ಕರಳೆ ಸಿನಿಮಾ ಹೆಸರಿನ ಅರ್ಥ ತಿಳಿಸಿದ ಅದೃಷ್ಟಶಾಲಿಗಳಿಗೆ ಐ ಫೋನ್ ಉಡುಗೊರೆ ಹೆಸರು ಪ್ರಕಟಿಸಿದ ವಸಿಷ್ಟ ಸಿಂಹ

ಕರಳೆ ಸಿನಿಮಾ ತಂಡದಿಂದ ಐ ಫೋನ್ ಉಡುಗೊರೆ
ಕರಳೆ ಚಿತ್ರದ ಹೆಸರಿನ ಅರ್ಥ ತಿಳಿಸಿದ ಅದೃಷ್ಟಶಾಲಿಗಳ ಹೆಸರು ಪ್ರಕಟಿಸಿದ ವಸಿಷ್ಟ ಸಿಂಹ

ಚಿತ್ರದ ಟೈಟಲ್ ಹಾಗೂ ಪೋಸ್ಟರ್ ಮೂಲಕ ಸುದ್ದಿಯಾಗಿದ್ದ ಕರಳೆ ಸಿನಿಮಾದಿಂದ ಐ ಫೋನ್ ಗಿಫ್ಟ್ ಕೊಡಲಾಗಿದೆ. ಚಿತ್ರದ ಹೆಸರಿನ ಅರ್ಥ ತಿಳಿಸಿದ ಅದೃಷ್ಟಶಾಲಿಗಳಿಗೆ ಐ ಫೋನ್ ಉಡುಗೊರೆ ಸಿಕ್ಕಿದೆ. ಕನ್ನಡದ ಕಂಚಿನ ಕಂಠ ನಟ ವಸಿಷ್ಟ ಸಿಂಹ ಲಕ್ಕಿಡಿಪ್ ಎತ್ತುವ ಮೂಲಕ ಅದೃಷ್ಟಶಾಲಿಗಳ ಆಯ್ಕೆ ಮಾಡಿದ್ದಾರೆ.


‘ಕಲಿವೀರ’, ‘ಕನ್ನಡ ದೇಶದೊಳ್’ ಚಿತ್ರ ಮಾಡಿದ್ದ ನಿರ್ದೇಶಕ ಅವಿರಾಮ್ ಕಂಠೀರವ ಅವರ ನಿರ್ದೇಶನದಲ್ಲಿ ‘ಕರಳೆ’ ಮೂಡಿ ಬರುತ್ತಿದ್ದು, ಇದು ನೈಜ ಘಟನೆ ಆಧಾರಿತ ಚಿತ್ರವಾಗಿದೆ. ಇದಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು ಶೀಘ್ರವೇ ಚಿತ್ರ ಅಂತಿಮ ಘಟ್ಟದ ಕೆಲಸಗಳು ನಡೆಯುತ್ತಿದೆ.
ಚಿತ್ರದ ಪ್ರಚಾರದ ಭಾಗವಾಗಿ ನಡೆಸಿದ್ದ “ಕರಳೆ” ಹೆಸರಿನ ಅರ್ಥ ತಿಳಿಸುವ ಕಾಂಟೆಸ್ಟ್ ನಲ್ಲಿ ಅದೃಷ್ಟಶಾಲಿಯನ್ನು ಆಯ್ಕೆ ಮಾಡಿ ಐ ಫೋನ್ ನೀಡಲಾಗಿದೆ. ಈ ಆಯ್ಕೆ ಕಾರ್ಯಕ್ರಮ ಹಾಗೂ ಪತ್ರಿಕಾಗೋಷ್ಟಿ ಬೆಂಗಳೂರಿನ ಎಸ್.ಆರ್.ವಿ. ಥಿಯೇಟರ್ ನಲ್ಲಿ ಅದ್ದೂರಿಯಾಗಿ ನಡೆದಿದೆ. ಅಪ್ಪು ದಡ್ಡಿ ಹಾಗೂ ನಂಜರಾಜ್ ಹೆಮ್ಮೆಯ ಕನ್ನಡಿಗ ಎನ್ನುವ ಇಬ್ಬರು ಅದೃಷ್ಟಶಾಲಿಗಳು ಈ ಕಾಂಟೆಸ್ಟ್ ನಲ್ಲಿ ವಿಜೇತರಾಗಿದ್ದು ಇಬ್ಬರಿಗೆ ಚಿತ್ರತಂಡದಿಂದ ಉಡುಗೊರೆ ಸಿಗಲಿದೆ.


“ಒಂದು ಸಿನಿಮಾ ಪ್ರೇಕ್ಷಕರನ್ನು ತಲುಪಬೇಕಿದ್ದರೆ ನಿರ್ಮಾಪಕರ ಜೇಬು ತುಂಬಿ ಮತ್ತಷ್ಟು ಪ್ರಯತ್ನ ಅವರಿಂದ ಆಗಬೇಕಿದ್ದರೆ ಅದರ ಹಿಂದೊಂದು ಗೆಲುವು ಇರಬೇಕು. ಅದು ಕಮರ್ಷಿಯಲ್ ಅಥವಾ ಕ್ರಿಟಿಕ್ಸ್ ಗೆಲುವಾಗಿರಬಹುದು ಒಟ್ಟಾರೆ ಹಣ ಹಾಗೂ ಹೆಸರು ಬಂದಾಗ ನಾವದನ್ನು ಪರಿಪೂರ್ಣ ಗೆಲುವು ಎಂದು ಭಾವಿಸುತ್ತೇವೆ. ಇಂತಹಾ ಗೆಲುವು ಚಿತ್ರರಂಗದ ದಾರಿಯನ್ನು ಬದಲಿಸಬಲ್ಲದು. ಕನ್ನಡ ಚಿತ್ರರಂಗಕ್ಕೆ ಕಳೆದ ಎರಡೂವರೆ ವರ್ಷಗಳಿಂದ ಗೆಲುವಿನ ಕೊರತೆ ಇತ್ತು ಆದರೆ ಈಗ ಹೊಸಬರ ಸು ಫ್ರಂ ಸೋ ಭರ್ಜರಿ ಗೆಲುವು ಕಾಣುತ್ತಿದೆ. ಇಂತಹಾ ಕಮರ್ಷಿಯಲ್ ಯಶಸ್ಸು ನಿರ್ಮಾಪಕರಿಗೆ ಮತ್ತಷ್ಟು ಹೊಸ ಬಗೆಯ ಚಿತ್ರಗಳನ್ನು ನಿರ್ಮಿಸಲು ಕಾರಣವಾಗುತ್ತದೆ. ಕರಳೆ ಚಿತ್ರತಂಡದ ಪ್ರಯತ್ನಕ್ಕೆ ನಿಮ್ಮ ಬೆಂಬಲ ಇರಲಿ ಎಂದು ಹೊಸಬರ ತಂಡಕ್ಕೆ ವಸಿಷ್ಟ ಸಿಂಹ ಶುಭ ಹಾರೈಸಿದ್ದಾರೆ.


ಚಿತ್ರದ ನಿರ್ದೇಶಕ ಅವಿರಾಮ್ ಕಂಠೀರವ, ಚಿತ್ರದ ನಿರ್ಮಾಪಕ ಪಾಲಾಕ್ಷ, ಬಾಲನಟಿ ಶ್ರಿಯಾ, ಸಂಗೀತ ನಿರ್ದೇಶಕ ರಾಘವೇಂದ್ರ. ವಿ ಸೇರಿದಂತೆ ಚಿತ್ರತಂಡ ಚಿತ್ರದ ಕುರಿತಂತೆ ಮಾಹಿತಿ ಹಂಚಿಕೊಂಡರು.
ರಾಗದನಿ ಕ್ರಿಯೇಷನ್ಸ್ ರವರ ಸಹಯೋಗದಲ್ಲಿ ಚಿತ್ರ ತಯಾರಾಗಿದ್ದು ಸಿನಿಮಾ ಒಂದು ಮಹಿಳಾ ಪ್ರಧಾನ ಕಥೆಯಾಗಿದ್ದು ಸಮಾಜದ ವಾಸ್ತವ ಅಂಶಗಳನ್ನು ಒಳಗೊಂಡಿದೆ. ಎಮೋಷನಲ್, ರಾ, ಮನಕಲಕುವ ದೃಶ್ಯಗಳು ಚಿತ್ರದಲ್ಲಿ ಇರಲಿವೆ. ಇಲ್ಲಿಯವರೆಗೆ ಸಿನಿಮಾ ಕ್ಯಾಮೆರ ಕಾಲಿಡದ ಜಾಗದಲ್ಲಿ ಚಿತ್ರೀಕರಣ ನಡೆದಿರುವ ವಿಶೇಷತೆ ಈ ಕರಳೆ ಚಿತ್ರಕ್ಕಿದೆ.


‘ಕರಳೆ’ ಭಾರತ ಹಾಗೂ ಚೀನಾ ದೇಶಕ್ಕೆ ಸಾಮ್ಯತೆ ಹೊಂದಿರುವ ಕಥೆ ಇದಾಗಿದೆ. ಹೀಗಾಗಿ ಈ ಚಿತ್ರವನ್ನು ಕನ್ನಡ ಹಾಗೂ ಚೈನೀಸ್ ಭಾಷೆಯಲ್ಲಿ ತೆರೆಗೆ ತರಲು ನಿರ್ದೇಶಕ ಅವಿರಾಮ್ ಕಂಠೀರವ ಸಿದ್ಧತೆ ನಡೆಸುತ್ತಿದ್ದಾರೆ. ಎರಡು ದೇಶಗಳಲ್ಲಿ ನಡೆಯುವ ಘಟನೆಗಳಿಗೆ ಸಾಮ್ಯತೆ ಇರುವ ಕಾರಣ ಕನ್ನಡ ಮತ್ತು ಚೈನೀಸ್ ಭಾಷೆಯಲ್ಲಿ ಸಿನಿಮಾ ನಿರ್ಮಿಸುತ್ತಿದ್ದಾರೆ. ಇನ್ನೂ ಕನ್ನಡ ಜೊತೆಗೆ ಚೀನಾದಲ್ಲಿ ತಯಾರಾಗುತ್ತಿರುವ ಮೊದಲ ಭಾರತದ ಸಿನಿಮಾ ಎಂಬ ಹೆಗ್ಗಳಿಕೆ ʻಕರಳೆʼ ಚಿತ್ರದ ಪಾತ್ರವಾಗಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor