾರಣ ನಿರ್ದೇಶಕ ಜಡೇಶ್ ಕೆ. ಹಂಪಿ.
ಈಗಾಗಲೇ ಜಂಟಲ್ ಮನ್, ಗುರು ಶಿಷ್ಯರು ಕಥೆಗೆ ಆಕ್ಷನ್ ಕಟ್ ಹೇಳಿ, ಕಾಟೇರದಂತ ಚಿತ್ರಕ್ಕೆ ಕಥೆ ಬರೆದಂತ ಜಡೇಶ್ ಲ್ಯಾಂಡ್ ಲಾರ್ಡ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ಗಂಭೀರತೆಯ ಚಿತ್ರದ ರೂವಾರಿಯಾಗಿದ್ದಾರೆ.
ಈ ಎಲ್ಲಾ ಕಲಾವಿದರಿಂದ ಅಭಿನಯದ ಕೌಶಲ್ಯವನ್ನು ತೆಗೆಸಿರುವುದು ನಿಜಕ್ಕೂ ಮೆಚ್ಚುವಂತದ್ದು.
ಅಷ್ಟೇ ಅಲ್ಲದೇ ಇಂತಹ ಹಳೇಯ ವಿಷಯದ ಕಥೆಯನ್ನು ಇಂದಿನ ಕಾಲಘಟ್ಠದ ಪ್ರೇಕ್ಷಕರಿಗೆ ಇಷ್ಟವಾಗುವ ರೀತಿಯಲ್ಲಿ ಪ್ರೇಕ್ಷಕರ ಮುಂದಿಟ್ಟು ಒಬ್ಬ ಯಶಸ್ವಿ ನಿರ್ದೇಶಕ ಎನ್ನಿಸಿಕೊಳ್ಳುವುದು ನಿಜಕ್ಕೂ ಸಾಹಸದ ಕೆಲಸ ಎನ್ನಬಹುದು.

ದುನಿಯಾ ವಿಜಯ್ ಮತ್ತು ರಚಿತಾರಾಮ್ ರನ್ನು ಡಿ ಗ್ಲಾಮರ್ ಪಾತ್ರಕ್ಕೆ ಒಪ್ಪಿಸಿ ಅವರಿಂದ ಪಾತ್ರಗಳಿಗೆ ಚ್ಯತಿ ಬಾರದಂತೆ, ಹಾಗೂ ಕಥೆಗೆ ಎಲ್ಲೂ ಲೋಪವಾಗದಂತೆ ಜವಾಬ್ಧಾರಿ ನಿಭಾಯಿಸಿರುವುದು ನಿಜಕ್ಕೂ ಜಡೇಶ್ ರವರನ್ನು ಮೆಚ್ಚಲೇ ಬೇಕು.
ಇದು ತಮಿಳು ಚಿತ್ರಗಳಂತೆ ಕಂಟೆಂಟ್ ಓರಿಯಂಟ್ ವಿಷಯಾಧಾರಿತ ಚಿತ್ರ.
ಜಡೇಶ್ ಬರೆದಿರುವ ಈ ಕಥೆ ಕಾಟೇರ ಚಿತ್ರಕ್ಕಿಂತಲೂ ಬಹು ಪಾಲು ಚನ್ನಾಗಿದೆ.
ಚಿತ್ರದಲ್ಲಿ ತಾರಾಗಣದ ಬಹು ದೊಡ್ಡ ದಂಡೇ ಇದೆ. ಹಿರಿಯ ನಟಿ ಉಮಾಶ್ರೀ ರಾಚಯ್ಯನ ತಾಯಿಯಾಗಿ ತುಂಡು ಭೂಮಿಗಾಗಿ ಹೋರಾಡಿ ಉಸಿರು ಚೆಲ್ಲುವ ಪಾತ್ರಕ್ಕೆ ನಟನೆಯ ಬೆಳಕನ್ನು ಹರಿಸಿದ್ದಾರೆ.

ಶರತ್ ಲೋಹಿತಾಶ್ವ, ಅವಿನಾಶ್ ಜಮೀನ್ಧಾರರಾಗಿ, ಹಾಗೂ ಜಹಂಗೀರ್, ಮಿತ್ರ, ಊರಿನೊಳಗಿನ ಸ್ವಜಾತಿಯ ಮಿತ್ರರಾಗಿ, ಅಚ್ಯುತ್ ಕರೆಪ್ಟೆಡ್ ಪೋಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ, ಗೋಪಾಲ್ ದೇಶ್ ಪಾಂಡೆ ಜಮೀನ್ಧಾರರ ಅನೈತಿಕಥೆಯ ಹೆಂಡತಿಯ ಮಗನಾಗಿ ಒಂದು ಕುರುಡು ಮಗುವಿನ ಅಸಾಹಯಕ ತಂದೆಯಾಗಿ ಗಮನ ಸೆಳೆದಿರುವುದಷ್ಟೇ ಅಲ್ಲ ಪಾತ್ರಗಳಿಗೆ ನ್ಯಾ ಒದಗಿಸಿದ್ದಾರೆ.
ಇನ್ನು ರಾಕೇಶ್ ಅಡಿಗ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಈತ ಒಬ್ಬ ಒಳ್ಳೆಯ ನಟ. ಆದರೆ ಏಕೋ ಗೊತ್ತಿಲ್ಲ ಒಳ್ಳೆಯ ಅವಕಾಶಗಳು ಸರಿಯಾಗಿ ಬರಲಿಲ್ಲ. ಅಷ್ಟೇ ಅಲ್ಲ ಚಿತ್ರರಂಗ ಸರಿಯಾಗಿ ಈತನನ್ನು ಬಳಸಿಕೊಳ್ಳಲಿಲ್ಲ. ಆಗಾಗ ಅಲ್ಲಲ್ಲಿ ಕೆಲವು ಚಿತ್ರಗಳಲ್ಲಿ ಮುಖ ತೋರಿಸುವ ರಾಕೇಶ್ ಈ ಚಿತ್ರದಲ್ಲಿ ಜಮೀನ್ದಾರನ ಮಗನಾಗಿ ರೋಷಾ ವೇಷದಿಂದ ಬಡವರ ರಕ್ತ ಹೀರುವ ಕಿಡಿಗೇಡಿಯ ಪಾತ್ರದಲ್ಲಿ ಮೆರೆದಿದ್ದಾರೆ. ಒಬ್ಬ ಯುವ ಖಳನಟನಾಗಿ ಸ್ಕೋರ್ ಮಾಡಿದ್ದಾರೆ.
ಚಿತ್ರದ ನಿರ್ಮಾಪಕರಾದ ಸತ್ಯ ಪ್ರಕಾಶ್ ಹಾಗೂ ಸೂರಜ್ ಗೌಡ ಒಂದು ಒಳ್ಳೆಯ ಸಾಮಾಜಿಕ ಜವಾಬ್ದಾರಿಯುತವಾದ, ತುಳಿತಕ್ಕೆ ಒಳಪಟ್ಟವರ ಚಿತ್ರವನ್ನು ನಿರ್ಮಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. ಚಿತ್ರಕ್ಕೆ ಹಣವನ್ನು ಚನ್ನಾಗಿ ಹರಿಸಿರುವುದು ತೆರೆಯ ಮೇಕೆ ಕಾಣುತ್ತದೆ. ಇವರ ಈ ಪ್ರಯತ್ನಕ್ಕೆ ಪ್ರೇಕ್ಷಕ ಪ್ರಭುಗಳು ಕೈಹಿಡಿಯಬೇಕು. ಈ ಹಿಂದೆ ದರ್ಶನ್ ಅಭಿನಯದ ಸಾರಥಿಯಂತಹ ದೊಡ್ಡ ಹಿಟ್ ಸಿನಿಮಾವನ್ನು ನೀಡಿದ್ದ ಇವರಿಗೆ ಈ ಚಿತ್ರಕೂಡ ಒಳ್ಳೆಯ ನಿರೀಕ್ಷೆಯನ್ನು ಹುಟ್ಟು ಹಾಕಿದೆ.

ಇನ್ನು ಚಿತ್ರದ ಬಹು ದೊಡ್ಡ + ಪಾಯಿಂಟ್ ಅಂದ್ರೆ ಮ್ಯೂಸಿಕ್. ಅಜನೀಶ್ ಲೋಕನಾಥ್ ಯಾವುದೇ ರೀತಿಯ ಜಾನ್ಹರ್ ಕಥೆಯಾದ್ರು ಅದನ್ನು ತಮ್ಮ ಸಂಗೀತದ ಚೌಕಟ್ಟಿನಲ್ಲಿ ಕಟ್ಟಿಹಾಕಿ ಚಿತ್ರವನ್ನು ಕಥೆಯ ಜೊತೆಗೆ ನೋಡಿಸಿಕೊಂಡು ಹೋಗುವ ಸಂಗೀತದ ಮಂತ್ರವನ್ನು ಕಂಡುಕೊಂಡಿದ್ದಾರೆ.
ಈ ಚಿತ್ರದ ಪ್ರಮುಖ ಪಿಲ್ಲರ್ ಗಳಲ್ಲಿ ಅಜನೀಶ್ ಕೂಡ ಒಬ್ಬರು.

ಹಾಗೆಯೇ ಛಾಯಾಗ್ರಹಣ ಸ್ವಾಮಿ ಜೆ. ಗೌಡ ಚಿತ್ರದ ಕಥೆಗೆ ಸರಿಹೊಂದುವಂತ ಕಲರ್ ಟಿಂಟ್ ಜೊತೆಗೆ ಪ್ರತೀಯೊಂದು ಫ್ರೇಮ್ ನೊಳಗೂ ಒಂದು ಜೀವ ಕಳೆ ತುಂಬಿದ್ದಾರೆ.
ಒಟ್ಟಿನಲ್ಲಿ ಕಥೆ ಹಳೆಯದಾದರೂ ಜೀವ ನವ ನವೀನ ಎನ್ನಬಹುದು. ಮಾಸ್ ಮತ್ತು ಕ್ಲಾಸ್ ಜೊತೆಗೆ ಒಂದಷ್ಟು ಸೆಂಟಿಮೆಂಟ್ ಹಾಗೂ ಬದುಕಿನ ಹೋರಾಟದ ಮಜಲುಗಳನ್ನು ಕಾಣಬಹುದು.











