Thayavva movie review. ತಾಯವ್ವ ಚಿತ್ರ ವಿಮರ್ಶೆ. “ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಸಿಡಿದೆದ್ದ ತಾಯವ್ವ”
ಚಿತ್ರ ವಿಮರ್ಶೆ :- ತಾಯವ್ವ
Rating – 3/5.
ಚಿತ್ರ: “ತಾಯವ್ವ
ನಿರ್ಮಾಣ: ಅಮರ ಫಿಲಂಸ್
ನಿರ್ದೇಶನ: ಸಾತ್ವಿಕ್ ಪವನ್
ಸಂಗೀತ : ಅನಂತ್ ಆರ್ಯನ್
ಛಾಯಾಗ್ರಹಣ : ಸಾತ್ವಿಕ್ ಪವನ್
ಕಲಾವಿದರು :- ಗೀತಪ್ರಿಯಾ, ಮಹೇಶ್, ಮುಂತಾದವರು.
ಇಂದಿನ ಯಾಂತ್ರಿಕ ಯುಗದಲ್ಲಿ ನಗರ ಜೀವನಕ್ಕೆ ಒಗ್ಗಿಕೊಂಡು ಕಾಂಕ್ರಿಟ್ ಕಾಡಿನಲ್ಲಿ ಜೀವಿಸುತ್ತಿರುವವರಿಗೆ ತಾಯವ್ವ ಚಿತ್ರದ ಹಳ್ಳಿ ಜೀವನದ ಪರಿಸರದ ಸವಿಯನ್ನು ಸವಿಯಬಹುದು.
ಶತ ಶತಮಾನಗಳು ಕಳೆದರು, ವಿಜ್ಞಾನ ಎಷ್ಟೇ ಮುಂದುವರೆದಿದ್ದರು ಇನ್ನೂ ಅನೇಕ ಹಳ್ಳಿ, ಹಾಗೂ ನಗರಗಳಲ್ಲಿ ಮೌಡ್ಯ, ಹೆಣ್ಣು, ಗಂಡು ಎನ್ನುವ ತಾರತಮ್ಯ ಕಡಿಮೆಯಾಗಿಲ್ಲ ಎನ್ನುವುದಕ್ಕೆ ತಾಯವ್ವ ಚಿತ್ರ ಸಾಕ್ಷಿಯಾಗಿದೆ.

ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ, ಗಂಡು ಹೆಣ್ಣಿನ ತಾರತಮ್ಯಗಳ ಅನಿಷ್ಟತೆಯ ವಿರುದ್ಧ ಹೋರಾಡುವ ಸುಲಗಿತ್ತಿ ತಾಯವ್ವ ನ ಕಥೆ , ಹಾಗೂ ಪುರುಷ ಸಮಾಜಕ್ಕೆ ಸವಾಲೊಡ್ಡುವ ಒಂದು ಗ್ರಾಮೀಣ ಪ್ರದೇಶದ ಗಂಭೀರ ಕಥೆಯ ಚಿತ್ರ ತಾಯವ್ವ.
ನಿರ್ದೇಶಕ ಸಾತ್ವಿಕ್ ಪವನ್ ಕಥೆಯನ್ನು ಚನ್ನಾಗಿ ನಿರೂಪಿಸಿದ್ದಾರೆ.
ಶಾಲೆಯೊಂದರಲ್ಲಿ ಒಂದು ಹೆಣ್ಣು ಮಗು ತಾನು ಗಂಡಾಗಿ ಹುಟ್ಟಬೇಕಿತ್ತು ಎನ್ನುವ ಅಳಲಿನೊಂದಿಗೆ ತೆರೆದು ಕೊಳ್ಳುವ ಗಂಡು ಹೆಣ್ಣಿನ ನಡುವಿನ ತಾರತಮ್ಯದ ಕಥೆ. ಹಳ್ಳಿಯೊಂದರಲ್ಲಿ ಹೆಣ್ಣು ಮಗುವಿನ ಜನನದ ಕಥೆಯೊಂದಿಗೆ ಚಿತ್ರವನ್ನು ಮುಕ್ತಾಯಗೊಳಿಸಿದ್ದಾರೆ.

ಅದೊಂದು ಹಳ್ಳಿ ಆ ಹಳ್ಳಿಯಲ್ಲಿ ಎಲ್ಲರಿಗೂ ಚಿರಪರಿಚಿತ ವಯಸ್ಸಾದ ಹೆಂಗಸು ತಾಯವ್ವ. ಇವಳು ಆ ಊರಿನ ನಡೆದಾಡುವ ಪಾರಂಪರಿಕ ನಾಟಿ ವೈದ್ಯೆ. ಆ ಊರಿನ ಹೆಣ್ಣುಮಕ್ಕಳಿಗೆ ಯಾವುದೇ ಆಸ್ಪತ್ರೆಗಳ ಸಹಾಯ ವಿಲ್ಲದೆ ತಾನೆ ಮನೆಯಲ್ಲಿ ಸುಲಭವಾಗಿ ಹೆರಿಗೆ ಮಾಡಿಸುವ ಸೂಲಗಿತ್ತಿ. ಈ ಪಾತ್ರವನ್ನು ನಿರ್ಮಾಪಕಿ ಕಮ್ ನಟಿಯಾಗಿ ಅಭಿನಯಿಸಿರುವುದು. ಗೀತಪ್ರಿಯಾ ರವರು. ಆ ಊರಿನ ಬಾಲ್ಯ ವಿವಾಹ, ಹೆಣ್ಣುಭ್ರೂಣ ಹತ್ಯೆಯಂತಹ ವಿಷಯಗಳನ್ನು ಬಹಿಷ್ಕರಿಸಿ ಕೆನ್ನೆಗೆ ಬಾರಿಸಿ ಬುದ್ದಿ ಕಲಿಸುವಂತ ಪಾತ್ರವನ್ನು ನಿಭಾಯಿಸಿದ್ದಾರೆ.

ಈ ಪಾತ್ರಕ್ಕೆ ಮೊದಲಬಾರಿಗೆ ಬಣ್ಣ ಹಚ್ಚಿರುವ ಗೀತಪ್ರಿಯಾ ರವರು ಬಹಳ ಕಷ್ಟಪಟ್ಟು ಇಷ್ಟಪಟ್ಟು ಅಭಿನಯಿಸಿರುವುದು ತೆರೆಯ ಮೇಲೆ ಕಾಣುತ್ತದೆ. ಆದರೆ ತಾಯವ್ವ ಯಾರು ಇಲ್ಲದ ಏಕಾಂಗಿ, ನಿರ್ದೇಶಕರು ಅಥವಾ ನಿರ್ಮಾಪಕರು ತಾಯವ್ವನ ಅಲಂಕಾರ, ಬಟ್ಟೆಗಳ ಬಗ್ಗೆ ಗಮನ ಹರಿಸಬೇಕಿತ್ತು ಪಾತ್ರಕ್ಕೆ ತಕ್ಕಂತೆ ಅಲಂಕಾರವಿಲ್ಲ ತುಂಬಾ ರಿಚ್ಚಾಗಿ ತೋರಿಸುವ ಅಗತ್ಯವಿರಲಿಲ್ಲ ಎನ್ನಿಸುತ್ತದೆ. ಒಬ್ಬ ಅಲೆಮಾರಿ, ನಿರ್ಗತಿಕ ಹೆಂಗಸಿಗೆ ದುಬಾರಿ ಬಟ್ಟೆ, ತುಟಿಗೆ ಬಣ್ಣ, ಮುಖಕ್ಕೆ ಅಗತ್ಯಕ್ಕಿಂತ ಹೆಚ್ಚು ಮೇಕಪ್ ಬೇಕಿರಲಿಲ್ಲ. ಪಾತ್ರಕ್ಕೆ ಜೀವ ತುಂಬ ಬೇಕಾದ್ದು ಪಾತ್ರದಾರಿಯ ಕರ್ತವ್ಯ ಎನಿಸುತ್ತದೆ.

ಇಲ್ಲಿ ನಿರ್ದೇಶಕರೇ ಕ್ಯಾಮರಾ ಕೆಲಸ ಮಾಡಿರುವುದು ಶ್ಲಾಘನೀಯ. ಹಳ್ಳಿಯ ಪರಿಸರವನ್ನು ಚನ್ನಾಗಿ ಸಿಟಿಯಲ್ಲಿ ಬೆಳೆದ ಹುಡುಗಿ ಬೇಸಿಗೆ ರಜಕ್ಕೆ ಹಳ್ಳಿಗೆ ಬಂದಾಗ ಅವಳ ಮೂಲಕ ಹಳ್ಳಿಯ ಸೊಬಗನ್ನು ಚನ್ನಾಗಿ ತೋರಿಸಿದ್ದಾರೆ.
ಇದು ಒಂದುತರ ಮಕ್ಕಳಿಂದ ದೊಡ್ಡವರ ತಪ್ಪುಗಳನ್ನು ತಿದ್ದುವ ಕೆಲಸ ಕೂಡ ಹಾಗಿದೆ.

ಹಾಗಂತ ಇದು ಮಕ್ಕಳ ಸಿನಿಮಾ ಅಲ್ಲ, ದೊಡ್ಡವರ ತಪ್ಪಿನಿಂದ ಮಕ್ಕಳ ಮನಸ್ಸಿನ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎನ್ನುವುದೇ ತಾಯವ್ವನ ಕಥೆ.
ಅನಂತ್ ಆರ್ಯನ್ ಸಂಗೀತ ಚನ್ನಾಗಿ ಮೂಡಿ ಬಂದಿದೆ. ಚಿತ್ರದ ಕಥಾ ನಾಯಕಿ ಗೀತಪ್ರಿಯಾ ರವರೇ ಚಿತ್ರದ ತುಣುಕು ಹಾಡುಗಳನ್ನು ಹಾಡಿರುವುದು ವಿಶೇಷ.
ಚಿತ್ರದಲ್ಲಿ ಮಕ್ಕಳು ಚನ್ನಾಗಿ ಅಭಿನಯಿಸಿದ್ದಾರೆ, ಹಾಗೆಯೇ ಲೂಸ್ ಮಾದ ಯೋಗಿಯವರ ಸಹೋದರ ಮಹೇಶ್ ಕೂಡ ನಟಿಸುವುದರ ಮೂಲಕ ಚಿತ್ರದ ಭಾಗವಾಗಿದ್ದಾರೆ.

ಒಟ್ಟಿನಲ್ಲಿ ಬರೀ ಹೊಡಿ ಬಡಿ, ಪ್ರೀತಿ ಪ್ರೇಮದಂತಹದ ಸಿನಿಮಾಗಳನ್ನು ನೋಡಿ ಬೋರಾದವರಿಗೆ ತಾಯವ್ವ ಮನಸ್ಸಿಗೆ ಇಷ್ಟವಾಗಬಹುದು.