ಚಿತ್ರ ವಿಮರ್ಶೆ – ಸೀಟ್ ಎಡ್ಜ್ ನಲ್ಲಿ ದೆವ್ವಗಳ ಹುಚ್ಚಾಟ
ಚಿತ್ರ – ಸೀಟ್ ಎಡ್ಜ್
ನಿರ್ಮಾಪಕರು – ಗಿರಿಧರ T.
ನಿರ್ದೇಶನ – ಚೇತನ್ ಶೆಟ್ಟಿ
ಛಾಯಾಗ್ರಹಣ – ದೀಪಕ್ ಕುಮಾರ್ ಜೆ.ಕೆ.
ಸಂಗೀತ – ಆಕಾಶ್ ಪರ್ವ
ಸಂಕಲನ – ನಾಗೇಂದ್ರ ಉಜ್ಜಯಿನಿ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು : ಸಿದ್ದು ಮೂಲಿಮನೆ ರಘು ರವೀಕ್ಷಾ ಶೆಟ್ಟಿ, ರಾಘು ರಾಮನಕೊಪ್ಪ, ಗಿರೀಶ್ ಶಿವಣ್ಣ, ಮಿಮಿಕ್ರಿ ಗೋಪಿ, ಲಕ್ಷ್ಮಿ ಸಿದ್ದಯ್ಯ, ಕಿರಣ್ ನಾಯಕ್ ಮುಂತಾದವರು.
ಇದೊಂದು ಯೂ ಟ್ಯೂಬರ್ ಜೀವನದ ಕಥೆಯ ಸುತ್ತ ತಿರುಗುವ ಹಾರರ್, ಥ್ರಿಲ್ಲರ್ ಕಾಮಿಡಿ ಚಿತ್ರ.

“ಸೀಟ್ ಎಡ್ಜ್” ಒಂದು ಹಾರರ್-ಕಾಮಿಡಿ ಚಿತ್ರ, ಯೂಟ್ಯೂಬರ್ ಸಿದ್ದು ಮೂಲಿಮನಿ ಅಭಿನಯದ ಈ ಚಿತ್ರ, ದೆವ್ವದ ಹುಡುಕಾಟ ಮತ್ತು ವ್ಲಾಗರ್ಗಳ ಸಾಹಸಗಳ ಹುಚ್ಚಾಟವನ್ನು ಒಳಗೊಂಡಿದೆ. ಜೊತೆಗೆ ಸೋಷಿಯಲ್ ಮೀಡಿಯಾದ ದುರ್ಬಳಕೆ ಹಾಗೂ ಸದ್ಬಳಕೆಯನ್ನು ತೋರಿಸಲಾಗಿದೆ.
ಯುಟ್ಯೂಬ್ನಲ್ಲಿ ಹೆಸರು ಮತ್ತು ಹಣ ಗಳಿಸಿ ರಾತ್ರೋ ರಾತ್ರಿ ಶ್ರೀಮಂತನಾಗ ಬೇಕು ಹಾಗೂ ಸೋಷಿಯಲ್ ಮೀಡಿಯಾದಲ್ಲಿ ತನ್ನದೇ ಆದ ಫಾಲೋವರ್ ಗಳನ್ನು ಗಳಿಸಬೇಕೆಂಬ ಆಸೆಯಿಂದ ಸಿದ್ದು, ಬೇರೆ ಬೇರೆಯ ವೀಡಿಯೋಗಳನ್ನು ಮಾಡಿ ನಗೆ ಪಾಟಲಿಗೆ ಈಡಾಗಿ ಟ್ರೋಲ್ ಆಗುತ್ತಾನೆ. ಕೆಟ್ಟ ಕೆಟ್ಟ ಕಾಮೆಂಟ್ಸ್ ಗಳಿಗೆ ಸಿಲುಕುತ್ತಾನೆ.
ಈ ಸಮಯದಲ್ಲಿ ಜಿಮ್ ನಲ್ಲಿ ಏರೋಬಿಕ್ಸ್ ಕಲಿಸುವ ಟೀಚರ್ ರವೀಕ್ಷಾ ಶೆಟ್ಟಿಯ ಪರಿಚಯವಾಗುತ್ತದೆ. ನಂತರ ಇಬ್ಬರ ನಡುವೆ ಪ್ರೀತಿ ಅರಳುತ್ತದೆ.

ನಂತರ ಅದರಿಂದ ಬೇಸತ್ತ ಸಿದ್ದು ತನ್ನ ಯೋಗ ಗುರು, ಸ್ನೇಹಿತ ರಘು ರಮನಕೊಪ್ಪ ಜೊತೆ ಸೇರಿ
ದೆವ್ವದ ವಿಡಿಯೋಗಳ ಮೂಲಕ ಜನಪ್ರಿಯತೆಯನ್ನು ಹೊಂದಲು ಪ್ರಯತ್ನಿಸುತ್ತಾನೆ.
ಗ್ರಾಫಿಕ್ಸ್ ಬಳಸಿ ನಕಲಿ ದೆವ್ವಗಳನ್ನು ತೋರಿಸಿ ಜನರಲ್ಲಿ ಕುತೂಹಲ ಹೆಚ್ಚಿ, ಹೆಚ್ಚು ಜನರಿಂದ ವೀಕ್ಷಣೆಯಾಗುತ್ತದೆ.
ನಂತರ, ನಿಜವಾದ ದೆವ್ವದ ಮನೆಗೆ ಹೋಗಿ ಅಲ್ಲಿ ನಡೆವ ಘಟನೆಗಳನ್ನು ಚಿತ್ರೀಕರಿಸಲು ಮುಂದಾಗುತ್ತಾನೆ ಸಿದ್ದು.
ಅದಕ್ಕಾಗಿ ನೂರು ವರ್ಷಗಳ ನಿಗೂಡವಾದ ಭಂಗಲೆಯನ್ನು ಆರಿಸಿಕೊಳ್ಳುತ್ತಾನೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹೆಸರು ಮಾಡಬೇಕೆಂಬ ಹಪಾಹಪಿಯಲ್ಲಿದ್ದ ಪೋಲಿಸ್ ಇನ್ಸ್ಪೆಕ್ಟರ್ ಗಿರೀಶ್ ಶಿವಣ್ಣ ಸಿದ್ದು ಜೊತೆ ಸೇರಿಕೊಳ್ಳುತ್ತಾನೆ, ಜೊತೆಗೆ ರಘು ರಮನಕೊಪ್ಪ, ಮತ್ತು ಸಿದ್ದು ಪ್ರೇಯಸಿ ಎಲ್ಲರೂ ಆ ಮನೆಗೆ ಹೋಗುತ್ತಾರೆ. ಅಷ್ಟೊತ್ತಿಗೆ ಚಿತ್ರದ ಮೊದಲರ್ಧ ಮುಗಿದು ಹೋಗಿರುತ್ತದೆ. ಸೆಕೆಂಡ್ ಆಫ್ ಪೂರ್ತಿ ಆ ಭೂತ ಬಂಗಲೆಯಲ್ಲಿ ಕಥೆ ನಡೆಯುತ್ತದೆ.

ಒಬ್ಬ ದೊಡ್ಡ ಬಿಸಿನೆಸ್ ಮ್ಯಾನ್ ಆ ಬಂಗಲೆಯಲ್ಲಿ ತನ್ನ ಹೆಂಡತಿ ಬೇರೆ ಯಾರದೋ ಜೊತೆಯಲ್ಲಿ ಅನೈತಿಕ ಸಂಬಂಧ ಹೊಂದಿದ್ದ ಕಾರಣ ಆಕೆಯನ್ನು ಕೊಲ್ಲುತ್ತಾನೆ ಆದರೆ ಅಕ್ರಮ ಸಂಬಂಧಿ ಯಾರೆಂದು ತಿಳಿಯದೆ ಎಲ್ಲರನ್ನು ಕೊಲ್ಲುತ್ತಾನೆ, ತನ್ನ ಮಗುವನ್ನು ಬೇರೆಯವರಿಗೆ ಹುಟ್ಟಿದ್ದು ಎಂದು ಅದನ್ನು ಕೊಲ್ಲುತ್ತಾನೆ. ಕೊನೆಗೆ ಆತನು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಆ ಊರಿಗೆ ಊರೆ ದೆವ್ವದ ಕಾಟದಿಂದ ಖಾಲಿಯಾಗಿರುತ್ತದೆ.
ಆ ಬಂಗಲೆಗೆ ಕಾಲಿಟ್ಟ ನಂತರ ಏನೆಲ್ಲಾ ಅವಗಡವಾಗುತ್ತೆ, ಅಲ್ಲಿ ಕಾಲಿಟ್ಟವರು ಯಾರು ಹಿಂದೆ ವಾಪಸ್ ಬರುವುದಿಲ್ಲ ಅಂತದ್ದರಲ್ಲಿ ಸಿದ್ದು ಮತ್ತು ಆತನ ಟೀಮ್ ಏನಾಗುತ್ತದೆ, ಯಾರೆಲ್ಲಾ ಸಿಕ್ಕಿ ಕೊಳ್ಳುತ್ತಾರೆ ಎಂಬ ಕುತೂಹಲಕ್ಕೆ ಚಿತ್ರ ನೋಡಬೇಕಾಗುತ್ತದೆ.
ಚಿತ್ರದ ಮೊದಲ ಅರ್ಧದಲ್ಲಿ ಹಾಸ್ಯ ಮತ್ತು ಪ್ರೇಮ ಕಥೆ, ಎರಡನೇ ಅರ್ಧದಲ್ಲಿ ಥ್ರಿಲ್ಲರ್, ಹಾರರ್ ನಿಂದ ಕೂಡಿದೆ.
ನಟನೆ ಮತ್ತು ತಾಂತ್ರಿಕತೆ ಚನ್ನಾಗಿದೆ.
ಸಿದ್ದು ಮೂಲಿಮನಿ ಹಾಸ್ಯ ಸನ್ನಿವೇಶಗಳಲ್ಲಿ ಚೆನ್ನಾಗಿ ನಟಿಸಿದ್ದಾರೆ, ರಘು ರಾಮನಕೊಪ್ಪ ಆರಂಭದಲ್ಲಿ ನಗಿಸುತ್ತಾರೆ ಆದರೆ ಕೆಲವು ಡೈಲಾಗ್ಗಳು ಕಿರಿಕಿರಿ ಮೂಡಿಸುತ್ತವೆ. ರಮನ ಕೊಪ್ಪರವರ ಅಭಿನಯವನ್ನು ನಿರ್ದೇಶಕರು ಸರಿಯಾಗಿ ಬಳಸಿಕೊಂಡಿಲ್ಲ. ಒಬ್ಬ ಒಳ್ಳೆಯ ನಟನ ಶ್ರಮ ಚಿತ್ರದಲ್ಲಿ ವ್ಯರ್ಥವಾಗಿದೆ ಎನ್ನಬಹುದು.
ರವೀಕ್ಷ ನಂದಿನಿ ಪಾತ್ರ ನೆನಪಿನಲ್ಲಿ ಉಳಿಯದು. ಸಂಗೀತದಲ್ಲಿ ಹಾಡುಗಳು ಕೇಳುವಂತಿದೆ. ದೆವ್ವದ ಮನೆಯ ಚಿತ್ರೀಕರಣ ಚನ್ನಾಗಿ ಮೂಡಿಬಂದಿದೆ. ನಿರ್ದೇಶಕರು ಮೊದಲನೇ ಅರ್ಧದ ಕಥೆಯ ಬಗ್ಗೆ ಸ್ವಲ್ಪ ಸರಿಯಾಗಿ ಗಮನ ನೀಡಿದ್ದರೆ ಹಾಗೂ ಸಂಭಾಷಣೆಯ ಬಗ್ಗೆ ಇನ್ನೊಂದಷ್ಟು ಕೆಲಸ ಮಾಡಿದ್ದರೆ ಈ ಚಿತ್ರ ಇನ್ನೂ ಚನ್ನಾಗಿ ಮೂಡಿ ಬರುತಿತ್ತು.
ಒಟ್ಟಿನಲ್ಲಿ ಥ್ರಿಲ್ಲರ್ -ಹಾರರ್ ಸಿನಿಮಾ ನೋಡುಗರಿಗೆ ಈ ಚಿತ್ರ ಇಷ್ಟವಾಗುತ್ತದೆ. ಎನ್ನಬಹುದು.











