ʼದೇವರ ತಾಣʼದ ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರದ ಚಿತ್ರೀಕರಣ ಸಂಪೂರ್ಣ!

ಚಿತ್ರೀಕರಣದಲ್ಲಿ ʼಬಾರ್‌ʼನಲ್ಲಿ ಕೋಮಲ್‌ ಕಮಾಲ್‌.

ಸೆನ್ಸೇಶನಲ್‌ ಸ್ಟಾರ್‌ ಕೋಮಲ್‌ ಕುಮಾರ್‌, ಮೇಘನಾ ರಾಜ್‌, ಅನುಷಾ ರೈ ಮುಖ್ಯಭೂಮಿಕೆಯಲ್ಲಿ ಅಭಿನಯಿಸುತ್ತಿರುವ ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಪೂರ್ಣಗೊಂಡಿದೆ. ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರಕ್ಕೆ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ ಆಕ್ಷನ್‌-ಕಟ್‌ ಹೇಳುತ್ತಿದ್ದು, ವಿಕಾಸ್‌ ಶೆಟ್ಟಿ ಈ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡುತ್ತಿದ್ದಾರೆ. ಎರಡು ಹಂತಗಳಲ್ಲಿ 75 ದಿನಗಳ ಕಾಲ  ʼಸಂಗೀತಾ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರದ ಚಿತ್ರೀಕರಣ ನಡೆಸಲಾಗಿದ್ದು, ಕುಂದಾಪುರ, ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ಕರಾವಳಿ ಮಲೆನಾಡು ಭಾಗದಲ್ಲಿ ಈ ಚಿತ್ರದ ಬಹುತೇಕ ಚಿತ್ರೀಕರಣ ನಡೆಸಲಾಗಿದೆ.

ಇನ್ನು ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರದ ಚಿತ್ರೀಕರಣಕ್ಕಾಗಿ ಕುಂದಾಪುರದ ಅಂಪಾರಿನ ವಾಲ್ತೂರು ಗ್ರಾಮದಲ್ಲಿ ಏಳು ವಿಭಿನ್ನ ವಿನ್ಯಾಸದ ಬೃಹತ್‌ ಸೆಟ್‌ಗಳನ್ನು ನಿರ್ಮಿಸಿ, ಅದರಲ್ಲಿ ಚಿತ್ರದ ಬಹುಭಾಗದ ಚಿತ್ರೀಕರಣವನ್ನು ನಡೆಸಲಾಗಿರುವುದು ವಿಶೇಷ. ಕಥೆಯ ಬೇಡಿಕೆಗೆ ತಕ್ಕಂತೆ, ಸುಮಾರು ಎರಡು ಎಕರೆ ವಿಸ್ತೀರ್ಣದ ವಿಶಾಲವಾದ ಜಾಗದಲ್ಲಿ ಏಳು ವೈವಿಧ್ಯಮಯ ಸೆಟ್‌ಗಳನ್ನು ಹಾಕಿ, ಆ ಸೆಟ್‌ನಲ್ಲಿಯೇ ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಚಿತ್ರದ ಶೇಕಡಾ 90ರಷ್ಟು ಚಿತ್ರೀಕರಣವನ್ನು ಈ ಸೆಟ್‌ಗಳಲ್ಲಿಯೇ ಚಿತ್ರೀಕರಿಸಲಾಗಿದೆ ಎಂಬುದು ಚಿತ್ರತಂಡದ ಮಾಹಿತಿ.

ಅಂದಹಾಗೆ, ಈ ಸಿನಿಮಾದ ಹೆಸರು ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಅಂತಿದ್ದರೂ, ಈ ಒಂದೇ ಸಿನಿಮಾದಲ್ಲಿ ಎರಡು ಟೈಟಲ್‌ಗಳಿವೆ! ಎನ್ನುತ್ತಾರೆ ಚಿತ್ರದ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ. ಅದಕ್ಕೆ ಕಾರಣ ಈ ಚಿತ್ರದ ಕಥಾಹಂದರ. ಚಿತ್ರದ ಮೊದಲಾರ್ಧ ಬಾರ್‌ನಲ್ಲಿ ಶುರುವಾಗಿ, ಬಾರ್‌ ಸುತ್ತ ಸಾಗಿದರೆ, ದ್ವಿತೀಯಾರ್ಧ ದೇವರ ತಾಣದಲ್ಲಿ ಶುರುವಾಗಿ ಅಲ್ಲೇ ಮುಗಿಯುತ್ತದೆ. ಹಾಗಾಗಿ ʼಚಿತ್ರದ ಮೊದಲಾರ್ಧ ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಆಗಿದ್ದರೆ, ದ್ವಿತೀಯಾರ್ಧ ʼದೇವರ ತಾಣʼ ಅಂತಿದೆ. ಈ ಎರಡೂ ಹೆಸರುಗಳು ಕೂಡ ನಮ್ಮ ಸಿನಿಮಾದ ಟೈಟಲ್ಗಳು! ಆದರೆ ಸೆನ್ಸಾರ್‌ ನಿಯಮದಂತೆ, ಒಂದು ಸಿನಿಮಾಕ್ಕೆ ಒಂದೇ ಹೆಸರು ಇಡಬೇಕಾಗಿರುವುದರಿಂದ, ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಹೆಸರಿನಲ್ಲಿ ಸಿನಿಮಾ ಥಿಯೇಟರಿಗೆ ತರುತ್ತಿದ್ದೇವೆʼ ಎನ್ನುವುದು ಚಿತ್ರದ ಟೈಟಲ್‌ ಬಗ್ಗೆ ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ ನೀಡುವ ವಿವರಣೆ.

ಇದೇ ಮೊದಲ ಬಾರಿಗೆ ನಾಯಕ ನಟ ಕೋಮಲ್‌, ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಸಿನಿಮಾದಲ್ಲಿ ಒಂದು ಹಿಂದಿನ ಚಾರಿತ್ರಿಕತೆ ಮತ್ತೊಂದು ಇಂದಿನ ಆಧುನಿಕತೆ ಭಾಗವಾಗಿರುವ ಎರಡು ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದರಲ್ಲಿ ಆಸ್ಥಾನವೊಂದರ ವರ್ಣಚಿತ್ರ ಕಲಾವಿದನಾಗಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಸಿನಿಮಾ ನಿರ್ದೇಶಕನ ಪಾತ್ರದಲ್ಲಿ ಕೋಮಲ್‌ ʼಡಬಲ್‌ʼ ರೋಲ್‌ ಪ್ಲೇ ಮಾಡುತ್ತಿದ್ದಾರೆ. ಇನ್ನು ಮೇಘನಾ ರಾಜ್‌ ʼದೇವರ ತಾಣʼದಲ್ಲಿ ರಾಣಿಯಾಗಿ ಕಾಣಿಸಿಕೊಂಡರೆ, ‘ಸಂಗೀತ’ ಬಾರ್ ನಲ್ಲಿ ನಾಯಕಿಯಾಗಿ ಜೊತೆಯಾಗುತ್ತಾರೆ. ಉಳಿದಂತೆ ಪ್ರಮೋದ್‌ ಶೆಟ್ಟಿ, ಪ್ರಕಾಶ್‌ ತುಮ್ಮಿನಾಡ್‌, ವಜ್ರಧೀರ್‌ ಜೈನ್‌, ಉತ್ಸವ್‌, ಕಾರ್ತಿಕ್‌ ರಾವ್‌, ರಾಘು ರಾಮನಕೊಪ್ಪ, ಸಿರಿಜಾ, ವರ್ಧನ್,  ಕರಣ್‌ , ರಾಧಿಕ ರಾವ್ ದಿವ್ಯಶ್ರೀ, ಅಕ್ಷತಾ, ಅರಸು, ಮಹೇಶ್, ನಾಗರಾಜ್ , ಚಿತ್ರಕಲಾ, ಉಮೇಶ್‌ ಕಿನ್ನಾಳ್‌, ಮನೀಶ್‌ ಶೆಟ್ಟಿ, ರಾಧಾಕೃಷ್ಣ, ಮಹಾಬಲೇಶ್ವರ ಭಟ್ ಹೀಗೆ ದೊಡ್ಡ ಕಲಾವಿದರ ಬೃಹತ್‌ ತಾರಾಗಣವೇ ಚಿತ್ರದಲ್ಲಿದೆ.

ನಿರ್ದೇಶಕ ಸಂದೇಶ್‌ ಶೆಟ್ಟಿ ಆಜ್ರಿ ಕೂಡ ಚಿತ್ರದ ಪಾತ್ರವೊಂದಕ್ಕೆ ತೆರೆಮೇಲೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ನಾಲ್ಕು ವಿಭಿನ್ನ ಹಾಡುಗಳು, ಫೈಟ್ಸ್‌, ಕಾಮಿಡಿ, ಎಮೋಶನ್‌, ಜೊತೆಗೊಂದು ಸ್ಪಿರೀಚುಯಲ್ ಸ್ಟೋರಿ… ಹೀಗೆ ಒಂದು ಕಂಪ್ಲೀಟ್‌ ಎಂಟರ್‌ಟೈನ್ಮೆಂಟ್‌ ಸಿನಿಮಾಕ್ಕೆ ಏನೇನೂ ಇರಬೇಕೋ, ಅದೆಲ್ಲವೂ ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼನಲ್ಲಿ ಸಿಗುತ್ತದೆ ಎಂಬುದು ಚಿತ್ರತಂಡದ ಭರವಸೆಯ ಮಾತು. 

ʼಒಬ್ಬ ನಿರ್ದೇಶಕನಾಗಿ ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ನನಗೆ ಒಂದು ವಿಭಿನ್ನ ಅನುಭವ ನೀಡಿರುವ ಸಿನಿಮಾ. ನಾನು ನಿರ್ದೇಶಕರಾಗಿ ಕಂಡ ಕನಸಿಗೆ ನಿರ್ಮಾಪಕ ವಿಕಾಸ್ ಶೆಟ್ಟಿ ಅವರು ಕೇವಲ ಹಣವಲ್ಲದೆ ತನು-ಮನ ಕೂಡ ನನ್ನ ಜೊತೆಗೆ ಧಾರೆ ಎರೆದಿದ್ದಾರೆ. ಇಲ್ಲಿಯವರೆಗೆ ನಾನು ಮಾಡಿದ ಸಿನಿಮಾಗಳು ಒಂದು ಥರದ ಅನುಭವ ನೀಡಿದರೆ, ಈ ಸಿನಿಮಾ ಅವೆಲ್ಲಕ್ಕಿಂತ ಮಿಗಿಲಾದ ಬೇರೊಂದು  ಅನುಭವ ನೀಡಿದೆ. ಅದಕ್ಕೆ ಕಾರಣ ಈ ಸಿನಿಮಾದ ಕಥಾಹಂದರ, ಕಲಾವಿದರು ಮತ್ತು ತಂತ್ರಜ್ಞರು. ಒಂದು ವಿಭಿನ್ನ ಕಥೆಯ ನಿರೂಪಣೆಗೆ ದೊಡ್ಡ ಕ್ಯಾನ್ವಾಸ್‌ ಬೆಂಬಲವಿದ್ದರೆ, ಅದು ಎಷ್ಟು ಚೆನ್ನಾಗಿ ಮೂಡಿಬರಬಹುದು ಎಂಬುದಕ್ಕೆ ಖಂಡಿತವಾಗಿಯೂ ನಮ್ಮ ʼಸಂಗೀತ ಬಾರ್‌ ಅಂಡ್‌ ರೆಸ್ಟೋರೆಂಟ್‌ʼ ಸಿನಿಮಾ ನಿದರ್ಶನವಾಗಿ ನಿಲ್ಲುತ್ತದೆ.

ಕನ್ನಡದ ಚಿತ್ರರಂಗದ ಮಟ್ಟಿಗೆ ಇದೊಂದು ವಿಭಿನ್ನ ಚಿತ್ರವಾಗಿ ನಿಲ್ಲುತ್ತದೆ ಎಂಬ ಅಚಲ ವಿಶ್ವಾಸ ನಮ್ಮ ಇಡೀ ಚಿತ್ರತಂಡಕ್ಕಿದೆʼ ನಿರ್ಮಾಪಕ ವಿಕಾಸ ಶೆಟ್ಟಿಯವರು ನನ್ನ ಜೊತೆಗೆ ಇದು ಎರಡನೇ ಸಿನಿಮಾಕ್ಕೆ ಬಂಡವಾಳ ಹಾಕಿದ್ದಾರೆ, ಅವರ ನಂಬಿಕೆ ಉಳಿಸಿಕೊಂಡಿದ್ದೇನೆ ಎಂಬ ಆತ್ಮವಿಶ್ವಾಸ ನನ್ನಲ್ಲಿದೆ.

Leave a Reply

Your email address will not be published. Required fields are marked *

×

Hello!

Contact our editor through WhatsApp or email us kannadacinemaloka@gmail.com

× Contact Editor