“ಡೈರೆಕ್ಟರ್ಸ್ ಕಟ್” ಚಿತ್ರಕ್ಕೆ ವಿಶ್ವ ವಿದ್ಯಾಗಣಪತಿಯ ಸನ್ನಿಧಿಯಲ್ಲಿ ಚಾಲನೆ .

ಭರತ್ ವಿ.ಜೆ ನಿರ್ದೇಶನದ ಈ ಚಿತ್ರಕ್ಕೆ “ಮದುವೆಯ ಮಮತೆಯ ಕರೆಯೋಲೆ” ಚಿತ್ರದ ಖ್ಯಾತಿಯ ಸೂರಜ್ ಗೌಡ ನಾಯಕ .

ರಾಜೇಶ್ವರಿ ಎಂಟರ್ಪ್ರೈಸ್ ಲಾಂಛನದಲ್ಲಿ ಹೇಮಲತಾ ಬಿ.ಎಸ್ ಅವರು ನಿರ್ಮಿಸುತ್ತಿರುವ, ಭರತ್ ವಿ.ಜೆ ನಿರ್ದೇಶನದಲ್ಲಿ “ಮದುವೆಯ ಮಮತೆಯ ಕರೆಯೋಲೆ” ಚಿತ್ರದ ಖ್ಯಾತಿಯ ಸೂರಜ್ ಗೌಡ ನಾಯಕನಾಗಿ ನಟಿಸುತ್ತಿರುವ “ಡೈರೆಕ್ಟರ್ಸ್ ಕಟ್” ಚಿತ್ರದ ಮುಹೂರ್ತ ಸಮಾರಂಭ ಕೆಂಗೇರಿಯ ವಿಶ್ವವಿದ್ಯಾ ಗಣಪತಿ ದೇವಸ್ಥಾನದಲ್ಲಿ ನೆರವೇರಿತು. ಅನೇಕ ಗಣ್ಯರು ಹಾಗೂ ಚಿತ್ರತಂಡದ ಸದಸ್ಯರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು ಚಿತ್ರದ ಕುರಿತು ಮಾತನಾಡಿದರು.

ನಮ್ಮ ತಾಯಿ ಹೇಮಲತಾ ಅವರ ನಿರ್ಮಾಣದಲ್ಲಿ ಹಾಗೂ ನನ್ನ ನಿರ್ದೇಶನದಲ್ಲಿ “ಡೈರೆಕ್ಟರ್ಸ್ ಕಟ್” ಅಂತ ಒಂದು ಸಿನಿಮಾ ಮಾಡುತ್ತಿದ್ದೀವಿ. ಈ ಸಿನಿಮಾದ ನಾಯಕನಾಗಿ ಸೂರಜ್ ಗೌಡ ಅವರು ಹಾಗೂ ನಾಯಕಿಯರಾಗಿ ರಾಧಾ ಎಸ್ ಭಾಗಿ ಮತ್ತು ದಿವ್ಯ ಜೈನ್ ಅಭಿನಯಿಸುತ್ತಿದ್ದಾರೆ. ಚಿತ್ರದ ಬಹುತೇಕ ಭಾಗದ ಚಿತ್ರೀಕರಣ ದೇವಭೂಮಿ ಎನಿಸಿರುವ ಉತ್ತರಾಖಂಡದಲ್ಲೇ ನಡೆಯುತ್ತದೆ. ಇದೊಂದು ಸಿನಿಮಾ‌ದೊಳಗಿನ ಸಿನಿಮಾ ಇರುವ ಕಥೆ. ಕನ್ನಡದ ನಿರ್ದೇಶಕನೊಬ್ಬ ಸಿನಿಮಾಗಾಗಿ ಉತ್ತರಾಖಂಡಕ್ಕೆ ಹೋದಾಗ ಅಲ್ಲಿ ಏನೆಲ್ಲಾ ಆಗುತ್ತದೆ ಎಂಬುದೇ ಕಥಾ ಸಾರಾಂಶ. ಸೂರಜ್ ಗೌಡ ಅವರು ನಿರ್ದೇಶಕನ ಪಾತ್ರದಲ್ಲಿ ಹಾಗೂ‌ ರಾಧಾ ಎಸ್ ಭಾಗಿ ಅವರು ದಕ್ಷಿಣ ಭಾರತದ ನಾಯಕಿಯ ಪಾತ್ರದಲ್ಲಿ, ದಿವ್ಯ ಜೈನ್ ಅವರು ಉತ್ತರ ಭಾರತದ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಪಿ.ಡಿ.ಸತೀಶ್, ಸ್ವಾತಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಪ್ರಮೋದ್ ಗೌಡ ಛಾಯಾಗ್ರಹಣ ಹಾಗೂ ಕಲ್ಯಾಣ್ ಮಂಜುನಾಥ್ ಅವರ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಪ್ರಮೋದ್ ಜೋಯಿಸ್ ಬರಹಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇದೇ ತಿಂಗಳ 25ರಿಂದ ಚಿತ್ರೀಕರಣ ಆರಂಭವಾಗಲಿದೆ. “ಖೇಲಾ” ನಂತರ ನಾನು ನಿರ್ದೇಶಿಸುತ್ತಿರುವ ಎರಡನೇ ಚಿತ್ರ ಇದು ಎಂದರು ನಿರ್ದೇಶಕ ಭರತ್ ವಿ ಜೆ..

ನಿರ್ದೇಶಕರು ಹೇಳಿದ ಹಾಗೆ ಇದೊಂದು ಸಿನಿಮಾದೊಳಗೆ ಸಿನಿಮಾ ನಡೆಯುವ ಕಥೆ. ನನ್ನದು ನಿರ್ದೇಶಕನ ಪಾತ್ರ. ಕನ್ನಡದ ನಿರ್ದೇಶಕನೊಬ್ಬ ಉತ್ತರಾಖಂಡ ಕ್ಕೆ ತನ್ನ ಸಿನಿಮಾ ಚಿತ್ರೀಕರಣಕ್ಕಾಗಿ ಹೋದಾಗ ಅಲ್ಲಿ ಏನೆಲ್ಲಾ ಆಗುತ್ತದೆ ಎನ್ನುವ ಕಥಾಹಂದರ ಈ ಚಿತ್ರದಲ್ಲಿದೆ. ಇದೇ ವರ್ಷ ನನ್ನ ಮೂರು ಚಿತ್ರಗಳು ತೆರೆಗೆ ಬರಲಿದೆ. ಒಂದು ಚಿತ್ರವನ್ನು ನಾನೇ ನಿರ್ದೇಶನ ಮಾಡುತ್ತಿದ್ದೇನೆ ಎಂದು ನಾಯಕ ಸೂರಜ್ ಗೌಡ ಹೇಳಿದರು.

ನಾಯಕಿಯರಾದ ರಾಧಾ ಎಸ್ ಭಾಗಿ ಹಾಗೂ ದಿವ್ಯ ಜೈನ್ ಮುಂತಾದ ಚಿತ್ರತಂಡದ ಸದಸ್ಯರು “ಡೈರೆಕ್ಟರ್ಸ್ ಕಟ್” ಚಿತ್ರದ ಬಗ್ಗೆ ಮಾತನಾಡಿದರು.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor