“ಪವಿತ್ರ ಬಂಧನ” ಕಲರ್ಸ್ ಕನ್ನಡದಲ್ಲಿ ಮತ್ತೊಂದು ಧಾರಾವಾಹಿಯ ಅನಾವರಣ.

ಪವಿತ್ರಾ ಕೇವಲ ಒಬ್ಬ ಯುವತಿಯಲ್ಲ, ಅವಳು ಇಂದಿನ ಬದಲಾಗುತ್ತಿರುವ ಕಾಲಘಟ್ಟದ ಸ್ತ್ರೀಶಕ್ತಿಯ ಪ್ರತೀಕ. ಹುಟ್ಟಿದ್ದು ರಾಮನಗರದಲ್ಲಿ. ಓದಿದ್ದು ಎಂ.ಕಾಂ ಅಮ್ಮನನ್ನು ಕಳೆದುಕೊಂಡ ಪವಿತ್ರಾಗೆ ಅಪ್ಪನೇ ಎಲ್ಲ. ಅಪ್ಪನಿಗೆ ಬೆಂಬಲವಾಗಿ ನಿಲ್ಲಬೇಕು. ಕಾಯಿಲೆಗೆ ಬಿದ್ದ ತಮ್ಮನನ್ನು ಉಳಿಸಿಕೊಳ್ಳುವುದೇ ಈಕೆ ಮುಂದಿರುವ ಬಹುದೊಡ್ಡ ಸವಾಲು. ಸಮಾಜದ ಅನ್ಯಾಯದ ವಿರುದ್ಧ ಧೈರ್ಯದಿಂದ ಮಾತಾಡೋ ಪವಿತ್ರಾ, ಹಳ್ಳಿಯಿಂದ ಬಂದಿರೋದ್ರಿಂದ ಪಟ್ಟಣದಲ್ಲಿ ಒಂದೊಳ್ಳೆ ಕೆಲಸ ಹಿಡೀಬೇಕು ಅನ್ನೋ ಆಸೆ. ಕನ್ನಡ ಬಗ್ಗೆ ಅಪಾರ ಪ್ರೀತಿ. ಹೀಗಿರೋವಾಗ ಅತ್ತೆ ಚಂದ್ರಿಕಾಳ ಮಗ ಮನೋಜ್‌ನನ್ನ ಮದುವೆ ಆಗೋ ಪ್ರಸಂಗ ಎದುರಾಗುತ್ತೆ.

ಹೀಗಿರುವಾಗ ಪವಿತ್ರಾ ಮತ್ತು ‘ಅಮ್ಮಾಸ್ ಕಾಫಿ’ ಸಂಸ್ಥೆಯ ಎಂಡಿ ರಾಧಿಕಾ ಅವರ ನಡುವೆ ದೇವಸ್ಥಾನದಲ್ಲಿ ಸಂಘರ್ಷವಾಗುತ್ತದೆ. ಕಾಕತಾಳೀಯ ಎಂಬಂತೆ ಅದೇ ಅಮ್ಮಾಸ್ ಕಂಪನಿಗೆ ಕೆಲಸಕ್ಕೆ ಸೇರುತ್ತಾಳೆ. ಆದರೆ ಅವಳಿಗೆ ಅರಿಯದ ಸತ್ಯವೆಂದರೆ, ತಾನು ದ್ವೇಷಿಸುವ ಸಿಇಒ ದೇವ್ ಮತ್ತು ತಾನು ಇಷ್ಟಪಡುವ ತಿಲಕ್ ಇಬ್ಬರೂ ರಾಧಿಕಾಳ ಪುತ್ರರು‌ ಎಂಬುದು!

ತಿಲಕ್ ತನ್ನ ಅಸಲಿ ಗುರುತನ್ನು ಮರೆಮಾಚಿ ಪವಿತ್ರಾಳ ಮನಸ್ಸಿಗೆ ಹತ್ತಿರವಾಗ್ತಾನೆ. ಆದರೆ, ವಿಧಿಯ ಆಟವೇ ಬೇರೆ. ಅಚ್ಚರಿಯ ತಿರುವಿನಲ್ಲಿ ತಿಲಕ್‌ನ ಅಣ್ಣ ದೇವ್‌ ಜೊತೆ ಪವಿತ್ರಾಳ ಅನಿರೀಕ್ಷಿತ ವಿವಾಹ ನಡೆದೇ ಬಿಡುತ್ತದೆ! ಪವಿತ್ರಾ- ದೇವ್‌ ಮದುವೆ ಘಟಿಸಿದ್ದು ಹೇಗೆ? ಭಿನ್ನ ಮನಸ್ಸುಗಳ ಮದುವೆಗೆ ಕಾರಣವಾಗಿದ್ದಾದರೂ ಏನು? ಈ ಬಲವಂತದ ಮದುವೆ ಗಟ್ಟಿಯಾಗಿ ನಿಲ್ಲುತ್ತಾ? ಸಂಸಾರದ ಬಂಡಿ ಹಳ್ಳಿತಪ್ಪದೇ ಸಾಗುತ್ತಾ? ಅನ್ನೋದೇ “ಪವಿತ್ರ ಬಂಧನ” ಧಾರಾವಾಹಿ ಕಥೆ.

ಪವಿತ್ರಾ ಮತ್ತು ದೇವ್ ಒಬ್ಬರಿಗೊಬ್ಬರು ಇಷ್ಟವಿಲ್ಲದಿದ್ದರೂ, ಸನ್ನಿವೇಶಗಳ ಒತ್ತಡದಿಂದಾಗಿ ಮದುವೆಯಾಗಬೇಕಾಗುತ್ತದೆ. ದ್ವೇಷಿಸುವ ವ್ಯಕ್ತಿಯ ಜೊತೆಯೇ ಬದುಕಬೇಕಾದ ಅನಿವಾರ್ಯತೆ ಬಂದಾಗ, ಮನುಷ್ಯ ತನ್ನ ಅಹಂಕಾರವನ್ನು ಬಿಟ್ಟು ಹೇಗೆ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಮತ್ತು ವಿಧಿ ಹೇಗೆ ಮನುಷ್ಯನ ಜೀವನವನ್ನು ಬದಲಿಸುತ್ತದೆ ಎಂಬುದು ಈ ಕಥೆಯ ಸಾರ.

ಹೆಣ್ಣು, ಒಂದು ಮನೆ ಜವಾಬ್ದಾರಿ ಹೊತ್ತರೆ, ಆಕೆ ಎಂಥ ತ್ಯಾಗಕ್ಕೂ ಸಿದ್ಧ. “ಪವಿತ್ರ ಬಂಧನ”ದಲ್ಲಿಯೂ ಒಂದು ತ್ಯಾಗದ ಕಥೆಯಿದೆ. ಅನಿವಾರ್ಯತೆಗೆ ಕಟ್ಟುಬಿದ್ದು, ವಿಧಿ ನಡೆಸಿದ ಹಾದಿಯಲ್ಲಿ ಸಾಗುವ ಆಕೆಯ (ಪವಿತ್ರಾ) ಗಟ್ಟಿತನದ ಎಳೆಯಿದೆ. ಇದು ಕೇವಲ ಒಬ್ಬ ಹೆಣ್ಣಿನ ಹೋರಾಟವಲ್ಲ, ಬದಲಿಗೆ ಸವಾಲುಗಳ ನಡುವೆ ಧೃತಿಗೆಡದೆ ತನ್ನವರ ಸುಖಕ್ಕಾಗಿ ಹೇಗೆ ದೃಢವಾಗಿ ನಿಲ್ಲಬೇಕು ಅನ್ನೋ ಗಟ್ಟಿಗಿತ್ತಿ ಮಹಿಳೆಯರ ಜೀವನ ಪಾಠ.

ಕಥಾನಾಯಕ ದೇವ್‌ದತ್‌ ದೇಶಮುಖ್‌ ಕೆಲಸದ ವಿಚಾರದಲ್ಲಿ ಶಿಸ್ತಿನ ಮನುಷ್ಯ. ಹಿಡಿದ ಕೆಲಸವನ್ನು ಪಟ್ಟುಬಿಡದೆ ಮಾಡುವವ. ಮೊದಲ ಪ್ರಾಶಸ್ತ್ಯ ಏನಿದ್ದರೂ ಕೆಲಸ ಮಾತ್ರ. ಆದ್ರೆ, ಸಹೋದರ ತಿಲಕ್‌ ಅಂದ್ರೆ, ದೇವ್‌ಗೆ ಅತೀವ ಪ್ರೀತಿ. ತಿಲಕ್‌ಗಾಗಿ ಏನೇ ಪ್ರಾಮಿಸ್‌ ಮಾಡಿದ್ರೂ ದೇವ್‌ ತಪ್ಪಲ್ಲ. ಆದ್ರೆ, ಅದೇ ತಮ್ಮನ ಸಲುವಾಗಿ ತನಗೇ ತಾನೇ ಹಾಕಿಕೊಂಡ ಪಾಲಿಸಿಯನ್ನು ಬ್ರೇಕ್‌ ಮಾಡ್ತಾನೆ. ಅದೇ ರೀತಿ ಅಮ್ಮ ರಾಧಿಕಾ, ನಮ್ರತಾ ಜೊತೆಗೆ ಮದುವೆ ಸೆಟ್‌ ಮಾಡಲು ಮುಂದಾಗಿದ್ದಾಳೆ. ಅಮ್ಮ ತೋರಿಸೋ ಹುಡುಗಿಯನ್ನೇ ಮದುವೆ ಆಗೋಕೂ ದೇವ್‌ ರೆಡಿಯಾಗಿದ್ದಾನೆ.

ಉತ್ತಮ್ ಮಧು ಅವರ ನಿರ್ದೇಶನದಲ್ಲಿ ಈ ಸೀರಿಯಲ್‌ ಮೂಡಿಬರುತ್ತಿದೆ. ಮಹೇಶ್ ಜೊತೆಗೆ ಉತ್ತಮ್ ಮಧು ಜಂಟಿಯಾಗಿ ಈ ಸೀರಿಯಲ್ ನಿರ್ಮಾಣ ಮಾಡುತ್ತಿದ್ದಾರೆ. ‘ಪವಿತ್ರ ಬಂಧನ’ ಧಾರಾವಾಹಿಯಲ್ಲಿ ದೊಡ್ಡ ತಾರಾಗಣವೇ ಇದೆ. ಪವಿತ್ರಾ ಪಾತ್ರದಲ್ಲಿ ಅಮೂಲ್ಯ ಭಾರದ್ವಾಜ್, ದೇವ್ ಆಗಿ ಸೂರಜ್ ಮತ್ತು ತಿಲಕ್ ಪಾತ್ರದಲ್ಲಿ ಯಶಸ್ ನಟಿಸುತ್ತಿದ್ದಾರೆ. ಉಳಿದಂತೆ ರಾಧಿಕಾ ಪಾತ್ರದಲ್ಲಿ ಅನುಷಾ ರಾವ್, ನಮ್ರತಾ ಆಗಿ ರುಹಾನಿ ಶೆಟ್ಟಿ ಕಾಣಿಸಿಕೊಂಡರೆ, ಹಿರಿಯ ನಟರಾದ ವಿಜಯ್ ಕಾಶಿ ಅವರು ಗೋವರ್ಧನ್ ಪಾತ್ರಕ್ಕೆ ಹಾಗೂ ಅಂಬರೀಶ್ ಸಾರಂಗಿ ಅವರು ರಂಗ ಎಂಬ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ.‌

‘ಗೌರಿ ಕಲ್ಯಾಣ’ ಮತ್ತು ‘ಪವಿತ್ರ ಬಂಧನ’ ಎರಡೂ ಕತೆಗಳು ಆಧುನಿಕ ಬದುಕಿನ ಸಂಬಂಧಗಳ ಮತ್ತು ವರ್ಗ ವ್ಯತ್ಯಾಸಗಳ ನಡುವಿನ ಕಂದಕದ ಬಗ್ಗೆ ಬೆಳಕು ಚೆಲ್ಲಲಿವೆ. ಭಾವನೆಗಳ ಸಂಘರ್ಷದ ಜತೆಗೆ, ನಾರಿಶಕ್ತಿಯ ಮತ್ತೊಂದು ಮಗ್ಗಲನ್ನೂ ಇಲ್ಲಿ ನೋಡಬಹುದು. ಈ ಎರಡು ಧಾರಾವಾಹಿಗಳು ಕಲರ್ಸ್‌ ಕನ್ನಡದಲ್ಲಿ ಜನವರಿ 27ರಿಂದ ಪ್ರಸಾರ ಆರಂಭಿಸಲಿವೆ.

ಕಲರ್ಸ್‌ ಕನ್ನಡದ ಬಗ್ಗೆ
ಕನ್ನಡಿಗರ ಎದೆಯಲ್ಲಿ ಅಚ್ಚಳಿಯದೇ ಉಳಿದಿರೋ ಕಲರ್ಸ್‌ ಕನ್ನಡ, ಪ್ರತಿ ಮನೆಮನಗಳಿಗೂ ಪ್ರತಿನಿತ್ಯ ಭರ್ಜರಿ ಮನರಂಜನೆ ನೀಡುತ್ತ ಬಂದಿದೆ. ಮನ ಮಿಡಿಯುವ ದೈನಂದಿನ ಕಥೆಗಳಾದ ಭಾಗ್ಯಲಕ್ಷ್ಮೀ, ಗಂಧದಗುಡಿ, ಭಾರ್ಗವಿ LLB, ನಂದಗೋಕುಲ, ಮುದ್ದುಸೊಸೆ, ಪ್ರೇಮಕಾವ್ಯ, ಯಜಮಾನ ಮತ್ತು ನಕ್ಕು ನಗಿಸುವ ಗಿಚ್ಚಿ ಗಿಲಿಗಿಲಿ, ರಾಜಾ ರಾಣಿ, ನನ್ನಮ್ಮ ಸೂಪರ್‌ಸ್ಟಾರ್, ಫ್ಯಾಮಿಲಿ ಗ್ಯಾಂಗ್‌ಸ್ಟಾರ್ಸ್ ಶೋಗಳು ಜನಪ್ರಿಯವಾಗಿವೆ. ಬಿಗ್ ಬಾಸ್ ಕನ್ನಡ ಶೋ ಕನ್ನಡದ ಅತಿದೊಡ್ಡ ರಿಯಾಲಿಟಿ ಶೋ ಎಂದೇ ಖ್ಯಾತಿ ಪಡೆದಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor