ಚಿತ್ರ ವಿಮರ್ಶೆ – ಕೆಂಪು, ಹಳದಿ, ಹಸಿರು” ನೋಡಿದ್ದು ಸುಳ್ಳಾಗಬಹುದು.
ಚಿತ್ರ – ಕೆಂಪು, ಹಳದಿ ಹಸಿರು
ನಿರ್ಮಾಪಕರು – ಪ್ರಸಾದ್ ಕುಮಾರ್ ನಾಯ್ಕ್, ಪ್ರಸಾದ್ ಈರ್ಲಾ ಮತ್ತು ಹರೀಶ್ ಧಾಸ್ಮಾ
ನಿರ್ದೇಶನ – ಮಣಿ ಏಜೆ ಕಾರ್ತೀಕೇಯನ್
ಛಾಯಾಗ್ರಹಣ – ಮಂಜುನಾಥ್ ನಾಯಕ್
ಸಂಕಲನ – ವಿಕಾಶ್ ವಿಶ್ವಕರ್ಮ
Rating -3/5
ಚಿತ್ರ ವಿಮರ್ಶೆ- ಮಂಜುರಾಜ್ ಸೂರ್ಯ
ಕಲಾವಿದರು :- ಶ್ರೀಹಾನ್ ದೀಪಕ್, ದಿವ್ಯಾಸುರೇಶ್, ಅರವಿಂದ್ ಬೋಳಾರ್, ಶೈಲಾಶ್ರೀ ಮುಲ್ಕಿ ಚಿಂದೋಡಿ ವಿಜಯ್ಕುಮಾರ್, ಶ್ರೀಜನ್, ಮೀನಾಕ್ಷಿಹರ್ತಿ, ಮಾನಸ್, ಉಮೇಶ್ ಹೆಗಡೆ ಕಡ್ತಲಾ ಮುಂತಾದವರು.
ಈ ವಾರ ತೆರೆಕಂಡ ಸನ್ರೈಸ್ ಎಂಟರ್ಟೈನ್ಮೆಂಟ್ ಅಂಡ್ ಫಿಲಂಸ್ ಬ್ಯಾನರ್ ಮೂಲಕ ಪ್ರಸಾದ್ಕುಮಾರ್ ನಾಯ್ಕ್ ಬಂಡವಾಳ ಹೂಡಿರುವ ಹಾಗೂ ಮಣಿ.ಎಜೆ.ಕಾರ್ತಿಕೇಯನ್ ಮೊದಲ ಬಾರಿ ಕನ್ನಡ ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ’ಸ್ಟಾಪ್, ಥಿಂಕ್ ಅಂಡ್ ಪ್ರೊಸೀಡ್ ಇನ್ ಲೈಫ್’ ಎಂಬ ಟ್ಯಾಗ್ ಲೈನ್ ಹೊತ್ತು “ಹಸಿರು, ಹಳದಿ ಕೆಂಪು” ಚಿತ್ರ ತೆರೆ ಕಂಡಿದೆ.
ಅವನು ಅರ್ಜುನ್ (ಶ್ರೀಹಾನ್) ಆತ ಯಸ್ ಮಾರ್ಟ್ ನಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಡುತ್ತಾನೆ, ಅವನ ಜೊತೆಗೆ ಬಂಟಿ (ಅರವಿಂದ್ ಬೋಳಾರ್), ಮತ್ತು ಸುಮನ್ ಕೂಡ ಸಹೋದ್ಯೋಗಿಗಳು.
ಅಪ್ಪನಿಗೆ ಮತ್ತೊಂದು ಸಂಭಂದ, ಮತ್ತೊಬ್ಬ ಮಗ ಇರುವುದು ಅದು ಹೇಗೊ ಮಗನಿಗೆ ಅಂದರೆ ಕಥಾ ನಾಯಕನಿಗೆ ತಿಳಿದು ಬಿಡುತ್ತದೆ ಆ ಕಾರಣಕ್ಕಾಗಿಯೇ ಅಪ್ಪ ಮತ್ತು ಅಪ್ಪನ ಐಶ್ವರ್ಯ, ಅಂತಸ್ತು ಎಲ್ಲವನ್ನು ಬಿಟ್ಟು ಅವನು ಡಿಲಿವರಿ ಬಾಯ್ ಆಗಿ ಕೆಲಸ ಮಾಡುತ್ತಾನೆ.
ಅರ್ಜುನ್, ಸುಮನ್ ಮತ್ತು ಬಂಟಿ ಒಂದೇ ಮಾರ್ಟ್ನಲ್ಲಿ ಡೆಲಿವರಿ ಬಾಯ್ಗಳಾಗಿ ಕೆಲಸ ಮಾಡುತ್ತಿರುತ್ತಾರೆ.
ಈ ಮಧ್ಯೆ, ಅರ್ಜುನ್ಗೆ ಇಬ್ಬರು ಹುಡುಗಿಯರು ಪರಿಚಯವಾಗುತ್ತದೆ, ಒಬ್ಬಳು ಟ್ರಾಫಿಕ್ ಇನ್ಸ್ ಪೆಕ್ಟರ್, ಮತ್ತೊಬ್ಬಳು ಏರ್ ಹೋಸ್ಟರ್. ಟ್ರಾಫಿಕ್ ಇನ್ಸ್ ಪೆಕ್ಟರ್ ಫೈನ್ ಹಾಕಿ, ಹಾಕಿ ಇಬ್ಬರ ಮಧ್ಯೆ ಲವ್ ಶುರು ಹಾಗುತ್ತೆ ಇದರ ಮಧ್ಯೆ ಒಬ್ಬ ಅನಾಥ ಮಗುವಿನ ಜೊತೆ ಕಥಾ ನಾಯಕನಿಗೆ ಮಮತೆ, ವಾತ್ಸಲ್ಯದ ಅಂತಕರಣ ತೆರೆದು ಕೊಳ್ಳುತ್ತದೆ. ಮಗುವನ್ನು ಬೇಟಿ ಮಾಡುತ್ತಲೇ.. ಇನ್ಸ್ ಪೆಕ್ಟರ್ ಜೊತೆ ಪ್ರೀತಿ ಅರಳಿ ಒಂದು ಡ್ಯೂಯೆಟ್ ಕೂಡ ಆಗಿ ಹೋಗುತ್ತೆ.
ನಂತರ ಏರ್ ಹೋಸ್ಟರ್ ದಿವ್ಯಾ ದುರೇಶ್ (ಬಿಗ್ ಬಾಸ್ ಖ್ಯಾತಿ) ಹಗಲಿನಲ್ಲಿ ಕುಡಿದು ರಸ್ತೆ ಯಲ್ಲಿ ತೂರಾಡುವ, ನನಗೆ ಇನ್ನು ಎಣ್ಣೆ ಬೇಕು ಅಂತ ರಚ್ಚೆ ಹಿಡಿಯುವ ಮಧ್ಯಪ್ರೇಮಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಮನೆಗೆ ಉಪ್ಪಿನಕಾಯಿ ಆರ್ಡರ್ ಮಾಡುವ ಮೂಲಕ ಡೆಲಿವರಿ ಬಾಯ್ ಅರ್ಜುನ್ ಜೊತೆ ಪ್ರೇಮ ಪ್ರಣಯ ಶುರುವಾಗಿ ಇವರಿಬ್ಬರ ಕಾಂಬಿನೇಷನ್ ನಲ್ಲೂ ಒಂದು ಲವ್ ಸಾಂಗ್ ನಡೆಯತ್ತದೆ.
ಈ ಮಧ್ಯೆ, ಅನಾಮಧೇಯನೊಬ್ಬ ಈ ಮೂವರು ಡೆಲಿವರಿ ಬಾಯ್ ಗಳನ್ನು ಬೇಟಿ ಮಾಡಿ, ಒಂದು ಡೀಲ್ ಕೊಡುತ್ತಾನೆ. ಈ ಡೀಲ್ ಏನು ಮತ್ತು ಮೂವರೂ ಏನನ್ನು ಹುಡುಕಿಕೊಂಡು ಹೋಗುತ್ತಾರೆ ಎಂದು ಗೊತ್ತಾಗಬೇಕಿದ್ದರೆ ಚಿತ್ರ ನೋಡಬೇಕು.

ಈ ಡೀಲ್ ನಿಂದಾಗಿ ಈ ಮೂವರ ಮಧ್ಯೆ ಗೊಂದಲ, ಅನುಮಾನ, ಜಗಳ ಶುರುವಾಗುತ್ತದೆ. ಈಡೀ ಚಿತ್ರ ಬೈಕ್ ಓಡುತ್ತಲೆ ಇರುತ್ತದೆ. ಒಬ್ಬನನ್ನು ಫಾಲೋ ಮಾಡಿಕೊಂಡು ಒಬ್ಬ, ಅವನನ್ನು ಫಾಲೋ ಮಾಡಿಕೊಂಡು ಮತ್ತೊಬ್ಬ ಹೀಗೆ ತ್ರಿಕೋನಾಕಾರದಲ್ಲಿ ಚಿತ್ರ ಗೊಂದಲಮಯವಾಗಿ ಸಾಗುತ್ತದೆ. ನಿರ್ದೇಶಕರು ಏನು ಹೇಳಲು ಹೊರಟಿದ್ದಾರೆ ಎನ್ನುವುದು ನಿಗೂಡ, ವಿಸ್ಮಯ.? ಅನ್ನಿಸುತ್ತದೆ.
ಇಲ್ಲಿ ಬಹುತೇಕ ಹೊಸಬರ ನಡುವೆ ಅರವಿಂದ್ ಬೋಳಾರ್, ಚಿಂದೋಡಿ ವಿಜಯ್ ಕುಮಾರ್ ಹಾಗೂ ದಿವ್ಯ ಸುರೇಶ್ ಪರಿಚಿತ ಮುಖಗಳು. ಅವರಲ್ಲಿ ಚಿಂದೋಡಿ ವಿಜಯ್ ಕುಮಾರ್ ನಿಗೂಡವಾಗಿ ಡೀಲ್ ಕೊಡುವ ವ್ಯಕ್ತಿ ಆದರೆ ಮಾತು ಕಮ್ಮಿ ಮೌನ ಅಭಿನಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ, ಇನ್ನು ಅರವಿಂದ್ ಬೋಳಾರ್ ಡೆಲಿವರಿ ಬಾಯ್ ಗಳಾದ ಮೂವರಲ್ಲಿ ಒಬ್ಬರು ಅವರೇ ಹಾಸ್ಯ ದೃಶ್ಯಗಳಿಗೆ ಜೀವ ಆದರೆ ಅವರ ಸಂಭಾಷಣೆ ಬೇಕಾ ಬಿಟ್ಟಿಯಾಗಿ ಬರೆಯಲಾಗಿದೆ. ಅಥವಾ ಅವರೇ ಬರೆದುಕೊಂಡಿದ್ದಾರೇನೋ ಗೊತ್ತಿಲ್ಲ. ನಗುವೇ ಬರುವುದಿಲ್ಲ. ಅವರು ಮಂಗಳೂರಿನ ಕಲಾವಿದರು ಅಲ್ಲಿಯ ಶೈಲಿಯಲ್ಲಿ ಮಾತಾಡುವವರು ಈ ಸಿನಿಮಾದಲ್ಲಿ ಅವರೊಬ್ಬರೆ. ಚಿತ್ರದ ಕಥೆ ನಡೆಯುವುದು ಕರಾವಳಿಯ ಅಂಗಳದಲ್ಲಿ ಆದರೆ ಚಿತ್ರದಲ್ಲಿ ಅರವಿಂದ್ ಬೋಳಾರ್ ಒಬ್ಬರನ್ನು ಬಿಟ್ಟರೆ ಮತ್ತೆಲ್ಲ ಕಲಾವಿದರು ಬೆಂಗಳೂರಿನ ಸೈಲಿಯಲ್ಲೇ ಮಾತಾಡುತ್ತಾರೆ. ಚಿತ್ರಕ್ಕೆ ಬಿಗಿಯಾದ ಸಂಭಾಷಣೆ ಬೇಕಾಗಿತ್ತು ಅನ್ನಿಸುತ್ತದೆ.
ಇನ್ನು ಬಿಗ್ ಬಾಸ್ ಖ್ಯಾತಿಯ ದಿವ್ಯಾ ಸುರೇಶ್ ಗುರುತು ಸಿಗದಷ್ಟು ಬದಲಾಗಿದ್ದಾರೆ, ಕುಡಿಯೋದೇ ನನ್ನ ವೀಕ್ನೆಸ್ಸು ಆದರೆ ಗಗನ ಸಖಿಯೇ ನನ್ನ ಬಿಸಿನೆಸ್ ಅನ್ನುವಂತೆ ಅವರ ಪಾತ್ರ. ಮಾಡ್ರನ್ ಹುಡುಗಿಯ ನಡುವೆ, ಕುಡಿತದಿಂದ ಬಿಡುವು ಮಾಡಿಕೊಂಡು ಟೆಡಿಷನಲ್ ಆಗಿ ದೇವಸ್ಥಾನಕ್ಕೂ ಬರುತ್ತಾರೆ.
ನಾಯಕನ ಪಾತ್ರದಲ್ಲಿ ಅಭಿನಯಿಸಿರುವ ಶ್ರೀಹಾನ್ ಅಭಿನಯದಲ್ಲಿ ಇನ್ನೂ ಪಕ್ವತೆ ಬೇಕು ಅನ್ನಿಸುತ್ತದೆ, ಮೊದಲ ಚಿತ್ರವಾದ್ದರಿಂದ ಮುಂದೆ ಕಲಿಯ ಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳಬಹುದು.
ಛಾಯಾಗ್ರಾಹಕ ಮಂಜುನಾಥ್ ನಾಯಕ್ ಎಲ್ಲೆಲ್ಲಿ ಕ್ಯಾಮರಾ ಇಡಲು ಸಾಧ್ಯವೋ ಅಲ್ಲೆಲ್ಲ ಕ್ಯಾಮಾರಾ ಇಟ್ಟು ಇದು ಸಾಧ್ಯ ಎಂದು ನಿರೂಪಿಸಿದ್ದಾರೆ. ಚಿತ್ರದಲ್ಲಿ ಹೆಚ್ಚು ಕೆಲಸ ಮಾಡಿರುವುದು ಮತ್ತು ಕಣ್ಣಿಗೆ ಕಾಣಿಸುವುದು ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ. ಚಿತ್ರದಲ್ಲಿ ಎರಡು ಹಾಡುಗಳು ಗಮನಕ್ಕೆ ಬರುವಂತಿದೆ.
ಒಟ್ಟಿನಲ್ಲಿ ಜೀವನದಲ್ಲಿ ಯಾವುದೇ ವಿಷಯವಾದರೂ ನಿಂತು ಯೋಚಿಸಿ ಮುಂದುವರಿಯಬೇಕು ಎನ್ನುವುದು ಕೆಂಪು, ಹಳದಿ, ಹಸಿರು ಚಿತ್ರದ ಸಿಗ್ಲಲ್.











