ಚಿತ್ರ – ಬಿಳಿ ಚುಕ್ಕಿ ಹಳ್ಳಿ ಹಕ್ಕಿ
ವಿಮರ್ಶೆ – ಮಂಜುರಾಜ್ ಸೂರ್ಯ
ನಿರ್ಮಾಪಕರು – ಮಹೇಶ್ ಗೌಡ
ನಿರ್ದೇಶನ – ಮಹೇಶ್ ಗೌಡ
ಛಾಯಾಗ್ರಹಣ – ಕಿರಣ್ ಸಿ. ಹೆಚ್. ಎಂ.
ಸಂಗೀತ – ರಿಯೋ ಆಂಟನಿ
Rating -3/5
ಕಲಾವಿದರು :- ಜಹಂಗೀರ್, ಮಹೇಶ್ ಗೌಡ, ಕಾಜಲ್ ಕುಂದರ್, ವೀಣ ಸುಂದರ್, ಲಕ್ಷ್ಮಿ ಸಿದ್ದಯ್ಯ, ರವಿ ಭಟ್, ಮುಂತಾದವರು.

ಬಿಳಿ ಚುಕ್ಕಿಯ ಸುತ್ತಾ ಜೋಡಿ ಹಕ್ಕಿಗಳ ಹಾಡು ಪಾಡು.
ಇದೊಂದು ಕೇವಲ ಮನರಂಜನೆಯ ಚಿತ್ರವಲ್ಲ ಒಂದಷ್ಟು ನೊಂದ ಮನುಸ್ಸುಗಳಿಗೆ ಬೆಳಕು ಚೆಲ್ಲುವಂತ ಚಿತ್ರ.
ವಿಟಿಲಿಗೋ (ತೊನ್ನು) ಚರ್ಮದ ಬಣ್ಣಕ್ಕೆ ಸಂಬಂಧಿಸಿದ
ಕಥೆಯನ್ನು ನಿರ್ದೇಶಕ ಕಮ್ ನಟ ಮಹೇಶ್ ಗೌಡ ಅರ್ಥಪೂರ್ಣವಾಗಿ ಹೆಣೆದಿದ್ದಾರೆ.
ಸ್ವತಃ ನಿರ್ದೇಶಕರೇ ಈ ಸಮಸ್ಯೆಯನ್ನು ಎದುರಿಸುತ್ತಿರುವುದರಿಂದ ತಮಗಾದ ಅವಮಾನ, ನೋವು, ಆತಂಕ ನಿರಾಶೆಯನ್ನು ಕಟ್ಟಿಕೊಡುವುದರ ಜೊತೆಗೆ ಲೀಲಾಜಾಲವಾಗಿ ಅಭಿನಯಿಸಿದ್ದಾರೆ. ಹಾಗೂ ಸಮಾಜಕ್ಕೆ ಸಂದೇಶವನ್ನು ನೀಡುವ ಪ್ರಯತ್ನ ಮಾಡಿದ್ದಾರೆ.
ಮಹಿರಾ ಖ್ಯಾತಿಯ ಮಹೇಶ್ ಗೌಡ ಈ ಚಿತ್ರವನ್ನು ನಿರ್ಮಿಸಿ, ನಿರ್ದೇಶನದ ಜೊತೆಗೆ ಕಥಾ ನಾಯಕನಾಗಿ ಪಾತ್ರ ನಿಭಾಯಿಸಿದ್ದಾರೆ.

ಕಥಾ ಸಾರಂಶ – ಅವನೊಬ್ಬ ತೊನ್ನು ಸಮಸ್ಯೆಯಿಂದಾಗಿ ಯಾರು ಹೆಣ್ಣು ಕೊಡದೇ ವಯಸ್ಸು 30 ಆದರೂ ಮದುವೆಯಾಗದೆ ಇರುತ್ತಾನೆ.
ಅವನ ತಾಯಿಗೆ ಮಗ ರಾಜಕುಮಾರ ಇದ್ದಂತೆ ಅವನಿಗೇನಾಗಿದೆ ಹೇಗಾದರು ಸರಿ ಇವನಿಗೆ ರಾಜಕುಮಾರಿಯಂತ ಹುಡುಗಿ ತಂದು ಮದುವೆ ಮಾಡುತ್ತೇನೆ ಎಂಬ ಹಠ.

ಅವಳು ಅಂದು ಕೊಂಡಂತೆ ಒಂದು ಹುಡುಗಿಯನ್ನು ನೋಡಿ ಮದುವೆ ಮಾಡಿಸಲು ಮುಂದಾಗುತ್ತಾಳೆ. ಆ ಹುಡುಗಿ ಇವನನ್ನು ಮದುವೆಯಾಗಲು ಒಪ್ಪುತ್ತಾಳೆ ನಂತರ ಸೃಷ್ಠಿಯಾಗುವ ಗೊಂದಲ, ವೈಮನಸ್ಸು, ಕೋಪ, ಜಗಳ ಸಮಾಜದ ಕೆಂಗಣ್ಣು, ಹೊಟ್ಟೆ ಉರಿ ಈ ಎಲ್ಲದರ ನಡುವೆ ಈ ಜೋಡಿಗಳು ಏನಾಗುತ್ತಾರೆ ಎನ್ನುವುದೇ ಚಿತ್ರದ ಕಥೆ.
ಇಲ್ಲಿ ನಾಯಕಿಯಾಗಿ ಕಾಜಲ್ ಕುಂದರ್ ತುಂಬಾ ಚನ್ನಾಗಿ ಅಭಿನಯಿಸುವುದರ ಮೂಲಕ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ.

ಈಗಾಗಲೇ “ಪೆಪ್ಪೆ” ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದ ಕಾಜಲ್ ಇಲ್ಲಿ ಟೆಡಿಷನಲ್ ಗೆಟಪ್ ನಲ್ಲಿ ಈಡೀ ಚಿತ್ರದಲ್ಲಿ ಚನ್ನಾಗಿ ಕಾಣಿಸಿಕೊಂಡಿದ್ದಾರೆ.
ಇನ್ನು ಚಿತ್ರದ ಜೀವಾಳ ಮತ್ತು ಆಧಾರಸ್ಥಂಭ ನಟ ಜಹಂಗೀರ್
ಕಥಾ ನಾಯಕನ ಸೋಧರ ಮಾವನ ಪಾತ್ರದಲ್ಲಿ ಅದೆಷ್ಟು ನೈಜವಾಗಿ ನಟಿಸಿದ್ದಾರೆ ಎಂದರೆ ಅದು ಅಭಿನಯವೇ ಅಲ್ಲ ನಿಜವಾಗಿ ನಮ್ಮ ಮುಂದೆಯೇ ವ್ಯಕ್ತಿಯೊಬ್ಬ ಮಾತಾಡುತಿದ್ದಾನೆ ಎನ್ನುವಷ್ಟು ಸಹಜವಾಗಿ ಪಾತ್ರದೊಳಗೆ ಪರಕಾಯ ಮಾಡಿದ್ದಾರೆ. ಅವರ ಈ ವರೆಗಿನ ಸಿನಿ ಪಯಣದಲ್ಲಿ ಈ ಚಿತ್ರ ನೆನಪಿನಲ್ಲಿ ಉಳಿಯುತ್ತದೆ. ಜೊತೆಗೆ ನವಿರಾದ ನಗು ಅವರ ಸಂಭಾಷಣೆ ಕಚಗುಳಿ ಇಡುತ್ತದೆ.

ರವಿ ಭಟ್ ಕೂಡ ತುಂಬಾ ಸಹಜ ಅಭಿನಯದೊಂದಿಗೆ ಹಾಗೂ ಮಗಳ ಮೇಲಿನ ಕಾಳಜಿ ಮತ್ತು ನಂಬಿಕೆಯ ಮಾತುಗಳು ಆಡುತ್ತಲೇ ತಮ್ಮ ಮಡದಿಯ ಅತೀಕಾಳಜಿಯ ತಪ್ಪುಗಳನ್ನು ನೇರಾ ನೇರ ಖಂಡಿಸುವ ಪಾತ್ರ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ.

ಚಿತ್ರದಲ್ಲಿ ಸಂಭಾಷಣೆ ತುಂಬಾ ಚನ್ನಾಗಿದೆ.
ನಾಯಕಿಯ ಒಬ್ಬ ಟಿಪಿಕಲ್ ತಾಯಿಯಾಗಿ ವೀಣಾ ಸುಂದರ್ ಪಾತ್ರ ಪೋಷಣೆ ಚನ್ನಾಗಿದೆ.
ಇಲ್ಲಿ ಸಮಾಜದಲ್ಲಿ ವಿಭಿನ್ನ ವಾಗಿ ಯೋಚಿಸುವ, ನಡೆದುಕೊಳ್ಳುವ ಇಬ್ಬರು ತಾಯಿಯರ ಪಾತ್ರವನ್ನು ನಿರ್ದೇಶಕರು ಚನ್ನಾಗಿ ಕಟ್ಟಿಕೊಟ್ಟಿದ್ದಾರೆ.

ಲಕ್ಷ್ಮಿ ಸಿದ್ದಯ್ಯ ಮತ್ತು ವೀಣಾ ಸುಂದರ್ ಎರಡು ಕೊರೆಗಳಲ್ಲಿ ತಮ್ಮದೇ ಆದ ದೃಷ್ಟಿಕೋನದಲ್ಲಿ ತಮ್ಮ ಮಕ್ಕಳನ್ನು ಸಮಜಾಯಿಸಿಕೊಳ್ಳುವ ಹಾಗೂ ಮೆಚ್ಚಿಕೊಳ್ಳುವ ಭರದಲ್ಲಿ ಇನ್ನೊಬ್ಬರಿಗೆ ತೊಂದರೆಯಾದರೂ ಲೆಕ್ಕಿಸದೇ ತಮ್ಮ ಕರುಳ ಬಳ್ಳಿಯ ಮೇಲಿನ ವ್ಯಾಮೋಹ ವನ್ನು ಪ್ರತಿಪಾದಿಸಿದ್ದಾರೆ. ನಾಯಕನ ತಾಯಿಗೆ ತನ್ನ ಮಗನಿಗೆ ತೊನ್ನು ಬಂದಿದ್ದರು ಸರಿ ಅವನಿಗೊಂದು ಸುಂದರ ಹುಡುಗಿಯನ್ನು ಸೊಸೆ ಮಾಡಿಕೊಳ್ಳಬೇಕು ಎನ್ನುವ ಆಸೆ, ನಾಯಕಿಯ ತಾಯಿಗೆ ತನ್ನ ಮಗಳು ಎಷ್ಟು ಸುಂದರವಾಗಿದ್ದಾಳೆ ಅವಳಿಗೆ ಇಂತಹ ಗಂಡ ಬೇಕ ಹೇಗಾದರು ಸರಿ ಅವಳಿಗೆ ಸುಂದರ ಹುಡುಗನ ಜೊತೆ ಮತ್ತೊಂದು ಮದುವೆ ಮಾಡಬೇಕು ಎನ್ನುವ ಧಾವಂತ ಈ ಎರಡನ್ನು ಚಿತ್ರದಲ್ಲಿ ನೋಡಬಹುದು.
ನಾಯಕಿಯಾಗಿ

ಕಿರಣ್ ಸಿ.ಹೆಚ್.ಎಂ. ಛಾಯಾಗ್ರಹಣ ಚನ್ನಾಗಿ ಮೂಡಿಬಂದಿದ್ದು,
ರಿಯೋ ಆಂಟನಿ ಸಂಗೀತ ಮತ್ತು ಹಿನ್ನೆಲೆ ಸಂಗೀತ ಚನ್ನಾಗಿದೆ.
ಪ್ರತಾಪ್ ನಾರಾಯಣ್ ಮತ್ತು ಮಹೇಂದ್ರ ಗೌಡ ಸಾಹಿತ್ಯ ಈ ಚಿತ್ರದ ಪ್ರಮುಖ ಜೀವಾಳ ಎನ್ನಬಹುದು.
ಒಟ್ಟಿನಲ್ಲಿ ಸಾಮಾಜಿಕ ಕಾಳಜಿಯನ್ನು ನಗಿಸುತ್ತಾ ಹೇಳುವ ಪ್ರಯತ್ನ ಈ ಚಿತ್ರದಲ್ಲಿದೆ.











