ಪ್ರೇಮ ಗೀತೆಯೊಂದಿಗೆ “ಚೀತಾ” ಚಿತ್ರದ ಚಿತ್ರೀಕರಣ ಮುಕ್ತಾಯ.
ಆರಂಭದಿಂದಲೂ ಕುತೂಹಲ ಮೂಡಿಸಿದೆ ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ನಿರ್ದೇಶನದ ಮೊದಲ ಚಿತ್ರ .
ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಶ್ರೀಮತಿ ಪ್ರತಿಭಾ ನಿರ್ಮಿಸುತ್ತಿರುವ, ನೃತ್ಯ ನಿರ್ದೇಶಕ ರಾಜಾ ಕಲೈ ಕುಮಾರ್ ಪ್ರಥಮ ನಿರ್ದೇಶನದ ಹಾಗೂ ಪ್ರಜ್ವಲ್ ದೇವರಾಜ್ – ಮೇಘ ಶೆಟ್ಟಿ ನಾಯಕ – ನಾಯಕಿಯಾಗಿ ನಟಿಸಿರುವ “ಚೀತಾ” ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ರಾಕ್ಲೈನ್ ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್ ನಲ್ಲಿ ಪ್ರಜ್ವಲ್ ದೇವರಾಜ್ ಹಾಗೂ ಮೇಘ ಶೆಟ್ಟಿ ಅಭಿನಯದಲ್ಲಿ ಮೂಡಿಬಂದ ಯುಗಳ ಗೀತೆಯೊಂದರ ಚಿತ್ರೀಕರಣದೊಂದಿಗೆ ಈ ಚಿತ್ರದ ಚಿತ್ರೀಕರಣ ಪೂರ್ಣಗೊಂಡಿದೆ.

ಅಂತಿಮ ದಿನದ ಚಿತ್ರೀಕರಣದ ದಿನ ಮಾಧ್ಯಮದವರನ್ನು ಚಿತ್ರೀಕರಣದ ಸ್ಥಳಕ್ಕೆ ಆಹ್ವಾನಿಸಿದ್ದ ಚಿತ್ರತಂಡ ಅದೇ ಸ್ಥಳದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಚಿತ್ರದ ಕುರಿತು ಮಾಹಿತಿ ನೀಡಿದರು.
ನಾನು ಚಿತ್ರರಂಗಕ್ಕೆ ಬಂದು 25 ವರ್ಷಗಳಾಯಿತು. ನೃತ್ಯ ಕಲಾವಿದನಾಗಿ, ನೃತ್ಯ ನಿರ್ದೇಶಕನಾಗಿ ಕಾರ್ಯ ನಿರ್ವಹಿಸಿದ್ದೇನೆ ಎಂದು ಮಾತನಾಡಿದ ನಿರ್ದೇಶಕ ರಾಜಾ ಕಲೈ ಕುಮಾರ್, ಇದು ನನ್ನ ನಿರ್ದೇಶನದ ಮೊದಲ ಚಿತ್ರ. “ಚೀತಾ”, ಮಾರ್ಕೆಟ್ ನಲ್ಲೇ ನಡೆಯುವ ಕಥೆ. ಮಾರುಕಟ್ಟೆಯಲ್ಲೇ ಹುಟ್ಟಿಬೆಳೆದ ಹುಡುಗನೊಬ್ಬನ ಕಥೆ ಕೂಡ. ಆ ಹುಡುಗನ ಪಾತ್ರದಲ್ಲಿ ಪ್ರಜ್ವಲ್ ಅವರು ಅಭಿನಯಿಸಿದ್ದಾರೆ.

ಮಾರುಕಟ್ಟೆಯಲ್ಲಿ ನಡೆಯುವ ಅವ್ಯವಹಾರಗಳ ವಿರುದ್ದ ಹೋರಾಟ ಮಾಡುವ ಹೋರಾಟಗಾರನ ಪಾತ್ರ ಅವರದು. ನಮ್ಮ ಚಿತ್ರದಲ್ಲಿ ಪ್ರೀತಿ , ಸೆಂಟಿಮೆಂಟ್ ಹೀಗೆ ಜನರಿಗೆ ಬೇಕಾಗುವ ಎಲ್ಲಾ ರೀತಿಯ ಅಂಶಗಳು ಇದೆ. ಇದು ಮಾರ್ಕೇಟ್ ನಲ್ಲೇ ನಡೆಯುವ ಕಥೆಯಾಗಿರುವುದರಿಂದ ಕಲಾ ನಿರ್ದೇಶಕ ಶಿವಕುಮಾರ್ ಅವರ ನೇತೃತ್ವದಲ್ಲಿ ಹೆಚ್ ಎಂ ಟಿ ಆವರಣದಲ್ಲಿ ಬೃಹತ್ ಸೆಟ್ ಹಾಕಿ ಅಲ್ಲೇ ಹೆಚ್ಚಿನ ಚಿತ್ರೀಕರಣ ನಡೆದಿದೆ. ರಾಮನಗರ, ಕೋಲಾರದಲ್ಲೂ ಚಿತ್ರೀಕರಣವಾಗಿದೆ. ಚಿತ್ರದಲ್ಲಿ ಐದು ಹಾಡುಗಳು ಹಾಗೂ ಆರು ಸಾಹಸ ಸನ್ನಿವೇಶಗಳಿದೆ. ಸುಮಾರು 150 ರಿಂದ 200 ಜನ ಸಹ ಕಲಾವಿದರು ಪ್ರತಿದಿನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದರು.

ಪ್ರಜ್ವಲ್ ದೇವರಾಜ್, ಮೇಘ ಶೆಟ್ಟಿ, ರಂಗಾಯಣ ರಘು, ಶೃತಿ ಹರಿಹರನ್, ಚಿನ್ನಿಪ್ರಕಾಶ್(ನೃತ್ಯ ನಿರ್ದೇಶಕ), ಗುರು ಜಗ್ಗೇಶ್, ಶಿವರಾಜ ಕೆ.ಆರ್ ಪೇಟೆ, ಸುನೀಲ್(ತೆಲುಗು), ಶ್ರೀಧರ್, ಬಲ ರಾಜ್ ವಾಡಿ, ಟೆನ್ನಿಸ್ ಕೃಷ್ಣ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ನಿರ್ಮಾಪಕಿ ಪ್ರತಿಭಾ ಅವರು ಯಾವುದೇ ಕೊರತೆ ಬಾರದ ಹಾಗೆ ಈ ಸಿನಿಮಾವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಇಂದು ರಾಕ್ಲೈನ್ ಸ್ಟುಡಿಯೋದಲ್ಲಿ ಮೂರು ವಿಭಿನ್ನ ಸೆಟ್ ಗಳನ್ನು ಹಾಕಿ ಯುಗಳಗೀತೆಯೊಂದನ್ನು ಚಿತ್ರಿಸಿಕೊಳ್ಳುವುದರೊಂದಿಗೆ “ಚೀತಾ” ಚಿತ್ರದ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ಚಿತ್ರತಂಡದ ಸಹಕಾರದಿಂದ “ಚೀತಾ” ಚೆನ್ನಾಗಿ ಮೂಡಿಬರುತ್ತಿದೆ.

ಇದನ್ನು ಕಂಡು ಖುಷಿಯಾಗಿರುವ ನಿರ್ಮಾಪಕರು ಸದ್ಯದಲ್ಲೇ ಇದೇ ತಂಡದೊಂದಿಗೆ ಮತ್ತೊಂದು ಚಿತ್ರ ಮಾಡಲು ಮುಂದಾಗಿದ್ದಾರೆ ಎಂದರು.
ನಿರ್ದೇಶಕರು ಹೇಳಿದ ಹಾಗೆ ನನ್ನದು ಈ ಚಿತ್ರದಲ್ಲಿ ಮಾರ್ಕೆಟ್ ನಲ್ಲೇ ಬೆಳೆಯುವ ಅನಾಥ ಹುಡುಗನ ಪಾತ್ರ. ಅಲ್ಲಿರುವ ಪ್ರತಿಯೊಬ್ಬರು ಜಾತಿಮತ ಭೇದವಿಲ್ಲದೆ ನನ್ನನ್ನು ಪ್ರೀತಿಸುತ್ತಿರುತ್ತಾರೆ. ನನಗೂ ಅವರನ್ನು ಕಂಡರೆ ಅಷ್ಟೇ ಪ್ರೀತಿ. ಅಲ್ಲಿ ನಡೆಯುವ ಕೆಮಿಕಲ್ ಮಾಫಿಯಾ ಸೇರಿದಂತೆ ಅನೇಕ ಅವ್ಯವಹಾರಗಳ ವಿರುದ್ಧ ಹೋರಾಡುತ್ತೇನೆ. ಮಾರ್ಕೆಟ್ ನಲ್ಲಿ “ಚೀತಾ” ಅಬ್ಬರ ಜೋರಾಗಿರುತ್ತದೆ. ಮುಂದೆ ಟೀಸರ್ ಹಾಗೂ ಟ್ರೇಲರ್ ನಲ್ಲಿ ಅದರ ಪರಿಚಯವಾಗುತ್ತದೆ. ಇಂದು ಚಿತ್ರೀಕರಣದ ಕೊನೆಯ ದಿನ. ಒಂದೊಳ್ಳೆ ಚಿತ್ರದಲ್ಲಿ ಅಭಿನಯಿಸಿರುವ ತೃಪ್ತಿಯಿದೆ. ಕಲೈ ಮಾಸ್ಟರ್ ಅವರ ನಿರ್ದೇಶನ, ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯ ವೈಖರಿ ಎಲ್ಲವೂ ಚೆನ್ನಾಗಿದೆ. “ಚೀತಾ” ಎಲ್ಲರಿಗೂ ಇಷ್ಟವಾಗುವ ಚಿತ್ರವಾಗಲಿದೆ ಎಂದು ನಾಯಕ ಪ್ರಜ್ವಲ್ ದೇವರಾಜ್ ತಿಳಿಸಿದರು.
ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ ಎಂದು ಮಾತನಾಡಿದ ನಾಯಕಿ ಮೇಘ ಶೆಟ್ಟಿ, ಚಿತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ಟ ನಿರ್ದೇಶಕ ರಾಜಾ ಕಲೈಕುಮಾರ್ ಹಾಗೂ ನಿರ್ಮಪಕಿ ಪ್ರತಿಭಾ ಅವರಿಗೆ ಧನ್ಯವಾದ ಹೇಳಿದರು.
ನಿರ್ದೇಶಕರು ಹೇಳಿದ ಹಾಗೆ “ಚೀತಾ” ಚಿತ್ರದ ಚಿತ್ರೀಕರಣ ಮುಗಿಸಿ ಕೊಟ್ಟಿದ್ದಾರೆ. ಪ್ರಜ್ವಲ್ ದೇವರಾಜ್ ಅವರು ಸೇರಿದಂತೆ ಎಲ್ಲಾ ಕಲಾವಿದರು ಚೆನ್ನಾಗಿ ನಟಿಸಿದ್ದಾರೆ. ತಂತ್ರಜ್ಞರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಈ ಸಂದರ್ಭದಲ್ಲಿ ನಾನು ಇಡೀ ಚಿತ್ರತಂಡಕ್ಕೆ ಧನ್ಯವಾದ ತಿಳಿಸುತ್ತೇನೆ ಎಂದರು ನಿರ್ಮಾಪಕಿ ಪ್ರತಿಭಾ. ಛಾಯಾಗ್ರಾಹಕ ಗುರುಪ್ರಸಾದ್ ನಾರ್ನಾಡ್ ಸಹ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.











