“ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಒಂದು ವಾರ ತಡವಾಗಿ ತೆರೆಗೆ .
ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರ ನವೆಂಬರ್ 27 ರಂದು ಬಿಡುಗಡೆ .
‘ಶ್ರೀ ದೇವಿ ಎಂಟರ್ಟೈನರ್ಸ್ ಬ್ಯಾನರ್’ನಿಂದ ಇಲ್ಲಿಯವರೆಗೆ ‘ರಂಗಿತರಂಗ’, ‘ಅವನೇ ಶ್ರೀಮನ್ನಾರಾಯಣ’, ‘ಕಥಾಸಂಗಮ’, ‘ಸ್ಪೂಕಿ ಕಾಲೇಜ್’ನಂತಹ ಭಿನ್ನ ಅಲೆಯ ಮನರಂಜನಾತ್ಮಕ ಸಿನಿಮಾಗಳು ತಯಾರಾಗಿವೆ. ಎಲ್ಲಾ ಚಿತ್ರಗಳನ್ನ ನೀವು ಪ್ರೀತಿಯಿಂದ ನೋಡಿ, ನಮ್ಮ ಸಂಸ್ಥೆಗೆ ಬೆಂಬಲವಾಗಿ ನಿಂತಿದ್ದೀರಿ. ಇದೀಗ ನಮ್ಮ ಬ್ಯಾನರ್ ನಿಂದ ಕನ್ನಡ ಚಿತ್ರರಂಗಕ್ಕೆ ಐದನೇ ಕಾಣಿಕೆಯಾಗಿ ‘ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

ದೀಕ್ಷಿತ್ ಶೆಟ್ಟಿ ಹಾಗೂ ಬೃಂದಾ ಆಚಾರ್ಯ ಮುಖ್ಯಭೂಮಿಕೆಯ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಸಿನಿಮಾಗೆ ಸಿಂಪಲ್ ಸುನಿ ಹಾಗೂ ರಕ್ಷಿತ್ ಶೆಟ್ಟಿ ಗರಡಿಯಲ್ಲಿ ಪಳಗಿರುವ ಅಭಿಷೇಕ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ನಮ್ಮ ಸಂಸ್ಥೆ ಇಲ್ಲಿಯವರೆಗೆ ಮಾಡಿರೋ ಎಲ್ಲಾ ಚಿತ್ರಗಳಲ್ಲಿ ಹೊಸ ನಿರ್ದೇಶಕರುಗಳಿಗೆ ಅವಕಾಶ ಕೊಡುತ್ತಾ ಬಂದಿದೆ. ಅದರ ಬಗ್ಗೆ ನಮಗೆ ಹೆಮ್ಮೆಯೂ ಇದೆ. ಆದರೀಗ “ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ” ಚಿತ್ರವನ್ನು ಅಂದುಕೊಂಡ ದಿನಾಂಕಕ್ಕೆ ಅಂದರೆ ನವೆಂಬರ್ 21ಕ್ಕೆ ತೆರೆಗೆ ತರಲು ಆಗುತ್ತಿಲ್ಲ. ಈ ಬಗ್ಗೆ ಕನ್ನಡ ಚಿತ್ರಪ್ರೇಮಿಗಳಲ್ಲಿ ಕ್ಷಮೆ ಯಾಚಿಸುತ್ತಿದ್ದೇವೆ.

ಕೆಲ ತಾಂತ್ರಿಕ ಕೆಲಸಗಳ ವಿಳಂಬನೆಯಿಂದ ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಸಿನಿಮಾದ ರಿಲೀಸ್ ಅನ್ನು ಒಂದು ವಾರ ಮುಂದೂಡುತ್ತಿದ್ದೇವೆ. ಇದೇ ನವೆಂಬರ್ 27ರ ಗುರುವಾರದಂದು ಬ್ಯಾಂಕ್ ಆಫ್ ಭಾಗ್ಯಲಕ್ಷ್ಮೀ ಬಿಡುಗಡೆ ಆಗುತ್ತಿದ್ದು, ಎಂದಿನಂತೆ ನಿಮ್ಮ ಪ್ರೀತಿ, ಸಹಕಾರ ಹಾಗೂ ಪ್ರೋತ್ಸಾಹ ಇರಲಿ ಎಂದು ನಿರ್ಮಾಪಕ ಎಚ್ ಕೆ ಪ್ರಕಾಶ್ ತಿಳಿಸಿದ್ದಾರೆ.











