ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ನಿರ್ಮಾಣದಲ್ಲಿ ಅದ್ದೂರಿಯಾಗಿ ಮೂಡಿಬರಲಿದೆ “ರಾಯರ ದರ್ಶನ” ಆಲ್ಬಂ ಸಾಂಗ್ .

“ರಾಯರೆ ನನ್ನ ಉಸಿರು” . ಪತ್ರಿಕಾಗೋಷ್ಠಿಯಲ್ಲಿ ರಾಯರನ್ನು ನೆನೆದು ಭಾವುಕರಾದ ನಟ ಜಗ್ಗೇಶ್

ಕಲಿಯುಗದ ಕಾಮಧೇನು ಕಲ್ಪವೃಕ್ಷರೆಂದೆ ಖ್ಯಾತರಾದ ಮಂತ್ರಾಲಯ ಗುರು ಶ್ರೀರಾಘವೇಂದ್ರಸ್ವಾಮಿಗಳಿಗೆ ವಿಶ್ವದಾದ್ಯಂತ ಕೋಟ್ಯಾಂತರ ಭಕ್ತರಿದ್ದಾರೆ. ರಾಯರ ಕುರಿತು ಸಾಕಷ್ಟು ಭಕ್ತಿಗೀತೆಗಳು ಬಂದಿದೆ. ಆದರೆ ಈವರೆಗೂ ಯಾರು ಹೇಳದ ಹಾಗೂ ತೋರಿಸದ ರಾಯರ ಬಗ್ಗೆಗಿನ ಕೆಲವು ವಿಷಯಗಳನ್ನು “ರಾಯರ ದರ್ಶನ” ಆಲ್ಭಂನಲ್ಲಿ ತೋರಿಸಲಾಗುತ್ತಿದೆ. ಲಕ್ಷ್ಮೀ ಗಣೇಶ ಪ್ರೊಡಕ್ಷನ್ಸ್ ಹಾಗೂ ದಿ ನ್ಯೂ ಇಂಡಿಯನ್ ಟೈಮ್ಸ್ ಲಾಂಛನದಲ್ಲಿ ಸುಗುಣ ರಘು ಈ ಅಲ್ಭಂ ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಮಾಧ್ಯಮದವರಿಗೆ ಕೊಡಮಾಡುವ ಟಿ.ಎನ್.ಐ.ಟಿ ಪ್ರಶಸ್ತಿ ಸೇರಿದಂತೆ ಅನೇಕ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡಿರುವ ರಘು ಭಟ್ ಉಸ್ತುವಾರಿ ವಹಿಸಿಕೊಂಡಿದ್ದಾರೆ. ಈ ಆಲ್ಬಂ ಸಾಂಗ್ ಕುರಿತು ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಹಿರಿಯ ನಟ ಜಗ್ಗೇಶ್, ಮಂತ್ರಾಲಯದ ಮಾಧ್ಯಮ ಪ್ರತಿನಿಧಿ ಶ್ರೀನಿಧಿ ಕರಣಂ, ರಘು ಭಟ್, ಸುಗುಣ ರಘು ಹಾಗು ಗೀತರಚನೆಕಾರ ನಾಗಾರ್ಜುನ ಶರ್ಮ ಉಪಸ್ಥಿತರಿದ್ದರು.

ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ತೀರ್ಥರ ಆಶೀರ್ವಾದದೊಂದಿಗೆ ಶ್ರೀಗುರು ರಾಘವೇಂದ್ರಸ್ವಾಮಿಗಳ ದಿವ್ಯ ಚರಿತ್ರೆಯನ್ನು ವಿಶ್ವದಾದ್ಯಂತ ಹರಡುವ ಧ್ಯೇಯದೊಂದಿಗೆ “ರಾಯರ ದರ್ಶನ” ಆಲ್ಬಂ ಸಾಂಗ್ ನಿರ್ಮಾಣವಾಗುತ್ತಿದೆ. ರಾಯರ ಕುರಿತು ಸಾಕಷ್ಟು ಗೀತೆಗಳು ಬಂದಿದೆಯಾದರೂ, ಈವರೆಗೂ ಯಾರು ಹೇಳಿರದ ಹಾಗೂ ತೋರಿಸಿರದ ರಾಯರ ಕುರಿತಾದ ಕೆಲವು ವಿಷಯಗಳು ಈ ಆಲ್ಬಂ ಸಾಂಗ್ ನಲ್ಲಿರಲ್ಲಿದೆ. ಇದೇ ತಿಂಗಳ 23 ರಿಂದ ಏಳು ದಿನಗಳ ಕಾಲ ಮಂತ್ರಾಲಯದಲ್ಲಿ ಶ್ರೀಗಳು ಚಿತ್ರೀಕರಣಕ್ಕಾಗಿ ಸಮಯ ನೀಡಿದ್ದಾರೆ. ರಾಯರ ಭಕ್ತರಾದ ಅನೇಕ ಸೆಲೆಬ್ರಿಟಿ ಕಲಾವಿದರು ಈ ಆಲ್ಬಂ ಸಾಂಗ್ ನಲ್ಲಿ ಅಭಿನಯಿಸಲಿದ್ದಾರೆ. ನಾಗಾರ್ಜುನ ಶರ್ಮ ಅವರು ಗೀತರಚನೆ ಮಾಡುತ್ತಿದ್ದು, ಹೆಸರಾಂತ ಸಂಗೀತ ನಿರ್ದೇಶಕರಾದ ಸಿ.ಆರ್ ಬಾಬಿ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಸಂಯೋಜಿಸಲಿದ್ದಾರೆ. ಫೆಬ್ರವರಿಯಲ್ಲಿ ಮಂತ್ರಾಲಯದಲ್ಲೇ ಅದ್ದೂರಿಯಾಗಿ “ರಾಯರ ದರ್ಶನ” ಆಲ್ಬಂ ಸಾಂಗ್ ಅನಾವರಣವಾಗಲಿದೆ. ಇಂದಿನ ಪತ್ರಿಕಾಗೋಷ್ಠಿಗೆ ಆಗಮಿಸಿರುವ ರಾಯರ ಪರಮಭಕ್ತರಾದ ಜಗ್ಗೇಶ್ ಅವರಿಗೆ ಹಾಗೂ ಶ್ರೀನಿಧಿ ಕರಣಂ ಅವರಿಗೆ ಧನ್ಯವಾದ ಎಂದರು ರಘು ಭಟ್.

ನಾನು ದೆಹಲಿಯಲ್ಲಿದೆ. ಶ್ರೀಗಳು ಫೋನ್ ಮಾಡಿ ಈ ಪತ್ರಿಕಾಗೋಷ್ಠಿಗೆ ಹೋಗಲು ಆದೇಶಿಸಿದ್ದರು.‌ ರಾಯರ ಕೆಲಸ ಅಂದ ಮೇಲೆ ಆಗಲ್ಲ ಎನ್ನುವ ಮಾತೇ ಇಲ್ಲ. ಏಕೆಂದರೆ ನನ್ನ ಉಸಿರೆ ರಾಯರು ಎಂದು ಭಾವುಕರಾಗಿ ಮಾತನಾಡಿದ ನಟ ಜಗ್ಗೇಶ್, ತಮಗೆ ರಾಯರ ಮೇಲೆ ಭಕ್ತಿ ಬರಲು ಕಾರಣ ನಮ್ಮ ತಾಯಿ. ಅವರು 500 ರೂಪಾಯಿ ಕೊಟ್ಟು ನನ್ನನ್ನು ಮೊದಲ‌ ಬಾರಿಗೆ ಮಂತ್ರಾಲಯಕ್ಕೆ ಕಳುಸಿದರು. ರಾಯರಿದ್ದಾರೆ ಎಂದು ಮನದಲ್ಲಿ ಬಿತ್ತಿದ್ದರು. ಆನಂತರ ತಮ್ಮ ಜೀವನದಲ್ಲಾಗಿರುವ ರಾಯರ ಕರುಣೆಯನ್ನು ಮನದಾಳದ ಮಾತುಗಳ ಮೂಲಕ ತೆರೆದಿಟ್ಟ ಜಗ್ಗೇಶ್, “ರಾಯರ ದರ್ಶನ” ಆಲ್ಬಂ ಸಾಂಗ್ ಗೆ ಶುಭ ಕೋರಿ, ಎಲ್ಲರೂ ರಘು ಭಟ್ ಅವರ ಕಾರ್ಯಕ್ಕೆ ಪ್ರೋತ್ಸಾಹ ನೀಡಿ ಎಂದರು.

ಮಂತ್ರಾಲಯದಿಂದ ಆಗಮಿಸಿದ್ದ ಶ್ರೀನಿಧಿ ಕರಣಂ ಅವರು ಶ್ರೀಗುರುರಾಯರ ಹಾಗೂ ಶ್ರೀ ಸುಬುಧೇಂದ್ರ ತೀರ್ಥರ ಕರುಣೆಯನ್ನು ನೆನೆದು ಭಾವುಕರಾದರು.‌ ರಘು ಭಟ್ ಅವರ ಈ ಪ್ರಯತ್ನಕ್ಕೆ ಶ್ರೀಗಳ ಸಂಪೂರ್ಣ ಅನುಗ್ರಹವಿದೆ ಎಂದರು.

ರಾಯರ ಮಠದ ಮುಂದೆ ಇರುವಗಲೇ “ರಾಯರ ದರ್ಶನ” ದ ಹಾಡು ಬರೆಯಲು ರಘು ಭಟ್ ಅವರಿಂದ ಕರೆ ಬಂದ ವಿಷಯವನ್ನು ಗೀತರಚನೆಕಾರ ನಾಗಾರ್ಜುನ ಶರ್ಮ ತಿಳಿಸಿದರು. ನಿರ್ಮಾಪಕಿ ಸುಗುಣಾ ರಘು ಎಲ್ಲರನ್ನು ಸ್ವಾಗತಿಸಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor